ಭೂಮಿ ನೀಡಿದವರಿಗೆ ಪರಿಹಾರ ನೀಡದ ಕಾರಣ ಹೆದ್ದಾರಿಗೆ ಬೇಲಿ ಹಾಕಿದ ಗ್ರಾಮಸ್ಥರು
ಮಂಗಳೂರು, ಜುಲೈ 20: ಭೂಮಿ ನೀಡಿದವರಿಗೆ ಪರಿಹಾರ ನೀಡದ ಕಾರಣ ರಾಷ್ಟ್ರೀಯ ಹೆದ್ದಾರಿಗೆ ಬೇಲಿ ಹಾಕಿ ಗ್ರಾಮಸ್ಥರು ಪ್ರತಿಭಟನೆ ಮಾಡಿದ ಘಟನೆ ದಕ್ಷಿಣ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ನಾವೂರದಲ್ಲಿ ನಡೆದಿದೆ.
ಗ್ರಾಮಸ್ಥರ ಪ್ರತಿಭಟನೆಯಿಂದ ಬಿ.ಸಿ ರೋಡ್- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾದ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣಕ್ಕಾಗಿ ನಾವೂರ ಗ್ರಾಮದ 32 ಜನರ ಭೂಮಿಯನ್ನು ಹೆದ್ದಾರಿ ಪ್ರಾಧಿಕಾರ ಇಲಾಖೆ 2018ರಲ್ಲೇ ಸ್ವಾಧೀನ ಮಾಡಿಕೊಂಡಿದೆ. ಬಿ.ಸಿ ರೋಡ್- ಪೂಂಜಾಲಕಟ್ಟೆಯ ಸುಮಾರು 19 ಕಿ.ಮೀ ರಸ್ತೆ ಅಗಲೀಕರಣ ಕಾಮಗಾರಿ ಇದಾಗಿದ್ದು, ಸುಮಾರು 200 ಎಕರೆಗಿಂತಲೂ ಜಾಸ್ತಿ ಭೂಸ್ವಾಧೀನವನ್ನು ಇಲಾಖೆ ಮಾಡಿಕೊಂಡಿದೆ.

ಕಳೆದ ಮೂರು ವರ್ಷಗಳಿಂದ ಪರಿಹಾರ ನೀಡದೆ ಹೆದ್ದಾರಿ ಪ್ರಾಧಿಕಾರ ಇಲಾಖೆ ಸತಾಯಿಸುತ್ತಿದೆ. ಭೂಸ್ವಾಧೀನ ಮಾಡಿ ಪರಿಹಾರ ನೀಡದೆ ಇಲಾಖೆ ಕಣ್ಣಮುಚ್ಚಾಲೆ ಆಟ ಆಡುತ್ತಿದ್ದು, ಇದರಿಂದ ರೋಸಿ ಹೋದ ರೈತರು ಇಲಾಖೆ ಸ್ವಾಧೀನ ಪಡಿಸಿದ ಕೃಷಿ ಭೂಮಿಗೆ ಬೇಲಿ ಹಾಕಿ ಪ್ರತಿಭಟನೆ ಮಾಡಿದ್ದಾರೆ.
ಗ್ರಾಮಸ್ಥರ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೃಷ್ಣಕುಮಾರ್ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆಗೆ ಪ್ರಯತ್ನ ಪಟ್ಟಿದ್ದಾರೆ.

ಈ ವೇಳೆ ಇಂಜಿನಿಯರ್ ಜೊತೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಹತ್ತು ದಿನದೊಳಗೆ ಪರಿಹಾರ ನೀಡದಿದ್ದರೆ ಹೆದ್ದಾರಿಗೆ ಸಂಪೂರ್ಣ ಬೇಲಿ ಹಾಕುವುದಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಗ್ರಾಮಸ್ಥರ ಮುಖಂಡ ಸದಾನಂದ, "ಅಭಿವೃದ್ಧಿ ಕಾರ್ಯಕ್ಕಾಗಿ ಕೃಷಿ ಭೂಮಿ ನೀಡಿದ್ದೇವೆ, ಆಗ ಪರಿಹಾರದ ಭರವಸೆ ನೀಡಿದವರು ಈಗ ಮೋಸ ಮಾಡುತ್ತಿದ್ದಾರೆ. ಅಧಿಕಾರಿಗಳು ಪರಿಹಾರ ನೀಡಬೇಕಾದರೆ ಕಮೀಷನ್ ಕೇಳುತ್ತಿದ್ದಾರೆ. ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡದಿದ್ದರೆ ಸಂಪೂರ್ಣ ರಸ್ತೆಗೆ ಬೇಲಿ ಹಾಕುವುದಾಗಿ,'' ಎಚ್ಚರಿಕೆ ನೀಡಿದರು.












Click it and Unblock the Notifications