ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವರ್ಗಾವಣೆಗೆ ಗಿಡ ನೆಟ್ಟು ಸಂಭ್ರಮಾಚರಣೆ
ಮಂಗಳೂರು, ಅಕ್ಟೋಬರ್ 13: ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ದಕ್ಷ ಅಧಿಕಾರಿಗಳು ಏಕಾಏಕಿ ವರ್ಗಾವಣೆಗೊಂಡಾಗ ಜನರು ಪ್ರತಿಭಟನೆ ನಡೆಸಿ, ಧರಣಿ ಕೂತ ಪ್ರಸಂಗಗಳು ನಡೆದಿವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ವರ್ಗಾವಣೆಯನ್ನು ಪರಿಸರ ಪ್ರೇಮಿಗಳು ಸಂಭ್ರಮಿಸಿದ ವಿದ್ಯಮಾನ ಮಂಗಳೂರಿನಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಕೆ. ಜಿ. ಜಗದೀಶ್ ಅವರನ್ನು ರಾಜ್ಯ ಸರ್ಕಾರ ಏಕಾಏಕಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಅವರ ಸ್ಥಾನಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಾಗಿದ್ದ ಶಶಿಕಾಂತ್ ಸೆಂಥಿಲ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಈಗ ನೇಮಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಡಾ ಕೆ.ಜಿ ಜಗದೀಶ್ ಅವರ ವರ್ಗಾವಣೆ ಗೊಂಡಿರುವುದನ್ನು ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಸದಸ್ಯರು ಗಿಡ ನೆಟ್ಟು ಸಂಭ್ರಮಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಎದುರು ಸಸಿ ನೆಟ್ಟು ಸಂಭ್ರಮಿಸಿದ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಸದಸ್ಯರು, 'ಜಿಲ್ಲೆಯ ಮರಳು ಮಾಫಿಯಾವನ್ನು ಮಟ್ಟ ಹಾಕಲು ಡಾ. ಕೆ. ಜಿ ಜಗದೀಶ್ ವಿಫಲರಾಗಿದ್ದು ತಮ್ಮ ಧೋರಣೆಯಿಂದ ಮೊಂಡುತನ ಪ್ರದರ್ಶಿಸುತ್ತಿದ್ದರು,' ಎಂದು ಆರೋಪಿಸಿದ್ದಾರೆ .
ಜಿಲ್ಲಾಧಿಕಾರಿಯವರನ್ನು ಬೀಳ್ಕೊಡುಗೆ ಸಂದರ್ಭದಲ್ಲಿ ಸನ್ಮಾನಿಸಿ ಕಳಿಸಿ ಕೊಡಬೇಕಾಗಿತ್ತು. ಆದರೆ, ಡಾ. ಕೆ. ಜಿ. ಜಗದೀಶ್ ಅವರ ವರ್ಗಾವಣೆಯನ್ನು ಗಿಡ ನೆಟ್ಟು ಸಂಭ್ರಮಿಸುವ ಪರಿಸ್ಥಿತಿಯನ್ನು ಅವರೇ ಖುದ್ದು ತಂದೊಡ್ಡಿದ್ದಾರೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.