ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಬಂತು ಎಸ್ಕಲೇಟರ್
ಮಂಗಳೂರು, ಜುಲೈ 09 : ಮಂಗಳೂರು ನಗರ ಕೇಂದ್ರ ರೈಲು ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ಎರಡು ಎಸ್ಕಲೇಟರ್ಗಳಿಗೆ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಚಾಲನೆ ನೀಡಿದರು. ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಇವುಗಳನ್ನು ನಿರ್ಮಿಸಲಾಗಿದೆ.
ನಗರ ಕೇಂದ್ರ ರೈಲ್ವೆ ನಿಲ್ದಾಣದಲ್ಲಿನ ಪ್ರಮುಖ ಬೇಡಿಕೆಗಳಲ್ಲಿ ಎಸ್ಕಲೇಟರ್ ಕೂಡಾ ಒಂದಾಗಿತ್ತು. ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣ ಮಾರ್ಗವಾಗಿ ಪ್ರತಿನಿತ್ಯ 52 ರೈಲುಗಳು ಸಂಚರಿಸುತ್ತವೆ. ಸುಮಾರು 27,000 ಪ್ರಯಾಣಿಕರು ರೈಲ್ವೆ ನಿಲ್ದಾಣದ ಪ್ರಯೋಜನ ಪಡೆಯುತ್ತಿದ್ದು, ಅವರಿಗೆ ಎಸ್ಕಲೇಟರ್ ನೆರವಾಗಲಿದೆ. [ರೈಲಿನಲ್ಲಿ ತೊಂದರೆಯಾದರೆ 182 ಸಂಖ್ಯೆಗೆ ಕರೆ ಮಾಡಿ]

'ಮಂಗಳೂರು-ಬೆಂಗಳೂರು ನಡುವೆ ಹೆಚ್ಚು ರೈಲುಗಳ ಸಂಚಾರಕ್ಕೆ ಬೇಡಿಕೆ ಇದೆ. ಕೆಲವೊಂದು ರೈಲುಗಳು ಕೇವಲ ಜಂಕ್ಷನ್ವರೆಗೆ ಮಾತ್ರ ಬರುತ್ತಿದ್ದು, ಅವುಗಳು ಕೇಂದ್ರ ರೈಲು ನಿಲ್ದಾಣದ ವರೆಗೂ ಬರುವಂತೆ ಮಾಡಬೇಕೆಂಬ ಆಗ್ರಹವಿದೆ' ಎಂದು ಸಂಸದರು ಹೇಳಿದರು. [ಪ್ರಯಾಣಿಕರೆ ಗಮನಿಸಿ : ಮಂಗಳೂರು-ಮುಂಬೈ ವಿಶೇಷ ಎಸಿ ರೈಲು]
'ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗದ ಬೇಡಿಕೆ ಬಹಳಷ್ಟು ವರ್ಷಗಳದ್ದಾಗಿದೆ. ದಕ್ಷಿಣ ರೈಲ್ವೆ, ನೈಋತ್ಯ ರೈಲ್ವೆ ಹಾಗೂ ಕೊಂಕಣ ರೈಲ್ವೆ ನಿಗಮದಲ್ಲಿ ಮಂಗಳೂರು ಹಂಚಿ ಹೋಗಿದ್ದು ತ್ರಿಶಂಕು ಸ್ಥಿತಿಯಲ್ಲಿದೆ. ದಕ್ಷಿಣ ರೈಲ್ವೆ ಅಧೀನದಲ್ಲಿ ಕೇವಲ 13 ಕಿ.ಮೀ. ಮಾರ್ಗಮಾತ್ರ ಬರುತ್ತಿದೆ' ಎಂದು ಸಂಸದರು ವಿವರಣೆ ನೀಡಿದರು.
'ಪ್ರಸ್ತುತ ಮಂಗಳೂರು- ಮಡಂಗಾವ್ ನಡುವೆ ಸಂಚರಿಸುತ್ತಿ ರುವ ಇಂಟರ್ ಸಿಟಿ ರೈಲನ್ನು ಮುಂಬೈ ತನಕ ವಿಸ್ತರಿಸುವ ಪ್ರಸ್ತಾಪ ರೈಲ್ವೆ ಸಚಿವಾಲಯದ ಮುಂದಿದೆ. ಕಾಸರಗೋಡು-ಬೈಂದೂರು ರೈಲು ಹೆಚ್ಚಿನ ಜನರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ವೇಳಾಪಟ್ಟಿ ಮಾರ್ಪಾಡು ಮಾಡಬೇಕು ಹಾಗೂ ಇದನ್ನು ಕುಕ್ಕೆ ಸುಬ್ರಹ್ಮಣ್ಯ ದವರೆಗೆ ವಿಸ್ತರಿಸಬೇಕು ಎಂಬ ಬೇಡಿಕೆ ಇದೆ' ಎಂದು ನಳೀನ್ ಕುಮಾರ್ ಕಟೀಲ್ ಹೇಳಿದರು.












Click it and Unblock the Notifications