ಉಳ್ಳಾಲದಲ್ಲಿ ಮುಳುಗಡೆಯಾದ ಬಾರ್ಜ್ ನಿಂದ ಇಂಧನ ಸೋರಿಕೆ ಭೀತಿ
ಮಂಗಳೂರು, ಜೂನ್ 8: ಉಳ್ಳಾಲದಲ್ಲಿ ಕಳೆದ ಶನಿವಾರ ಅಪಘಾತಕ್ಕೀಡಾಗಿ ಮುಳುಗಡೆಯಾದ ಬಾರ್ಜ್ ನಿಂದ ಇಂಧನ ಸೋರಿಕೆಯ ಭೀತಿ ಎದುರಾಗಿದೆ. ಜಿಲ್ಲಾಧಿಕಾರಿ ಡಾ. ಜಗದೀಶ್ ಕಡಲ್ಕೊರೆತ ತಡೆಗೋಡೆ ಕಾಮಗಾರಿ ನಡೆಸುತ್ತಿದ್ದ ಚೀನಾ ಮೂಲದ ಕಂಪೆನಿಯ ಬಾರ್ಜ್ನಿಂದ 24 ಗಂಟೆಯೊಳಗೆ ಇಂಧನ ತೆರವುಗೊಳಿಸುವಂತೆ ಆದೇಶ ನೀಡಿದ್ದರು. ಆದರೆ ಇಂಧನ ತೆರವುಗೊಳಿಸಲು ನೌಕಾ ಪಡೆ ಮತ್ತು ತಾಂತ್ರಿಕ ತಜ್ಞರ ತಂಡ ನಡೆಸಿದ ಪ್ರಯತ್ನ ವಿಫಲಗೊಂಡಿದೆ.
ನೌಕಾ ಪಡೆ ಮತ್ತು ತಾಂತ್ರಿಕ ತಜ್ಞರ ತಂಡವು ಬುಧವಾರ ಬಾರ್ಜ್ನಿಂದ ಇಂಧನ ತೆರವುಗೊಳಿಸಲು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ತೆರವುಗೊಳಿಸಲು ಸಾಧ್ಯವಾಗದಿರುವ ಬಗ್ಗೆ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಳುಗುತ್ತಿರುವ ಬಾರ್ಜ್ನಲ್ಲಿ ಇಂಧನ ಸೋರಿಕೆಯಾಗುತ್ತಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಿನಾರೆ ಸೇರುತ್ತಿರುವ ಸಮುದ್ರ ನೀರು ಇಂಧನ ಮಿಶ್ರಿತವಾಗಿದ್ದು, ಈ ಹಿನ್ನೆಲೆಯಲ್ಲಿ ಬಾರ್ಜ್ನಿಂದ ಇಂಧನ ಸೋರಿಕೆಯಾಗಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದೀಗ ಈ ಬಾರ್ಜ್ ನ ಬಿಡಿಭಾಗಗಳು ಒಂದೊಂದಾಗಿ ಸಮುದ್ರ ತೀರಕ್ಕೆ ಬಂದು ಬೀಳುತ್ತಿವೆ. ಅನಿಲ ಟ್ಯಾಂಕ್ ಗಳನ್ನೂ ಅಲೆಗಳು ಸಮುದ್ರತೀರಕ್ಕೆ ತಂದುಹಾಕಿದೆ. ಎಲ್ಲಿ ಇಂಧನ ಸೋರಿಕೆಯಾಗಿ ಸಮುದ್ರದ ನೀರು ಮಲಿನವಾಗುತ್ತೋ ಎಂಬ ಆತಂಕದಲ್ಲಿ ಸ್ಥಳೀಯ ಮೀನುಗಾರರಿದ್ದಾರೆ.