ಸ್ಯಾಟಲೈಟ್ ಫೋನ್ ಕಾಲ್ ಪತ್ತೆ; ಕರಾವಳಿಯಲ್ಲಿ ಎನ್ ಐ ಎ ತನಿಖೆ
ಮಂಗಳೂರು ಆಗಸ್ಟ್ 18 : ಭಾರತ ಕರಾವಳಿ ಮೂಲಕ ಭಯೋತ್ಪಾದಕರು ಒಳ ನುಸುಳಿ ದಾಳಿ ಮಾಡುವ ಸಂಚು ರೂಪಿಸಿರುವ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆಯ ಸಂದೇಶ ರವಾಸಿದ ಹಿನ್ನೆಲೆಯಲ್ಲಿ ಕರಾವಳಿ ನಗರಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೊಲೀಸರು ಸೇರಿದಂತೆ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.ಈ ಹಿನ್ನೆಲೆಯಲ್ಲಿ ರಾಜ್ಯ ಕರಾವಳಿಯಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು ಕಡಲ ತಡಿಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳ ಮೇಲೆ ಪೊಲೀಸರು ಮತ್ತು ಗುಪ್ತಚರ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ಉಗ್ರರ ಕುರಿತು ಗುಪ್ತಚರ ವರದಿ: ಮಂಗಳೂರಿನಲ್ಲಿಯೂ ಕಟ್ಟೆಚ್ಚರ
ಈ ಆತಂಕದ ನಡುವೆ ಸ್ಯಾಟಲೈಟ್ ಫೋನ್ ಮೂಲಕ ಬೆಳ್ತಂಗಡಿ ಹಾಗೂ ಚಿಕ್ಕಮಗಳೂರು ಭಾಗಕ್ಕೆ ಕರೆಯೊಂದು ಬಂದಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳದ ತಂಡ ಒಂದು ಕೇರಳ ದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ತನಿಖೆ ಆರಂಭಿಸಿದೆ.
ತುರಾಯ ಸ್ಯಾಟಲೈಟ್ ಫೋನ್ ಮೂಲಕ ಕರೆ ಬಂದಿದೆ ಎಂದು ಹೇಳಲಾಗಿದೆ. ಎಲ್ಲಿಂದ ಈ ಕರೆ ಮಾಡಲಾಗಿದೆ ಎಂದು ಸ್ಪಷ್ಟ ಮಾಹಿತಿ ಇಲ್ಲದಿದ್ದರೂ ಸಮುದ್ರ ಮಾರ್ಗದಿಂದ ಈ ಕರೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಹಡಗಿನಲ್ಲಿ ಪ್ರಯಾಣಿಸುವ ಮಂದಿ ಹೆಚ್ಚು ಈ ತುರಾಯ ಸ್ಯಾಟಲೈಟ್ ಫೋನ್ ಬಳಸುತ್ತಾರೆ ಎಂದು ಹೇಳಲಾಗಿದೆ. ಸ್ಯಾಟಲೈಟ್ ಫೋನ್ ಕರೆ ಬಂದಿರುವ ಹಿನ್ನೆಲೆಯಲ್ಲಿ ಅದನ್ನು ನಿರ್ಲಕ್ಷಿಸದ ಎನ್ ಐ ಎ ತಂಡ ತನಿಖೆಗೆ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದೆ.
ಎನ್ ಐ ಎ ತಂಡಕ್ಕೆ ಎಲ್ಲಿಗೆ ಕರೆ ಬಂದಿದೆ. ಅವರ ಮೊಬೈಲ್ ನಂಬರ್, IMEI ನಂಬರ್ ಎಲ್ಲದರ ಮಾಹಿತಿ ಇದೆ ಎಂದು ಹೇಳಲಾಗಿದೆ. ಆದರೆ ಪಾಕಿಸ್ತಾನದಿಂದ ಕರೆ ಕುರಿತು ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಆದರೆ ಸ್ಯಾಟಲೈಟ್ ಫೋನ್ ಕಾಲ್ ವಿಚಾರವನ್ನು ಹಗುರವಾಗಿ ಪರಿಗಣಿಸದ ಎನ್ ಐ ಎ ತಂಡ ತನಿಖೆ ಆರಂಭಿಸಿದೆ.
ಕರಾವಳಿ ಮೂಲಕ ದಾಳಿ ನಡೆಸುವ ಸಾಧ್ಯತೆಗಳಿವೆ ಎನ್ನುವ ಕೇಂದ್ರ ಗುಪ್ತಚರ ಇಲಾಖೆಯ ಸೂಚನೆಯನ್ವಯ ಹೆಚ್ಚಿನ ಗಮನ ನೀಡಲಾಗಿದೆ. ಸಮುದ್ರದಲ್ಲೂ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಕೋಸ್ಟ್ಗಾರ್ಡ್ ಮತ್ತು ಭಾರತೀಯ ನೌಕಾಪಡೆಗಳನ್ನು ಹೈಅಲರ್ಟ್ನಲ್ಲಿ ಇರಿಸಲಾಗಿದೆ. ಕೋಸ್ಟ್ಗಾರ್ಡ್ ಮಂಗಳೂರು ಕೇಂದ್ರದ ಕಾವಲು ನೌಕೆಗಳು ಆಳಸಮುದ್ರದಲ್ಲಿ ಬಿಗು ಪಹರೆ ನಡೆಸುತ್ತಿವೆ.
ಸಮುದ್ರದಲ್ಲಿ ಸಂಶಯಾಸ್ಪದ ಬೋಟ್ ಸಂಚರಿಸುತ್ತಿದ್ದರೆ, ಸಂಶಯಾಸ್ಪದ ಚಟುವಟಿಕೆ ನಡೆಯುತ್ತಿದ್ದರೆ ಪೊಲೀಸ್ ಕಂಟ್ರೋಲ್ ರೂಮ್ 100ಕ್ಕೆ ಮಾಹಿತಿ ನೀಡುವಂತೆ ಮಂಗಳೂರು, ಉಡುಪಿ ಮೀನುಗಾರರಿಗೆ ಇಲಾಖೆ ತಿಳಿಸಿದೆ. ಮೀನುಗಾರಿಕೆ ಸಂದರ್ಭ ಮೀನುಗಾರರು ಗುರುತು ಚೀಟಿ ಹೊಂದಿರುವಂತೆಯೂ ಸೂಚಿಸಲಾಗಿದೆ.