'ಡಿನೋಟಿಫಿಕೇಶನ್ಗೆ ಮಾರ್ಗಸೂಚಿಯ ಅಗತ್ಯವಿದೆ'
ಮಂಗಳೂರು, ಜ.27 : ಕರ್ನಾಟಕದಲ್ಲಿ ಯಾವ ಭೂಮಿ ಡಿನೋಟಿಫೈ ಮಾಡಬೇಕು ಅಥವಾ ಮಾಡಬಾರದು ಎಂಬ ಸ್ಪಷ್ಟವಾದ ನಿರ್ದೇಶನವಿಲ್ಲ. ಆದ್ದರಿಂದ ಡಿನೋಟಿಫಿಕೇಶನ್ ಕುರಿತು ನಿಯಮ ರೂಪಿಸುವ ಅಗತ್ಯವಿದೆ ಎಂದು ಶಿವಮೊಗ್ಗ ಸಂಸದ ಮತ್ತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ರಾಜ್ಯದಲ್ಲಿ ಎಸ್.ಎಂ.ಕೃಷ್ಣ ಕಾಲದಿಂದ ಎಲ್ಲ ಸಿಎಂಗಳ ಅವಧಿಯಲ್ಲೂ, ರಾಜ್ಯಪಾಲರ ಆಡಳಿತದಲ್ಲೂ ಸ್ವಾಧೀನ ಮಾಡಿರುವ ಜಮೀನಿನ ಡಿನೋಟಿಫೈ ನಡೆದಿದೆ ಎಂದರು.

ರಾಜ್ಯದಲ್ಲಿ ಯಾವ ಭೂಮಿಯನ್ನು ಡಿನೋಟಿಫೈ ಮಾಡಬೇಕು ಅಥವಾ ಮಾಡಬಾರದು ಎಂಬ ಯಾವುದೇ ಸ್ಪಷ್ಟ ನಿರ್ದೇಶನವಿಲ್ಲ. ಆದ್ದರಿಂದ, ನಿಯಮ ರೂಪಿಸುವ ಅಗತ್ಯವಿದೆ ಎಂದು ತಿಳಿಸಿದರು. [ಅರ್ಕಾವತಿ ಬಡಾವಣೆ ವಿವಾದ ಏಕೆ? ಏನು?]
ಫೆಬ್ರವರಿ 2ರಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ. ರಾಜ್ಯದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ಬಜೆಟ್ ಮಂಡಿಸಬೇಕಾಗಿದೆ ಎಂದು ಯಡಿಯೂರಪ್ಪ ಹೇಳಿದರು. [ಅರ್ಕಾವತಿ ಫೈಟ್ ಎಚ್ಡಿಕೆ ಏನು ಹೇಳಿದರು?]
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ರಮ ಕುಂಠಿತಗೊಂಡಿದೆ. ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಯನ್ನೂ ಕೇಳುತ್ತಿಲ್ಲ, ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿಲ್ಲ. ಇದು ಅಭಿವೃದ್ಧಿಯ ಹಿನ್ನಡೆಯನ್ನು ಸೂಚಿಸುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿಗೆ ತಂದಿರುವ ಸುಗ್ರೀವಾಜ್ಞೆಯ ಸಾಧಕ- ಬಾಧಕ ಕುರಿತು ಮುಂದಿನ ಲೋಕಸಭೆ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು. ಇದರಲ್ಲಿ ಒಣಭೂಮಿ ಸ್ವಾಧಿನಕ್ಕೆ ಅವಕಾಶವಿದ್ದು, ರೈತರಿಗೆ ಅನುಕೂಲವೂ ಇರಬಹುದು ಎಂದರು. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]












Click it and Unblock the Notifications