ಅರಣ್ಯ ಇಲಾಖೆ ಸೇರಿದ ಸೌರಶಕ್ತಿ ಬೈಕ್, ವಿಶೇಷತೆಗಳು
ಮಂಗಳೂರು, ನವೆಂಬರ್ 21; ಅದು ಸದ್ದೇ ಮಾಡದ ಸ್ಪೆಷಲ್ ಬೈಕ್. ಹೊಗೆಯಂತೂ ಉಗುಳೋದೇ ಇಲ್ಲ. ಪೆಟ್ರೋಲ್ ಅಂತೂ ಬೇಡವೇ ಬೇಡ. ಕೇವಲ ಸೌರಶಕ್ತಿ ಯಿಂದ ಓಡುವ ವಿನೂತನ ಬೈಕ್ ಕಳೆದೆರಡು ತಿಂಗಳಿನಿಂದ ಕುದುರೆ ಮುಖದ ದಟ್ಟ ಕಾನನದ ಮಧ್ಯೆ ಓಡಾಡುತ್ತಿದೆ.
ಕುದುರೆಮುಖ ಪಶ್ಚಿಮ ಘಟ್ಟದ ದಟ್ಟ ಕಾನನ. ಗಿರಿ ಶಿಖರಗಳಿಂದ ಕೂಡಿದ ಸುಂದರ ಪರಿಸರವನ್ನು ಹೊಂದಿದೆ. ಈ ಕಾಡಿನ ಕಲ್ಲು ಮುಳ್ಳಿನ ಹಾದಿ ಮಧ್ಯೆ ನಡೆದುಕೊಂಡು ಹೋಗುವುದೇ ಕಷ್ಟ. ಹೀಗಿದ್ದರೂ ಈ ಕಾಡಿನಲ್ಲಿ ಸ್ಪೆಷಲ್ ಬೈಕೊಂದು ಕಳೆದ ಎರಡು ತಿಂಗಳಿನಿಂದ ಸದ್ದಿಲ್ಲದೇ ಸುದ್ದಿ ಮಾಡುತ್ತಿದೆ.
ಮಕ್ಕಳನ್ನು ಬೈಕ್ ಹಿಂಬದಿ ಕೂರಿಸಿಕೊಂಡು ಹೋಗಲು ಕೇಂದ್ರದಿಂದ ಹೊಸ ನಿಯಮ
ಈ ವಿನೂತನ ಬೈಕ್ ತಯಾರಿಸಿರುವುದು ಮಂಗಳೂರಿನ ಸುರತ್ಕಲ್ನ ಎನ್ಐಟಿಕೆಯ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್ ತಂಡ. 'ವಿಧ್ ಯುಗ್ 4.0 ಇ' ಬೈಕ್ ಎಂಬ ಹೆಸರಿನಲ್ಲಿ ಎನ್ಐಟಿಕೆ ಸೆಂಟರ್ ಫಾರ್ ಸಿಸ್ಟಮ್ ಈ ಬೈಕ್ ಡಿಸೈನ್ ಅಭಿವೃದ್ಧಿಪಡಿಸಿದೆ.
ವ್ಹೀಲಿಂಗ್ಗೆ ಅಡ್ಡಿಪಡಿಸಿದ ನಾಯಿಯನ್ನು ಕೊಂದ ಬೈಕ್ ಸವಾರರು!
ಈ ವಿನೂತನ ಬೈಕ್ಗೆ ಪೆಟ್ರೋಲ್ ಅಗತ್ಯವಿಲ್ಲ ಯಾಕಂದರೆ ಇದು ಸೋಲಾರ್ ಶಕ್ತಿಯಿಂದ ಓಡಾಡುತ್ತದೆ. ಸೌರಶಕ್ತಿಯ ಬ್ಯಾಟರಿಯಿಂದ ಓಡುವ ಈ ಬೈಕ್ಗೆ ಸ್ಕ್ರೋಕ್ ಇಂಜಿನ್ ಇಲ್ಲ. ಹೀಗಾಗಿ ಕಾಡು ಪ್ರಾಣಿಗಳಿಗೆ ಕಿರಿಕಿರಿಯಾಗುವ ಸದ್ದು ಮಾಡುವುದಿಲ್ಲ. ಕೆಟ್ಟ ಮಾಲಿನ್ಯವೂ ಇಲ್ಲ, ಸೌರ ಶಕ್ತಿಯನ್ನು ಬಳಸೋದರಿಂದ ಹೊಗೆಯನ್ನೂ ಉಗುಳಲ್ಲ. ಕಾಡುಗಳ್ಳರಿಗೆ ಬೈಕ್ ಬಂದಿದ್ದೇ ಗೊತ್ತಾಗಲ್ಲ. ಅಷ್ಟು ವಿಶೇಷವಾಗಿದೆ ಸೋಲಾರ್ ಬ್ಯಾಟರಿ ಚಾಲಿತ ವಿನೂತನ ಬೈಕ್.
ದಾವಣಗೆರೆ ಮೇಯರ್ ಕಾರಿಗೆ ಸಿನಿಮಾ ಸ್ಟೈಲ್ನಲ್ಲಿ ಬೈಕ್ ಡಿಕ್ಕಿ: ಹೆಲ್ಮೆಟ್ ಉಳಿಸಿತು ಪ್ರಾಣ!
ಬ್ಯಾಟರಿ ಚಾರ್ಜ್ ಮಾಡೋಕೆ ಮೂರು ಮೂವೆಬಲ್ ಸೋಲಾರ್ ಪ್ಯಾನೇಲ್, ಚಾರ್ಜರ್ ಯುನಿಟ್ ಇದೆ. ಮೊಬೈಲ್ ವಾಕಿಟಾಕಿ ಚಾರ್ಜ್ ಮಾಡೋದಕ್ಕೂ ವ್ಯವಸ್ಥೆ ಇದರಲ್ಲಿದೆ. ದಾಖಲೆ ಪತ್ರಗಳನ್ನು ಅಂತಾ ಇಡೋದಕ್ಕೆ ವಾಟರ್ ಪ್ರೂಫ್ ಬಾಕ್ಸ್ ಬೈಕ್ನಲ್ಲಿದೆ. ಬೈಕ್ ಹಿಂಬದಿಯ ಎರಡು ಕಡೆಗಳಲ್ಲಿ ನೀರಿನ ಟ್ಯಾಂಕ್ಗಳನ್ನು ಇಡಬಹುದಾಗಿದೆ. ಅಗತ್ಯವಿದ್ದಾಗ ಹೆಡ್ ಲೈಟ್ ಅನ್ನು ತೆಗೆದು ಟಾರ್ಚ್ ಲೈಟ್ ನಂತೆ ಬಳಸುವುದಕ್ಕೂ ಈ ಬೈಕ್ನಲ್ಲಿ ವ್ಯವಸ್ಥೆ ಮಾಡಲಾಗಿದೆ.
3 ಗಂಟೆಗಳ ಕಾಲ ಜಾರ್ಜ್ ಮಾಡಿದರೆ 1 ಬ್ಯಾಟರಿ 70 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. 80 ಕಿಲೋಮೀಟರ್ ವೇಗದಲ್ಲಿ ಚಲಿಸಬಹುದಾಗಿದೆ. ಇನ್ನೂ ಇದನ್ನು ತಯಾರಿಸಲು 1.50 ಲಕ್ಷ ಖರ್ಚಾಗಿದೆ. ಈ ಬೈಕ್ ಅನ್ನು ಕುದುರೆಮುಖದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಬಳಸುತ್ತಿದ್ದಾರೆ. ಕುದುರೆಮುಖ ಅಭಯಾರಣ್ಯ ದ ನಡುವೆ ಕೊರಕಲು, ಕಲ್ಲು ಮುಳ್ಳಿನ ದಾರಿಯಲ್ಲಿ, ಉಬ್ಬು-ತಗ್ಗು ರಸ್ತೆಗಳ ನಡುವೆ ಈ ಬೈಕ್ ಸರಾಗವಾಗಿ ಸಂಚರಿಸಲಿದೆ.
ಅರಣ್ಯ ಅಧಿಕಾರಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಈ ಬೈಕ್ ಓಡಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ವಿಶೇಷ ಬೈಕ್ಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ಒದಗಿಸುವ ಬಗ್ಗೆಯೂ ಯೋಚನೆಯನ್ನು ಎನ್ ಐಟಿಕೆಯ ತಂಡ ಮಾಡುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎನ್ಐಟಿಕೆಯಸಿ ಎಸ್. ಡಿ ಮುಖ್ಯಸ್ಥ ಪ್ರೊ. ಗಂಗಾಧರ ಕೆ. ವಿ. "ಈ ಬೈಕ್ ಅನ್ನು ಸದ್ಯ ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಾಯೋಗಿಕವಾಗಿ ಬಳಸುತ್ತಿದ್ದಾರೆ. ಮುಂದೆ ಈ ಬೈಕ್ ನಲ್ಲಿ ಹಲವು ಸುಧಾರಣೆಗಳನ್ನು ತರುವ ಯೋಜನೆ ಇದೆ. ಅರಣ್ಯ ಇಲಾಖೆಯ ಜೊತೆಗೆ ಜನಸಾಮಾನ್ಯರು ಈ ಬೈಕ್ ಬಳಸುವ ರೀತಿ ಅಭಿವೃದ್ಧಿ ಪಡಿಸಲಾಗುತ್ತದೆ" ಎಂದು ಹೇಳಿದ್ದಾರೆ.