ಮಂಗಳೂರು; ಪಿಎಫ್ಐ ಕಚೇರಿಗಳನ್ನು ಸೀಲ್ ಮಾಡಿದ ಪೊಲೀಸರು
ಮಂಗಳೂರು, ಸೆಪ್ಟೆಂಬರ್ 29: ಕೇಂದ್ರ ಸರಕಾರ ದೇಶದಾದ್ಯಂತ ಪಿಎಫ್ಐ ಸಂಘಟನೆಗೆ ನಿಷೇಧ ಹೇರಿರುವ ಹಿನ್ನಲೆಯಲ್ಲಿ ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ಐ ಜಿಲ್ಲಾ ಕಚೇರಿಗೆ ಬೀಗ ಜಡಿಯಲಾಗಿದೆ. ರಾಜ್ಯ ಸರ್ಕಾರದ ಸುತ್ತೋಲೆಯಂತೆ ಮಂಗಳೂರು ಪೊಲೀಸ್ ಕಮೀಷನರ್ ನೇತೃತ್ವದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಯ ಸುಮಾರು ಹತ್ತಕ್ಕೂ ಅಧಿಕ ಅಧಿಕಾರಿ ಸಿಬ್ಬಂದಿಗಳ ತಂಡ ಕಚೇರಿಯಲ್ಲಿರುವ ದಾಖಲೆ, ಕರಪತ್ರಗಳನ್ನು ವಶಪಡಿಸಿಕೊಂಡು ಕಚೇರಿ ಸೀಲ್ ಮಾಡಿದ್ದಾರೆ. ನಗರದೊಳಗಿದ್ದ ಮೂರು ನಿಷೇಧಿತ ಸಂಘಟನೆಯ ಕಚೇರಿಗಳನ್ನೂ ಸೀಲ್ ಮಾಡಲಾಗಿದೆ.
ಮಂಗಳೂರಿನ ಅತೀ ಸೂಕ್ಷ್ಮ ಪ್ರದೇಶದಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಬಳಿಯ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ಐ ಕಚೇರಿಗೆ ಪೊಲೀಸರು ಬೀಗ ಜಡಿದಿದ್ದಾರೆ. ಬುಧವಾರ ಸಂಜೆಯ ವೇಳೆಗೆ ಸಾಕಷ್ಟು ಪೊಲೀಸ್ ಭದ್ರತೆಯೊಂದಿಗೆ ಪಿಎಫ್ಐ ಕಚೇರಿಗೆ ಬೀಗ ಹಾಕಲಾಗಿದೆ. ಎಸ್ಡಿಪಿಐ ಜಿಲ್ಲಾ ಕಚೇರಿ ಮತ್ತು ಪಿಎಫ್ಐ ಕಚೇರಿಗೆ ಒಂದೇ ಕಟ್ಟಡದಲ್ಲಿ ಆಸುಪಾಸಿನಲ್ಲಿ ಇರುವುದರಿಂದ ಪೊಲೀಸರು ಮೊದಲಿಗೆ ಕಚೇರಿ ಬಾಗಿಲು ತೆರೆಯಲು ಪರದಾಡಿದ ಘಟನೆಯೂ ಕಂಡು ಬಂದಿತು.
ಅವರು ಕೇಳಿದ ದಾಖಲೆ ಕೊಟ್ಟರೂ, ಮತ್ತೆ ಪರಿಶೀಲನೆಗೆ ಬಂದಿದ್ದಾರೆ; ಡಿಕೆ ಶಿವಕುಮಾರ್
ಕಳೆದ ಎರಡು ದಿನಗಳಿಂದ ಪಿಎಫ್ಐ ಕಚೇರಿಗೆ ಬೀಗ ಹಾಕಲಾಗಿದ್ದು, ಪಿಎಫ್ಐ ನಿಷೇಧದ ಹಿನ್ನಲೆ ಕಚೇರಿ ಬೀಗ ಒಡೆದು ತಪಾಸಣೆ ನಡೆಸಿದ ಪೊಲೀಸರು ದಾಖಲೆ ಪತ್ರಗಳು, ಡಿಜಿಟಲ್ ದಾಖಲೆಗಳನ್ನು ವಶಕ್ಕೆ ಪಡೆದರು ಕಚೇರಿಗೆ ಸೀಲ್ ಹೊಡೆದರು.
ಈ ಕುರಿತು ಮಾತನಾಡಿದ ಮಂಗಳೂರು ಪೊಲೀಸ್ ಅಯುಕ್ತ ಶಶಿಕುಮಾರ್, "ಬುಧವಾರ ಮುಂಜಾನೆ ಇಲಾಖೆಗೆ ಕೇಂದ್ರ ಸರಕಾರ ಪಿಎಫ್ಐ ಹಾಗೂ ಸಹ ಸಂಘಟನೆಗಳನ್ನು ಬ್ಯಾನ್ ಮಾಡಿದೆ ಎಂಬ ಸೂಚನೆ ಬಂದಿತ್ತು. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಸೂಚನೆಯಂತೆ ಕೇಂದ್ರ ಬ್ಯಾನ್ ಮಾಡಿರುವ ಸಂಘಟನೆಗಳ ಕಚೇರಿಗಳನ್ನ ಸೀಜ್ ಮಾಡಲು ಸೂಚನೆ ನೀಡಿದೆ. ಮಂಗಳೂರು ನಗರದ ಮೂರು ಉಪವಿಭಾಗದಲ್ಲಿ ಕಾರ್ಯಾಚರಣೆ ಮಾಡಿ, ಕಚೇರಿಯಲ್ಲಿ ವಸ್ತುಗಳನ್ನು ಸೀಜ್ ಮಾಡಿ ಎಲ್ಲಾ ಕಚೇರಿಗಳಿಗೂ ಸೀಲ್ ಮಾಡಲಾಗಿದೆ" ಎಂದು ತಿಳಿಸಿದರು.
ಪಣಂಬೂರು ಠಾಣೆ ವ್ಯಾಪ್ತಿಯ ಕಸಬಾ ಬೆಂಗ್ರೆ, ಸುರತ್ಕಲ್ ಠಾಣೆ ವ್ಯಾಪ್ತಿಯ ಚೊಕ್ಕಬೆಟ್ಟು, ಕಾಟಿಪಳ್ಳ, ಬಜ್ಪೆ ಠಾಣೆ ವ್ಯಾಪ್ತಿಯ ಅಡ್ಡೂರು, ಕಿನ್ನಿಪದವು, ಉಳ್ಳಾಲ ಠಾಣೆ ವ್ಯಾಪ್ತಿಯ ಕೆಸಿ ರೋಡ್, ಕೊಣಾಜೆ ಠಾಣೆ ವ್ಯಾಪ್ತಿಯ ಇನೋಳಿ, ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಮಲ್ಲೂರು, ಪಾಂಡೇಶ್ವರ ಠಾಣೆ ವ್ಯಾಪ್ತಿಯ ನೆಲ್ಲಿಕಾಯಿ ರಸ್ತೆ, ಬಂದರು ಠಾಣೆ ವ್ಯಾಪ್ತಿಯ ಕುದ್ರೋಳಿ ಕರ್ಬಾಳ ರಸ್ತೆಯಲ್ಲಿರುವ ಪಿಎಫ್ಐ ಕಚೇರಿಗಳಿಗೆ ಬೀಗ ಹಾಕಿ ಪೊಲೀಸರು ಸೀಲ್ ಹೊಡೆದಿದ್ದಾರೆ.
ಕೋಮುದ್ವೇಷ ಸೃಷ್ಟಿಸುತ್ತಿರುವ ಎಲ್ಲ ಸಂಘಟನೆಗಳನ್ನು ನಿಷೇಧಿಸಿ; ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸೇರಿದಂತೆ ಒಟ್ಟು ಎಂಟು ಸಂಘಟನೆಗಳನ್ನು ಕೇಂದ್ರ ಸರಕಾರ ನಿಷೇಧಿಸಿದ ಕುರಿತು ಮಾತನಾಡಿರುವ ಯು. ಟಿ. ಖಾದರ್, " ಸಮಾಜದಲ್ಲಿ ಅಶಾಂತಿ ಹಾಗೂ ಕೋಮುದ್ವೇಷ ಸೃಷ್ಟಿಸುತ್ತಿರುವ ಎಲ್ಲ ಸಂಘಟನೆಗಳ ವಿರುದ್ಧವೂ ಸರಕಾರ ಕ್ರಮ ಕೈಗೊಳ್ಳಬೇಕು. ಸಂಘಟನೆಗಳ ನಿಷೇಧದ ವಿಚಾರದಲ್ಲೂ ಯಾವುದೇ ತಾರತಮ್ಯಕ್ಕೆ ಅವಕಾಶ ನೀಡಬಾರದು. ಇದರ ಹಿಂದೆ ಸದುದ್ದೇಶವಿರಬೇಕು. ರಾಜಕೀಯ ಕೊಲೆಗಳಿಗೆ ಇನ್ನು ಮುಂದೆ ಸರಕಾರ ಅವಕಾಶ ನೀಡಬಾರದು" ಎಂದು ಒತ್ತಾಯಿಸಿದರು.