ಮಂಗಳೂರಿನ ಮಳೆ : ನಾಯಿ, ಬೆಕ್ಕು ಕಾಣೆಯಾದ ಬಗ್ಗೆ ದೂರು
ಮಂಗಳೂರು, ಜೂನ್ 03 : ಮಂಗಳೂರಿನಲ್ಲಿ ಸುರಿದ ಮಹಾಮಳೆ ಹಲವಾರು ಅವಾಂತರಗಳನ್ನು ಮಾಡಿದೆ. ಮನೆಯಲ್ಲಿದ್ದ ಸಾಕಿದ್ದ ಹಲವು ಪ್ರಾಣಿಗಳು ನಾಪತ್ತೆಯಾಗಿದ್ದು, ಹುಡುಕಿಕೊಡಿ ಎಂದು ದೂರು ದಾಖಲು ಮಾಡಿದ್ದಾರೆ.
ಮೇ 29ರಂದು ಮಂಗಳೂರಿನಲ್ಲಿ ಭಾರೀ ಮಳೆಯಾಗಿತ್ತು. ಕೆಲವೇ ಗಂಟೆಗಳ ಅಂತರದಲ್ಲಿ ಸುಮಾರು 24 ಸೆಂ.ಮೀ. ಮಳೆಯಾಗಿತ್ತು. ಈ ಮಳೆ ಮಂಗಳೂರಿನಲ್ಲಿ ಜಲಪ್ರಳಯವನ್ನು ಸೃಷ್ಠಿ ಮಾಡಿತ್ತು. ಪಿಠೋಪಕರಣ, ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು ಹಾನಿಗೊಳಗಾಗಿದ್ದವು.
ಮಂಗಳೂರಿನಲ್ಲಿ ಸುರಿದ ಮಹಾ ಮಳೆಯಿಂದಾಗಿ ಒಂದು ವಿಶಿಷ್ಟವಾದ ದೂರು ದಾಖಲಾಗುತ್ತಿದೆ. ಯಾರಿಗೂ ಅರಿಯದ ಭಾವನಾತ್ಮಕವಾಗಿ ಬೆಸೆದಿರುವ ದೂರುಗಳು ನಗರದ ಎನಿಮಲ್ ಕೇರ್ ಟ್ರಸ್ಟ್ ನಲ್ಲಿ ದಾಖಲಾಗುತ್ತಿದೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿದ ಮಳೆಗೆ ಮನೆಯ ಸದಸ್ಯರಂತೆ ಸಾಕುತ್ತಿದ್ದ ಸಾಕು ಪ್ರಾಣಿಗಳು ಕಾಣೆಯಾಗಿರುವ ದೂರುಗಳು ದಾಖಲಾಗುತ್ತಿವೆ. ಮನೆಯ ಸದಸ್ಯರಂತಿದ್ದ ನಾಯಿ, ಬೆಕ್ಕುಗಳು ನಾಪತ್ತೆಯಾಗಿವೆ. ಅವನ್ನು ಹುಡುಕಿಕೊಡಿ ಎಂದು ಮನೆ ಮಾಲಿಕರು ತಮ್ಮ ಸಂಬಂಧಿಗಳು, ಸ್ನೇಹಿತರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡುತ್ತಿದ್ದಾರೆ.
ಮಂಗಳೂರಿನ ಶಕ್ತಿನಗರದಲ್ಲಿರುವ ಎನಿಮಲ್ ಕೇರ್ ಟ್ರಸ್ಟ್ ಗೆ ತಮ್ಮ ಸಾಕು ಪ್ರಾಣಿಗಳನ್ನು ಹುಡುಕಿಕೊಡುವಂತೆ ಮನವಿ ಮಾಡುತ್ತಿದ್ದಾರೆ. ಮಳೆಯಿಂದ ಕೃತಕ ನೆರೆ ಬರುವಂತಹ ಸಂದರ್ಭದಲ್ಲಿ ಮನೆ ಮಂದಿ ತಮ್ಮ ತಮ್ಮ ಸದಸ್ಯರ ಕ್ಷೇಮದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಮನೆಯಲ್ಲಿರುವ ಸಾಕು ಪ್ರಾಣಿಗಳು ಮಳೆಯ ಭಯದಿಂದ ಓಡಿಹೋಗಿರುವುದು, ಅಥವಾ ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ.

ಅದರಲ್ಲೂ ಸಾಕು ಪ್ರಾಣಿಗಳನ್ನು ಮನೆ ಮಂದಿಯಂತೆ ಪ್ರೀತಿಸುತ್ತಿರುವ ಜನರು ಸಾಮಾಜಿಕ ಜಾಲತಾಣಗಳಲ್ಲಿ ನಾಯಿಯ ಪೋಟೋ ಜತೆಗೆ ಮಾಹಿತಿಯನ್ನು ನೀಡಿ ಸಿಕ್ಕಿದರೆ ಸಂಪರ್ಕಿಸಿ ಎಂಬ ಸಂದೇಶನವನ್ನು ರವಾನಿಸುತ್ತಿದ್ದಾರೆ.
ಶಕ್ತಿ ನಗರದಲ್ಲಿರುವ ಎನಿಮಲ್ ಟ್ರಸ್ಟ್ ಕೇರ್ ಗೆ ಭಾರಿ ಮಳೆಯ ಸಂದರ್ಭದಲ್ಲಿ ನಾಪತ್ತೆಯಾದ ಸಾಕು ಪ್ರಾಣಿಗಳನ್ನು ಹುಡುಕಿಕೊಡುವಂತೆ 9 ದೂರುಗಳು ಬಂದಿವೆ. ಅದರಲ್ಲಿ 6 ನಾಯಿ ಮತ್ತು 3 ಬೆಕ್ಕುಗಳು ಸೇರಿವೆ.
ಟ್ರಸ್ಟ್ ದೂರಗಳನ್ನು ಪರಿಹರಿಸಲು ಸಿಬ್ಬಂದಿಗಳನ್ನು ನಿಯೋಜನೆ ಮಾಡಿದ್ದು, ನಾಪತ್ತೆಯಾದ ಸಾಕು ಪ್ರಾಣಿಗಳಲ್ಲಿ ಇದುವೆರಗೆ 5 ನಾಯಿ ಹಾಗೂ 2 ಬೆಕ್ಕುಗಳು ಪತ್ತೆಯಾಗಿದ್ದು, ಮಾಲೀಕರಿಗೆ ಹಿಂದಿರುಗಿಸಲಾಗಿದೆ.

ಮಳೆಗಾಲದಲ್ಲಿ ಉಂಟಾಗುವ ನೆರೆ ಪ್ರವಾಹ ಕಾರಣದಿಂದ ಪ್ರಾಣಿಗಳು ತಪ್ಪಿಸಿಕೊಂಡು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುತ್ತವೆ. ಈ ಸಂದರ್ಭದಲ್ಲಿ ಅಲ್ಲಿನ ರಸ್ತೆಯ ಬಗ್ಗೆ ತಿಳಿಯದೇ ಇರುವುದರಿಂದ ರಸ್ತೆಗಳಲ್ಲಿ ವಾಹನಗಳ ಅಡಿಗೆ ಬಿದ್ದು ಪ್ರಾಣಕಳೆದುಕೊಳ್ಳುತ್ತವೆ ಇಲ್ಲವೆ ಗಾಯಗಳಾಗಿರುವಂತಹ ಪ್ರಕರಣಗಳ ಸಂಖ್ಯೆ ಹೆಚ್ಚಿರುತ್ತದೆ.











Click it and Unblock the Notifications