ಯಕ್ಷಗಾನ ಕಲಾವಿದರಿಗೆ ಮಾಸಾಶನ– ಖಾದರ್ ಭರವಸೆ
ಮಂಗಳೂರು, ಮೇ 29: ಯಕ್ಷಗಾನ ಕಲಾವಿದರಿಗೆ ಸರ್ಕಾರದಿಂದ ಮಾಸಾಶನ ನೀಡುವ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಯಕ್ಷಧ್ರುವ ಕ್ರೀಡಾಕೂಟನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಕ್ಷಗಾನ ಕಲಾವಿದರು ವರ್ಷದಲ್ಲಿ ಆರು ತಿಂಗಳು ವೃತ್ತಿ ಮಾಡಿ, ಇನ್ನಾರು ತಿಂಗಳ ಕಾಲ ಕೆಲಸವಿಲ್ಲದೆ ಸಂಕಷ್ಟಪಡುತ್ತಾರೆ. ರಾತ್ರಿ ನಿದ್ದೆ ಬಿಟ್ಟು ಮೇಳಗಳಲ್ಲಿ ದುಡಿಯುವುದರಿಂದ ಆರೋಗ್ಯದ ಸಮಸ್ಯೆಯೂ ಕಲಾವಿದರನ್ನು ಕಾಡುತ್ತದೆ. ಜತೆಗೆ ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆಯ ಜವಾಬ್ದಾರಿಯೂ ಇರುತ್ತದೆ. ಹಾಗಾಗಿ ಯಕ್ಷಗಾನ ಕಲಾವಿದರಿಗೆ ಮಾಸಾಶನ ನೀಡುವ ಕುರಿತು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಖಾದರ್ ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಉದ್ಯಮಿಗಳಾದ ಸುರೇಶ್ ಭಂಡಾರಿ ಕಡಂದಲೆ, ಡಾ.ವಿರಾರ್ ಶಂಕರ್ ಬಿ.ಶೆಟ್ಟಿ, ಮನೋಹರ್ ಶೆಟ್ಟಿ, ಲೀಲಾ ಶಂಕರ್ ಶೆಟ್ಟಿ, ಸಂತೋಷ್ ಕುಮಾರ್ ಬೋಳಿಯಾರ್, ಸವಣೂರು ಸೀತಾರಾಮ ಶೆಟ್ಟಿ ಮತ್ತಿತರರು ಉಪಸ್ಥತರಿದ್ದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಮೇಳಗಳ ಯಕ್ಷಗಾನ ಕಲಾವಿದರಿಗೆ ಇದೇ ಮೊದಲ ಬಾರಿಗೆ ಕ್ರೀಡಾಕೂಟ ಆಯೋಜನೆಗೊಂಡಿದೆ. ಮಂದಾರ್ತಿ ಮೇಳ ಸಾಲಿಗ್ರಾಮ, ಕಟೀಲಿನ 6 ಮೇಳ, ಬಪ್ಪನಾಡು, ಸಸಿಹಿತ್ಲು, ಎಡನೀರು, ಕೂಡ್ಲು, ಮಲ್ಲ, ಕುತ್ಯಾಳ, ಬೆಂಕಿನಾಥೇಶ್ವರ ಮೇಳ, ಸುಂಕದಕಟ್ಟೆ ಮೇಳ, ಸೌಕೂರು, ಅಮೃತೇಶ್ವರಿ ಕೋಟ, ಮಾರಣಕಟ್ಟೆ ಮೇಳ, ಗೋಳಿಗರಡಿ, ಹಿರಿಯಡ್ಕ, ಮಡಾಮಕ್ಕಿ, ಧರ್ಮಸ್ಥಳ ಸಹಿತ 24 ಮೇಳಗಳ 400ಕ್ಕೂ ಅಧಿಕ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.












Click it and Unblock the Notifications