ಮಂಗಳೂರು : ಬಿಪಿಎಲ್ ಕಾರ್ಡ್ ಇದ್ರೆ ಗ್ಯಾಸ್ ಸಂಪರ್ಕ ಪಡೆಯಿರಿ
ಮಂಗಳೂರು, ಫೆ.3 : ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕಾರ್ಡುದಾರರಾಗಿದ್ದು , ಹೊಸದಾಗಿ ಅಡುಗೆ ಅನಿಲ ಸಂಪರ್ಕ ಪಡೆಯುವವರಿಗೆ ಠೇವಣಿ ರಹಿತ ಅನಿಲ ಸಂಪರ್ಕ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ಬಂದಿದೆ.
ಈ ಯೋಜನೆಯಡಿ ಗ್ರಾಹಕರು 1600 ರೂ. ದರದಲ್ಲಿ ಅನಿಲ ಸಂಪರ್ಕ ಪಡೆಯಬಹುದು. ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು 2014-15ರ ಒಳಗೆ ಅನುಷ್ಠಾನಗೊಳಿಸುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನ ಕಾರ್ಯದರ್ಶಿಗಳು ಕಂಪನಿಗಳಿಗೆ ಪತ್ರ ಬರೆದಿದ್ದಾರೆ.

ಅನಿಲ ವಿತರಣೆ ಮಾಡುವ ಕಂಪನಿಗಳು ತಮ್ಮ ವಿತರಕರ ಮೂಲಕ ಈ ಯೋಜನೆಯನ್ನು ಸಾಮಾಜಿಕ ಬದ್ಧತೆ (ಸಿಎಸ್ಆರ್) ಕಾರ್ಯಕ್ರಮಯಡಿ ಗ್ರಾಹಕರಿಗೆ ಒದಗಿಸುವಂತೆಯೂ ಅಧೀನ ಕಾರ್ಯದರ್ಶಿ ಎ. ಉಷಾಬಾಲಾ ಪತ್ರದಲ್ಲಿ ತಿಳಿಸಿದ್ದಾರೆ. [ಹೊಸದಾಗಿ ಗ್ಯಾಸ್ ಸಂಪರ್ಕ ಪಡೆಯುವುದು ಹೇಗೆ?]
ಯೋಜನೆಯ ಪ್ರಯೋಜನ : ಬಿಪಿಎಲ್ ಕಾರ್ಡ್ ಹೊಂದಿರುವ, ಹೊಸದಾಗಿ ಅನಿಲ ಸಂಪರ್ಕ ಪಡೆಯಬಯಸುವವರಿಗೆ ಈ ಯೋಜನೆ ಅನುಕೂಲಕರ. ಯೋಜನೆ ಅನ್ವಯ ಸಿಲಿಂಡರ್ ಹಾಗೂ ರೆಗ್ಯುಲೇಟರ್ ಠೇವಣಿಗೆ ಹಣ ನೀಡಬೇಕಿಲ್ಲ. ಅಂದರೆ 1,450 ರೂ. ಸಿಲಿಂಡರ್ಗೆ ಹಾಗೂ 150 ರೂ. ರೆಗ್ಯುಲೇಟರ್ ಸೇರಿದಂತೆ 1,600 ರೂ. ಹಣವನ್ನು ಅನಿಲ ವಿತರಕ ಕಂಪನಿಗಳು ಪಾವತಿ ಮಾಡುತ್ತವೆ.
ಸಾಮಾನ್ಯವಾಗಿ ಒಂದು ಸಿಲಿಂಡರ್ಗೆ ಅನಿಲ ಸಂಪರ್ಕ ಪಡೆಯಬೇಕಾದರೆ ಸುಮಾರು 4000 ರೂ. ಖರ್ಚಾಗುತ್ತದೆ. ಆದರೆ, ಸರ್ಕಾರ ಬಿಪಿಎಲ್ ಕಾರ್ಡುದಾರರಿಗೆ ಈ ಸೌಲಭ್ಯ ಒದಗಿಸಿರುವುದರಿಂದ ಅವರಿಗೆ ಖರ್ಚು ಕಡಿಮೆಯಾಗುತ್ತದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಡಿ.31ರಂದೇ ಸುತ್ತೋಲೆ ಕಳುಹಿಸಿರುವ ಸಚಿವಾಲಯವು, ಕಾರ್ಯಾನುಷ್ಠಾನದ ಬಗ್ಗೆ ಮಾರ್ಚ್ 30 ರೊಳಗೆ ಸಂಪೂರ್ಣ ವಿವರ ನೀಡುವಂತೆ ಸೂಚಿಸಿದೆ.
ಈ ಯೋಜನೆ ಬಗ್ಗೆ ಆಹಾರ ಮತ್ತು ನಾಗರ ಪೂರೈಕೆ ಇಲಾಖೆ ವತಿಯಿಂದ ನವೆಂಬರ್ನಿಂದಲೇ ಜನರಿಗೆ ತಿಳಿವಳಿಕೆ ಮೂಡಿಸಲಾಗಿತ್ತು. ಈಗ ಮತ್ತೊಂದು ಸುತ್ತಿನ ಪ್ರಚಾರ ಆರಂಭಿಸಲಾಗಿದ್ದು, ಬಿಪಿಎಲ್ ಕಾರ್ಡುದಾರರು ಇದಕ್ಕೆ ತಕ್ಷಣ ಸ್ಪಂದಿಸಿ ಈ ಅವಕಾಶವನ್ನು ಪಡೆದುಕೊಳ್ಳಲು ಮನವಿ ಮಾಡಲಾಗಿದೆ.












Click it and Unblock the Notifications