ಇನ್ಸ್ಪೆಕ್ಟರ್ ಮಗನ ಸೈಕಲ್ ಕದ್ದು ಸಿಕ್ಕಿಬಿದ್ದ ಕಳ್ಳರು; ಕಳ್ಳರ ಹಿಸ್ಟರಿ ಕೇಳಿ ಬೆಚ್ಚಿಬಿದ್ದ ಪೊಲೀಸರು!
ಮಂಗಳೂರು, ಆಗಸ್ಟ್ 31: ಆ ಮೂವರು ಅದಾಗಲೇ ನಶೆಯ ಸಾಮ್ರಾಜ್ಯದ ದಾಸರಾಗಿದ್ದರು. ಮದ್ಯ ಇಲ್ಲದಿದ್ದರೆ ಕೈಕಾಲು ಅಲುಗಾಡಲ್ಲ ಅನ್ನುವಷ್ಟು ಕುಡಿತದ ಚಟ ಹೊಂದಿದ್ದರು. ಒಂದು ದಿನ ಗಾರೆ ಕೆಲಸಕ್ಕೆ ಹೋಗಿ ಎರಡು ದಿನ ಕುಡಿಯುವ ಜೀವನ ಶೈಲಿ ಅವರದ್ದಾಗಿತ್ತು. ಕೈಯಲ್ಲಿ ಹಣ ಇಲ್ಲದಾಗ ಸಣ್ಣಪುಟ್ಟ ಕಳ್ಳತನ ಮಾಡಿ ಕುಡಿಯೋದು ಇವರ ಹವ್ಯಾಸ.
ಕಷ್ಟಪಡದೇ ಏನನ್ನು ಕದಿಯಬಹುದು ಅಂತಾ ಯೋಚನೆ ಮಾಡಿದ ಇವರಿಗೆ ಹೊಳೆದದ್ದೇ ಸೈಕಲ್ ಕದಿಯುವ ಉಪಾಯ. ಸೈಕಲ್ ಕದ್ದು ಮಾರಾಟ ಮಾಡಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಮೂವರು, ಆಗಸ್ಟ್ 26ರಂದು ಪೊಲೀಸ್ ಇನ್ಸ್ಪೆಕ್ಟರ್ ಮಗನ ಸೈಕಲ್ ಕದ್ದು ಗ್ರಹಚಾರ ಮೈಗೆ ಅಂಟಿಸಿಕೊಂಡಿದ್ದರು. ಹೀಗೆ ತನಿಖೆ ನಡೆಸಿದ ಪೊಲೀಸರು ಈ ಕಳ್ಳರ ಬಗ್ಗೆ ಬಹಳ ಸ್ವಾರಸ್ಯಕಾರಿ ಸಂಗತಿಗಳನ್ನು ಬಯಲಿಗೆಳೆದಿದ್ದಾರೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹನುಮಂತ, ಶಿವಮೊಗ್ಗ ಜಿಲ್ಲೆಯ ಮಂಜುರಾಜ್, ಮಂಗಳೂರು ತಾಲೂಕಿನ ಕುತ್ತಾರು ನಿವಾಸಿ ಶಂಕರ ಶೆಟ್ಟಿ ಪೊಲೀಸರು ಬಂಧಿಸಿದ ಸೈಕಲ್ ಕಳ್ಳರು. ಮಂಗಳೂರು ನಗರದ ಅಪಾರ್ಟ್ಮೆಂಟ್ ಮನೆಯ ಎದುರುಗಡೆ ನಿಲ್ಲಿಸಿದ್ದ ಸೈಕಲ್ ರಾತ್ರಿ ಕಳೆದು ಬೆಳಗಾಗುವುದರೊಳಗೆ ಮಂಗಮಾಯ ಆಗುವುದಕ್ಕೆ ಈ ಮೂವರ ಕೃಪಾಕಟಾಕ್ಷ ತುಂಬಾ ಇತ್ತು ಅನ್ನುವುದನ್ನು ಸದ್ಯ ಮಂಗಳೂರು ಪೊಲೀಸರು ಬಹಿರಂಗಪಡಿಸಿದ್ದಾರೆ.
ಕಳ್ಳರು ಗಾರೆ ಕೆಲಸಕ್ಕೆ ಹೋಗುವವರು
ಈ ಮೂವರೂ ಮಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಗಾರೆ ಕೆಲಸಕ್ಕೆ ಹೋಗುವವರು. ವೃತ್ತಿ ಗಾರೆ ಕೆಲಸ, ಆದರೆ ಪ್ರವೃತ್ತಿ ಅಂತಾ ಕುಡಿತ ಮತ್ತು ಇಸ್ಪೀಟ್ ಅಭ್ಯಾಸ ಮಾಡಿಕೊಂಡಿದ್ದರು. ಲಾಕ್ಡೌನ್ ವೇಳೆ ಕೆಲಸ ಇಲ್ಲದೇ, ಕುಡಿಯುವುದಕ್ಕೆ ಹಣ ಇಲ್ಲದೇ ಅಕ್ಷರಶಃ ಪರದಾಡಿದ್ದರು. ಹಣ ಇಲ್ಲದೇ ಕಂಗಾಲಾಗಿದ್ದ ಇವರು ಸೈಕಲ್ ಕದ್ದು ಮಾರಾಟ ಮಾಡುವ ಉದ್ದೇಶ ಹೊಂದಿದ್ದರು. ಅದೇ ರೀತಿ ಹಲವು ಸೈಕಲ್ಗಳನ್ನು ಮಾರಿದ್ದರು.
ಉರ್ವ ಠಾಣೆಯ ಇನ್ಸ್ಪೆಕ್ಟರ್ ಷರೀಫ್ ಮಗನ ಸೈಕಲ್ ಕಳವು
ಆಗಸ್ಟ್ 26ರ ರಾತ್ರಿ ಮಂಗಳೂರಿನ ಉರ್ವ ಠಾಣೆಯ ಇನ್ಸ್ಪೆಕ್ಟರ್ ಷರೀಫ್ ಮಗನ ಸೈಕಲ್ನ್ನು ಲಪಟಾಯಿಸಿದ್ದರು. ಅಪಾರ್ಟ್ಮೆಂಟ್ನ ಪಾರ್ಕಿಂಗ್ ಲಾಟ್ನಿಂದ ಸೈಕಲ್ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಪೊಲೀಸಪ್ಪನ ಮಗನ ಸೈಕಲ್ ಕದ್ದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ತುರ್ತಾಗಿ ಚಿಕಿತ್ಸೆಗೆ ಹಣ ಬೇಕು ಅಂತಾ ಮಾರುತ್ತಿದ್ದರು
ಆರೋಪಿಗಳ ವಿಚಾರಣೆ ಮಾಡುತ್ತಿದ್ದಂತೆಯೇ ಈವರೆಗೆ ತಾವು ಒಂಭತ್ತು ಸೈಕಲ್ ಕದ್ದಿರುವುದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಅಪಾರ್ಟ್ಮೆಂಟ್ ಅಥವಾ ಮನೆಯ ಎದುರಿನಲ್ಲಿ ಇರಿಸಲಾಗಿದ್ದ ಸೈಕಲ್ನ್ನು 500- 1000 ರೂಪಾಯಿಗೆ ಇವರು ಮಾರಾಟ ಮಾಡುತ್ತಿದ್ದರು. ಮಂಗಳೂರಿನ ಕೆಲ ಭಾಗ ಮತ್ತು ಸುರತ್ಕಲ್ ಸೇರಿದಂತೆ ಸ್ಥಳೀಯ ಜನರಿಗೇ ಸೈಕಲ್ ಮಾರಾಟ ಮಾಡಿ, ಮನೆಯಲ್ಲಿ ಹುಷಾರಿಲ್ಲ, ತುರ್ತಾಗಿ ಚಿಕಿತ್ಸೆಗೆ ಹಣ ಬೇಕು ಅಂತಾ ಸುಳ್ಳು ಹೇಳಿ ಹಣ ಪಡೆಯುತ್ತಿದ್ದರು. ಹೀಗೆ ಸೈಕಲ್ನ್ನು ಕದ್ದು ಮಾರುತ್ತಾ ಬಂದ ಹಣದಲ್ಲಿ ಕುಡಿದು, ಇಸ್ಪೀಟ್ ಆಡಿ ಎಂಜಾಯ್ ಮಾಡುತ್ತಿದ್ದರು.
ಇವರು ಗರಿಷ್ಠ 20,000 ರೂಪಾಯಿಯ ಸೈಕಲ್ ಕಳ್ಳತನ ಮಾಡಿದ್ದಾರೆ ಅಂತಾ ಹೇಳಲಾಗಿದೆ. ಕದ್ದ 9 ಸೈಕಲ್ನ ಒಟ್ಟು ಮೌಲ್ಯ ಸುಮಾರು ಒಂದೂವರೆ ಲಕ್ಷ ಎಂದು ಅಂದಾಜಿಸಲಾಗಿದೆ.
ಎಲ್ಲಾ ವಿಚಾರವನ್ನೂ ಗಂಭಿರವಾಗಿ ಪರಿಗಣಿಸಬೇಕು
ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, "ಸಾರ್ವಜನಿಕರು ಸೈಕಲ್ ಕಳ್ಳತನದ ಬಗ್ಗೆ ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ. ಸೈಕಲ್ ಕಳ್ಳತನವಾದ ದಿನ ಠಾಣೆಗೆ ಬಂದು ಪೊಲೀಸರಿಗೆ ಮಾಹಿತಿ ನೀಡಿ, ದೂರು ನೀಡದೆ ಹೋಗುತ್ತಿದ್ದರಿಂದ ಬೇರೆ ಪ್ರಕರಣಗಳು ಬೆಳಕಿಗೆ ಬಂದಿರಲಿಲ್ಲ. ಸಾರ್ವಜನಿಕರು ಎಲ್ಲಾ ವಿಚಾರವನ್ನೂ ಗಂಭಿರವಾಗಿ ಪರಿಗಣಿಸಬೇಕು. ಮನೆಯ ಮುಂದೆ ಸಿಸಿ ಕ್ಯಾಮೆರಾ ಹಾಕಬೇಕು,'' ಅಂತಾ ಮನವಿ ಮಾಡಿದ್ದಾರೆ.
Recommended Video