ಕರಾವಳಿಯಲ್ಲಿ ಕಾಣಿಸುತ್ತಿಲ್ಲ ಬೆಟ್ಟಿಂಗ್ ಹವಾ, ಕಾರಣ ಇದೇನಾ?
ಮಂಗಳೂರು, ಏಪ್ರಿಲ್ 25: ಕರಾವಳಿ ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಇನ್ನು ಏನಿದ್ದರೂ ಮೇ 23 ರ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ನಡುವೆ ಕರಾವಳಿಯಲ್ಲಿ ಅಭ್ಯರ್ಥಿಗಳ ಸೋಲು-ಗೆಲುವಿನ ಗಂಭೀರ ಚರ್ಚೆ ಆರಂಭವಾಗಿದೆ.
ಕರಾವಳಿಯಲ್ಲಿ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಂಡು ಬಂದಿದ್ದ ಬೆಟ್ಟಿಂಗ್ ಭರಾಟೆ ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಕಂಡುಬಂದಿಲ್ಲ. ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಂದು ತಿಂಗಳು ಫಲಿತಾಂಶಕ್ಕೆ ಕಾಯಬೇಕಾಗಿರುವುದು ಬೆಟ್ಟಿಂಗ್ ಕಟ್ಟುವವರಿಗೆ ತೊಡಕಾಗಿದೆ.
ಹೌದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಠಿಣ ನೀತಿ ಸಂಹಿತೆ ಜಾರಿ ಪರಿಣಾಮ ಬೆಟ್ಟಿಂಗ್ ಗೆ ಯಾರು ಮುಂದಾಗುತ್ತಿಲ್ಲ ಎಂದು ಹೇಳಲಾಗಿದೆ. ಇದರ ನಡುವೆ ಕ್ಷೇತ್ರದಲ್ಲಿ ಅಭ್ಯರ್ಥಿಗಳ ನಡುವೆ ಅಷ್ಟೊಂದು ತೀವ್ರ ಪೈಪೋಟಿ ಕಾಣದಿರುವುದೂ ಬೆಟ್ಟಿಂಗ್ ಗೆ ಜನರು ಮುಂದಾಗದಿರಲು ಕಾರಣ ಎಂದೂ ಹೇಳಲಾಗಿದೆ.
ಈ ವರೆಗಿನ ಚುನಾವಣೆಗಳಲ್ಲಿ ಕಾರ್ಯಕರ್ತರು, ನಾಯಕರು ಹಣ ಕಟ್ಟಿ ತಮ್ಮ ಅಭ್ಯರ್ಥಿ ಗೆಲ್ಲುತ್ತಾರೆಂದು ಬೆಟ್ಟಿಂಗ್ ಹೂಡುತ್ತಿರುವುದು ಸಾಮಾನ್ಯವಾಗಿತ್ತು. ಆದರೆ ಈ ವಾತವರಣ ಈ ಬಾರಿ ಕಂಡುಬರುತ್ತಿಲ್ಲ. ಯಾಕೆ ಗೊತ್ತಾ?

ತೀವ್ರ ಪೈಪೋಟಿ ಕಾಣುತ್ತಿಲ್ಲ
ಎರಡೂ ಪಕ್ಷಗಳಲ್ಲಿ ಗೆಲುವಿನ ಸಾಧ್ಯತೆ ಇರುವಾಗ ಬೆಂಬಲಿಗರು ಬೆಟ್ಟಿಂಗ್ ಕಟ್ಟುವುದು ಹೆಚ್ಚು. ಆದರೆ ಈ ಬಾರಿ ಅಭ್ಯರ್ಥಿಗಳ ನಡುವೆ ಅಷ್ಟೊಂದು ತೀವ್ರ ಪೈಪೋಟಿ ಕಾಣದಿರುವುದೂ ಬೆಟ್ಟಿಂಗ್ ಕ್ಷೀಣಿಸಲು ಕಾರಣ.

ಜನರಿಗೆ ಬೆಟ್ಟಿಂಗ್ ಚಟವಿಲ್ಲ
ಉತ್ತರ ಕರ್ನಾಟಕ, ಮಲೆನಾಡು, ಬಯಲು ಸೀಮೆಯ ಬೆಟ್ಟಿಂಗ್ ಕ್ರಮಕ್ಕೂ ಕರಾವಳಿಯಲ್ಲಿ ಬೆಟ್ಟಿಂಗ್ ಕ್ರಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಬಯಲು ಸೀಮೆ, ಉತ್ತರ ಕರ್ನಾಟಕಗಳ ಗ್ರಾಮಾಂತರ ಪ್ರದೇಶಗಳಲ್ಲಿ ಹೊಲ, ಗದ್ದೆ, ಜಾನುವಾರುಗಳನ್ನು ಬೆಟ್ಟಿಂಗ್ ಗೆ ಪಣವಾಗಿರಿಸುವುದು ಕ್ರಮ. ಆದರೆ ಕರಾವಳಿಯಲ್ಲಿ ಜನರಿಗೆ ಬೆಟ್ಟಿಂಗ್ ಚಟವಿಲ್ಲ.

ಸಾವಿರ ರೂಪಾಯಿಗೆ ಬೆಟ್ಟಿಂಗ್
ಕರಾವಳಿಯಲ್ಲಿ ಕೇವಲ ಸಾವಿರ ರೂಪಾಯಿ ಗಳಲ್ಲಿ ಬೆಟ್ಟಿಂಗ್ ನಡೆಯುವುದಿದೆ. ಇಲ್ಲಿ ಪ್ರತಿಷ್ಠೆಗಾಗಿ ಬೆಟ್ಟಿಂಗ್ ನಡೆಸುತ್ತಾರೆ. ಹೀಗಾಗಿ ಈ ಮೊತ್ತವನ್ನು ಬಡವರಿಗೆ ನೆರವಾಗುವುದಕ್ಕೆ ಅಥವಾ ವಿಜಯೋತ್ಸವದಲ್ಲಿ ಖರ್ಚಿಗೆ ಬಳಸುತ್ತಾರೆ.

ಫಲಿತಾಂಶ ಹತ್ತಿರವಾದಂತೆ ಆರಂಭ
ಫಲಿತಾಂಶದ ದಿನ ಹತ್ತಿರವಾಗುತ್ತಿದ್ದಂತೆ ಬೆಟ್ಟಿಂಗ್ ಆರಂಭವಾಗಲಿದೆ ಎಂದು ಬೆಟ್ಟಿಂಗ್ ಪಂಟರ್ ಗಳು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆಯಾಗಿ ಹಿಂದಿನ ಚುನಾವಣೆಗಳಲ್ಲಿ ಇದ್ದಷ್ಟು ಬೆಟ್ಟಿಂಗ್ ಆಸಕ್ತಿ ಈ ಬಾರಿ ಕಾಣದಿದ್ದರೂ ಮುಂದಿನ ದಿನಗಳಲ್ಲಿ ಸ್ವಲ್ಪ ಮಟ್ಟಿಗಾದರೂ ಬೆಟ್ಟಿಂಗ್ ನಡೆಯಬಹುದು ಎಂದು ಹೇಳಲಾಗಿದೆ.












Click it and Unblock the Notifications