ಎಂಥ ವಿಚಿತ್ರ, ಮಂಗಳೂರಲ್ಲಿ ಬಾವಿ ನೀರಿಗೆ ಹತ್ತಿದೆ ಬೆಂಕಿ!
ಮಂಗಳೂರು, ನವೆಂಬರ್ 08: ಬೆಂಕಿ ಹಚ್ಚಿದರೆ ಬಾವಿ ನೀರು ಉರಿಯುವ ವಿಲಕ್ಷಣ ಘಟನೆ ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿ ಕಂಡುಬಂದಿದೆ. ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇರಳಕಟ್ಟೆ ಸಮೀಪದ ಕಾನಕೆರೆ ಎಂಬಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಕಾನಕೆರೆಯ ಜನವಸತಿ ಪ್ರದೇಶದ ಹಲವಾರು ಬಾವಿಗಳ ನೀರಿನಲ್ಲಿ ಪೆಟ್ರೋಲಿಯಂ ಅಂಶ ಕಂಡುಬರುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಕಾನಕೆರೆ ಪ್ರದೇಶ ಜನವಸತಿ ಹೊಂದಿದ್ದು, ಇಲ್ಲಿ ಹಲವು ತೆರೆದ ಬಾವಿಗಳಿವೆ. ಈ ಪೈಕಿ ನಾಲ್ಕು ಬಾವಿಗಳಲ್ಲಿನ ನೀರು ಪೆಟ್ರೋಲ್ ವಾಸನೆಯಿಂದ ಕೂಡಿದೆ. ಬಾವಿಯ ನೀರಿಗೆ ಬೆಂಕಿ ಕೊಟ್ಟರೆ ಹೊತ್ತಿ ಉರಿಯುತ್ತಿದೆ. ಬಾವಿಯ ನೀರಿನಲ್ಲಿ ಪೆಟ್ರೋಲಿಯಂ ಅಂಶ ಕಂಡು ಬಂದ ಹಿನ್ನೆಲೆಯಲ್ಲಿ ಕಾನಕೆರೆ ಪ್ರದೇಶದ ಸ್ಥಳೀಯ ನಿವಾಸಿಗಳು ಆತಂಕಿತರಾಗಿದ್ದಾರೆ.

ನಿನ್ನೆ ರಾತ್ರಿ ಬಾವಿಗಳನ್ನು ಪರಿಶೀಲಿಸಿದಾಗ ಇದು ಬೆಳಕಿಗೆ ಬಂದಿದೆ. ಈ ಬಗ್ಗೆ ಅಗ್ನಿಶಾಮಕ ದಳಕ್ಕೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆದರೆ ರಾತ್ರಿಯವರೆಗೆ ಅಗ್ನಿಶಾಮಕ ದಳ ಇತ್ತ ಆಗಮಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ದೇರಳಕಟ್ಟೆ ವೃತ್ತದ ಬಳಿ ಪೆಟ್ರೋಲ್ ಪಂಪ್ ದಾಸ್ತಾನು ಲೀಕೇಜ್ ಆಗಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಕಾನಕೆರೆ ತಗ್ಗು ಪ್ರದೇಶದಲ್ಲಿದೆ. ಎತ್ತರದಲ್ಲಿರುವ ದೇರಳಕಟ್ಟೆ ಬೆಳ್ಮಗ್ರಾಮ ಪಂಚಾಯತ್ ತಾಗಿಕೊಂಡೇ ಪೆಟ್ರೋಲ್ ಪಂಪ್ ಇದೆ. ಅದರ ಕೆಳ ಭಾಗದಲ್ಲೇ ಹಲವಾರು ಮನೆಗಳಿವೆ. ಕೆಲ ವರ್ಷಗಳ ಹಿಂದೆ ಇಲ್ಲಿಯ ಪೆಟ್ರೋಲ್ ಪಂಪ್ ನ ತಡೆಗೋಡೆ ಕುಸಿದು ಪೆಟ್ರೋಲ್ ಟ್ಯಾಂಕ್ ಕೂಡ ಒಡೆದಿತ್ತು. ನಂತರ ಅದನ್ನು ದುರಸ್ತಿಗೊಳಿಸಿದರು ಕೂಡ ಅದರಿಂದ ಪೆಟ್ರೋಲ್ ಸೋರಿಕೆ ಯಾಗಿ ಬಾವಿ ಸೇರುತ್ತಿದೆ ಎನ್ನುವುದು ಸ್ಥಳೀಯರ ವಾದ.












Click it and Unblock the Notifications