ಎಚ್ಡಿಕೆ ಒಂದು ವಾರ ಆರ್ಎಸ್ಎಸ್ ಶಾಖೆಗೆ ಬರಲಿ; ನಳಿನ್ ಅಹ್ವಾನ
ಮಂಗಳೂರು, ಅಕ್ಟೋಬರ್ 07: "ದೇಶದಲ್ಲಿ ನಾಲ್ಕು ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳು ಆರ್ಎಸ್ಎಸ್ ಕಾರ್ಯಕರ್ತರು" ಎಂಬ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿಕೆಗೆ ಆರ್ಎಸ್ಎಸ್ ಮತ್ತು ಬಿಜೆಪಿ ನಾಯಕರು ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಕುರಿತು ರಾಜ್ಯದಲ್ಲಿ ಚರ್ಚೆಗಳು ಜೋರಾಗಿದೆ.
"ಆರ್ಎಸ್ಎಸ್ ಬಗ್ಗೆ ಹಗುರವಾಗಿ ಮಾತನಾಡಿದ ಕುಮಾರಸ್ವಾಮಿ ಒಂದು ವಾರ ಆರ್ಎಸ್ಎಸ್ ಶಾಖೆಗೆ ಬರಲಿ" ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಹ್ವಾನ ನೀಡಿದ್ದಾರೆ. "ಕೇವಲ ನಾಲ್ಕು ಸಾವಿರ ಮಾತ್ರವಲ್ಲ, ಅದಕ್ಕಿಂತ ಜಾಸ್ತಿನೇ ಇದ್ದಾರೆ" ಅಂತಾ ಸಚಿವ ಸುನೀಲ್ ಕುಮಾರ್ ಟಾಂಗ್ ನೀಡಿದ್ದಾರೆ.
ಮಂಗಳೂರಿನ ಸಂಘನಿಕೇತನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, "ಮಾಜಿ ಮುಖ್ಯ ಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮೊದಲು ಒಂದು ವಾರ ಶಾಖೆಗೆ ಬಂದು ಆರ್ಎಸ್ಎಸ್ ಬಗ್ಗೆ ತಿಳಿದುಕೊಳ್ಳಲಿ. ಕಾಮಲೆ ರೋಗಿಗೆ ಜಗತ್ತೆಲ್ಲಾ ಹಳದಿಯಾಗಿ ಕಾಣುವಂತೆ ಕುಮಾರಸ್ವಾಮಿ ಆರ್ಎಸ್ಎಸ್ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ" ಎಂದರು.

"ಆರ್ಎಸ್ಎಸ್ ರಾಷ್ಟ್ರ ಭಕ್ತಿ, ದೇಶ ಸೇವೆಗೆ ಇನ್ನೊಂದು ಹೆಸರು. ಕುಮಾರ ಸ್ವಾಮಿ ಕುಟುಂಬ ರಾಜಕಾರಣ, ಜಾತಿ ರಾಜಕಾರಣ ನಡೆಸುತ್ತಾ ಬಂದವರು. ತಮ್ಮ ಕುಟುಂಬ, ಜಾತಿಯವರನ್ನು ಆಯಕಟ್ಟಿನ ಜಾಗದಲ್ಲಿ ಇರಿಸಿಕೊಂಡು ಬಂದವರು. ಜೆಡಿಎಸ್ ಮುಖಂಡರಾಗಿದ್ದ ಸಿಂಧ್ಯಾ ಅವರು ಆರ್ಎಸ್ಎಸ್ ಮೂಲಕ ಬಂದವರು" ಎಂದು ತಿರುಗೇಟು ನೀಡಿದರು.
"ಆರ್ಎಸ್ಎಸ್ ದೇಶದಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಸಂಸ್ಥೆಗಳನ್ನು ನಡೆಸುತ್ತಾ, ದೇಶದ ಜನರಲ್ಲಿ ವ್ಯಕ್ತಿತ್ವ ನಿರ್ಮಾಣ, ರಾಷ್ಟ್ರ ನಿರ್ಮಾಣ ಮಾಡುವ ಕೆಲಸವನ್ನು ಮಾಡುತ್ತಾ ಬಂದಿದೆ. ಐಎಎಸ್, ಐಪಿಎಸ್ ಅಧಿಕಾರಿಗಳನ್ನು ನೇಮಿಸುವ ಕೆಲಸದಲ್ಲಿ ಆರ್ಎಸ್ಎಸ್ ತೊಡಗಿಕೊಂಡಿಲ್ಲ" ಅಂತಾ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಇದಕ್ಕೂ ಮುನ್ನ ಉಡುಪಿಯಲ್ಲಿ ಇಂಧನ ಸಚಿವ ಸುನೀಲ್ ಕುಮಾರ್ ಕೂಡಾ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. "ದೇಶದ 4000 ಐಎಎಸ್, ಐಪಿಎಸ್ಗಳು ಆರ್ಎಸ್ಎಸ್ ಕಾರ್ಯಕರ್ತರು ಅಂತಾ ಹೇಳಿದ ಕುಮಾರಸ್ವಾಮಿಯವರ ಹೇಳಿಕೆ ತಪ್ಪಾಗಿದೆ. ಕೇವಲ 4000 ಅಲ್ಲ, ಅದಕ್ಕೂ ಹೆಚ್ಚು ಜನ ಅಧಿಕಾರಿಳು ಆರ್ಎಸ್ಎಸ್ನವರಿದ್ದಾರೆ. ಕುಮಾರಸ್ವಾಮಿ ಲೆಕ್ಕಾಚಾರ ಕಡಿಮೆಯಾಗಿದೆ, ಇನ್ನು ಹೆಚ್ಚು ಮಂದಿ ಇದ್ದಾರೆ. ಆರ್ಎಸ್ಎಸ್ ಒಂದು ವ್ಯಕ್ತಿಯನ್ನು ನಿರ್ಮಾಣ ಮಾಡುವ ಸಂಘಟನೆ, ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಸಂಘಟನೆ" ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.
"ನಮ್ಮಂಥ ಅನೇಕ ವ್ಯಕ್ತಿಗಳನ್ನು ಆರ್ಎಸ್ಎಸ್ ತಯಾರು ಮಾಡಿದೆ. ವ್ಯಕ್ತಿತ್ವ ನಿರ್ಮಾಣ ಮಾಡಿಕೊಂಡವರು ಬೇರೆ ಬೇರೆ ಕ್ಷೇತ್ರದಲ್ಲಿದ್ದಾರೆ. ಸಾವಿರಾರು ಮಂದಿ ವಿವಿಧ ಕ್ಷೇತ್ರಗಳಲ್ಲಿ ಇದ್ದಾರೆ. ಬರೇ ಐಎಎಸ್, ಐಪಿಎಸ್ಗಳು ಮಾತ್ರ ಅಲ್ಲ. ಪಿಡಿಒನಿಂದ ರಾಷ್ಟ್ರಪತಿವರೆಗೆ ಆರ್ಎಸ್ಎಸ್ ಕಾರ್ಯಕರ್ತರು ಇದ್ದಾರೆ" ಎಂದು ಸುನೀಲ್ ಕುಮಾರ್ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.
"ಆರ್ಎಸ್ಎಸ್ಗೆ ಎಲ್ಲರ ಮುಖಾಂತರ ರಾಷ್ಟ್ರ ನಿರ್ಮಾಣ ಮಾಡುವ ಗುರಿ ಇದೆ. ರಾಷ್ಟ್ರ ನಿರ್ಮಾಣದ ಪರ ಇರುವವರು ಇದನ್ನು ಸ್ವಾಗತಿಸುತ್ತಾರೆ. ರಾಷ್ಟ್ರ ನಿರ್ಮಾಣದ ಕನಸು ಇಲ್ಲದವರು ವಿರೋಧಿಸುತ್ತಾರೆ. ಈ ರೀತಿ ಮಾತನಾಡುವವರ ಬಗ್ಗೆ ಅನುಕಂಪವಿದೆ. ಭಾರತ ವಿಶ್ವಕ್ಕೆ ಮಾರ್ಗದರ್ಶನ ಮಾಡಬೇಕೆಂದು ಕಲಾಂ ಬಯಸಿದ್ದರು. ಪ್ರಧಾನಿ ನರೇಂದ್ರ ಮೋದಿ ಕಲಾಂ ಆಸೆಯನ್ನು ಸಾಧನೆ ಮೂಲಕ ನಿಜ ಮಾಡುತ್ತಿದ್ದಾರೆ. ಭಾರತ ನಂಬರ್ ಒನ್ ಆಗಲು ವ್ಯಕ್ತಿ ನಿರ್ಮಾಣವಾಗಬೇಕು. ವ್ಯಕ್ತಿ ನಿರ್ಮಾಣ ಮಾಡುವ ಜಗತ್ತಿನ ಏಕೈಕ ಸಂಘಟನೆ ಆರ್ಎಸ್ಎಸ್" ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.

ಕುಮಾರಸ್ವಾಮಿ, ದೇವೆಗೌಡರಿಗೂ ಈ ಸಂಧರ್ಭದಲ್ಲಿ ಮಾತಿನ ಮೂಲಕ ಛಡಿಯೇಟು ನೀಡಿದ ಸುನೀಲ್ ಕುಮಾರ್, "ಅಪ್ಪ-ಮಕ್ಕಳು ಬೇರೆ ಬೇರೆ ಸಂದರ್ಭದಲ್ಲಿ ಬೇರೆ-ಬೇರೆ ರೀತಿ ಮಾತನಾಡುತ್ತಾರೆ. ಆರ್ಎಸ್ಎಸ್ ಹೆಸರನ್ನು ಬೇಕಾದಂತೆ ಬಳಸಿಕೊಂಡಿದ್ದಾರೆ. ಅವರಿಗೆ ಬೇಕಾದಂತೆ ಬಳಸಿಕೊಳ್ಳುವ ಸಂಘಟನೆ ಆರ್ಎಸ್ಎಸ್ ಅಲ್ಲ. ಕುಮಾರಸ್ವಾಮಿ ಹೇಳಿದರು ಅಂತ ಈ ಕೆಲಸ ನಿಲ್ಲೋದಿಲ್ಲ. ಈ ಕೆಲಸ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ" ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.











Click it and Unblock the Notifications