ಕಡಲ ತೀರದಲ್ಲಿ ತೈಲ ಜಿಡ್ಡು; ಮೀನುಗಾರರಲ್ಲಿ ಆತಂಕ
ಮಂಗಳೂರು ಮೇ 28 : ಮಂಗಳೂರು ಸೇರಿದಂತೆ ಉಡುಪಿ ಕಡಲ ತಡಿಯಲ್ಲಿ ತೇವಾಂಶ ಮಿಶ್ರಿತ ಕಪ್ಪು ಬಣ್ಣದ ತೈಲ ಜಿಡ್ಡು ಕಾಣಿಸಿಕೊಂಡಿದೆ. ಇದು ಸ್ಥಳೀಯ ಮೀನುಗಾರರಲ್ಲಿ ಆತಂಕ ಮೂಡಿಸಿದೆ. ಮಂಗಳೂರಿನ ತಣ್ಣಿರು ಬಾವಿ, ಪಣಂಬೂರು, ಸುರತ್ಕಲ್, ಮೂಳೂರು, ಕಾಪು, ಹೆಜಮಾಡಿ, ಪಡುಬಿದ್ರಿ, ಎರ್ಮಾಳು ತೆಂಕ, ಬಡಾ, ಪೊಲಿಪು, ಕೈಪುಂಜಾಲು, ಮಟ್ಟು ಕಡಲ ಕಿನಾರೆಯಲ್ಲಿ ಈ ತೈಲ ಜಿಡ್ಡು ಕಂಡುಬಂದಿದೆ. ಈ ಜಿಡ್ಡು ಮೀನುಗಳ ಸಂತಾನೋತ್ಪತ್ತಿಗೆ ಮಾರಕವಾಗಲಿದೆ ಎಂದು ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಕಡಲ ಕಸಕ್ಕೆ ಕಲೆಯ ರೂಪ ನೀಡಿದ ಮೇಘನಾ
ಸಮುದ್ರ ತೀರ ಸೇರಿದ ಈ ಜಿಡ್ಡು ಬಿಸಿಲಿಗೆ ಕರಗುತ್ತಿರುವುದರಿಂದ ಪರಿಸರವೆಲ್ಲ ಎಣ್ಣೆಯ ವಾಸನೆ ಬೀರುತ್ತಿದೆ. ಮೀನುಗಾರಿಕಾ ಅವಧಿ ಪೂರ್ಣಗೊಳಿಸಿದ ಬಳಿಕ, ಅಂದರೆ ಮೇ, ಜೂನ್ ತಿಂಗಳಿನಲ್ಲಿ ಬೃಹತ್ ಗಾತ್ರದ ದೋಣಿಗಳಲ್ಲಿನ ಬಳಸಿದ ತೈಲವನ್ನು ಎಲ್ಲೆಂದರಲ್ಲಿ ವಿಸರ್ಜಿಸುತ್ತಿರುವುದರಿಂದ ಈ ರೀತಿಯಾಗುತ್ತಿದೆ ಎಂದು ಹೇಳಲಾಗಿದೆ.
ತೈಲ ಜಿಡ್ಡು ಕಂಡುಬಂದ ಕಡಲ ತೀರಕ್ಕೆ ಪರಿಸರ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಚ್ಚಾತೈಲ ವಿಲೇವಾರಿ ಅಥವಾ ಬೋಟ್ ಗಳಲ್ಲಿನ ತೈಲ ವಿಲೇವಾರಿಯಿಂದ ಈ ರೀತಿಯಾಗಿರಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ತೈಲ ಜಿಡ್ಡು, ತ್ಯಾಜ್ಯ ಹಾಗೂ ನೀರಿನ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಮಂಗಳೂರಿನಲ್ಲಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಲ್ಯಾಬ್ ನಲ್ಲಿ ಪರೀಕ್ಷೆಗೆ ಕಳುಹಿಸಲಾಗಿದೆ.