ಪುತ್ತೂರು ಜಾತ್ರೋತ್ಸವ ಸಿಡಿಮದ್ದು ಪ್ರದರ್ಶನಕ್ಕೂ ಮುಸ್ಲಿಂ ವ್ಯಾಪಾರಿಗೆ ಕೊಕ್; ಶತಮಾನಗಳ ಬಾಂಧವ್ಯಕ್ಕೆ ಬ್ರೇಕ್
ಮಂಗಳೂರು, ಮಾರ್ಚ್ 29: ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ವಿಚಾರ ಮತ್ತೆ ಮುಂದುವರಿದಿದೆ. ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಪ್ರಮುಖ ಆಕರ್ಷಣೆ.
ಸಿಡಿಮದ್ದು ಪ್ರದರ್ಶನಕ್ಕೂ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಪುತ್ತೂರು ಬೆಡಿ ಅಂತಾನೇ ಹೆಸರುವಾಸಿಯಾದ ಸಿಡಿಮದ್ದು ಪ್ರದರ್ಶನದ ಗುತ್ತಿಗೆಯನ್ನು ಪ್ರತಿವರ್ಷ ಮುಸ್ಲಿಂ ವ್ಯಾಪಾರಿಗಳಿಗೆ ನೀಡುತ್ತಿದ್ದು, ಆದರೆ ಈ ಬಾರಿ ಹಿಂದೂ ವ್ಯಾಪಾರಿಗಳಿಗೆ ಈ ಅವಕಾಶ ನೀಡಲಾಗಿದೆ.
ಏಪ್ರಿಲ್ 10ರಿಂದ ಆರಂಭವಾಗುವ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಏಪ್ರಿಲ್ 20ರವರೆಗೆ ಹತ್ತು ದಿನಗಳ ಕಾಲ ನಡೆಯಲಿದೆ. ಏಪ್ರಿಲ್ 17ರಂದು ಜಾತ್ರೋತ್ಸವದ ಪ್ರಮುಖ ಕಾರ್ಯಕ್ರಮವಾದ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವವೂ ನಡೆಯಲಿದೆ. ದೇವಳ ಎದುರಿನ ರಥಬೀದಿಯಲ್ಲಿ ದೇವರ ಬಹ್ಮರಥೋತ್ಸವ ನಡೆಯಲಿದೆ.

ದೇವರು ರಥದ ಮೇಲೆ ವಿರಾಜಮಾನರಾಗುವ ಹೊತ್ತಿನಲ್ಲಿ ಬಹು ಆಕರ್ಷಣೆಯ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಈ ಸಿಡಿಮದ್ದು ಪ್ರದರ್ಶನ "ಪುತ್ತೂರು ಬೆಡಿ' ಅಂತಾನೇ ಖ್ಯಾತಿಯಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಸಿಡಿಮದ್ದು ಪ್ರದರ್ಶನವಾಗಲಿದೆ. ಬ್ರಹ್ಮ ರಥೋತ್ಸವ ನಡೆಯುವ ವೇಳೆ ಈ ಸಿಡಿಮದ್ದು ಪ್ರದರ್ಶನ ಜಾತ್ರೋತ್ಸವದಲ್ಲಿ ಬೆಳಕಿನ ಲೋಕವನ್ನೇ ಸೃಷ್ಟಿಸುತ್ತದೆ. ಈ ಸಿಡಿಮದ್ದು ಪ್ರದರ್ಶನ ನೋಡಲೇಂದೇ ಅಕ್ಕಪಕ್ಕದ ಜಿಲ್ಲೆಯಿಂದ ಲಕ್ಷಾಂತರ ಜನ ಪುತ್ತೂರು ಜಾತ್ರೆಗೆ ಆಗಮಿಸುತ್ತಾರೆ.
ಪ್ರತಿವರ್ಷ ಈ ಸಿಡಿಮದ್ದು ಪ್ರದರ್ಶನದ ಗುತ್ತಿಗೆಯನ್ನು ಮುಸ್ಲಿಂ ವ್ಯಾಪಾರಿಗೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧಿಸಲಾಗಿದೆ. ಈ ಬಾರಿ ಪುತ್ತೂರು ಜಾತ್ರೆಯ ಸಿಡಿಮದ್ದು ಪ್ರದರ್ಶನ ಹಿಂದೂ ವ್ಯಾಪಾರಿಗೆ ನೀಡಲು ದೇವಳದ ಆಡಳಿತ ಮಂಡಳಿ ನಿರ್ಧಾರ ಮಾಡಿದೆ.

ಈ ಬಗ್ಗೆ ದೇವಸ್ಥಾನದಲ್ಲಿ ನಡೆದ ಪುತ್ತೂರು ಜಾತ್ರೋತ್ಸವ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಪುತ್ತೂರು ಜಾತ್ರೋತ್ಸವದ ಸಿಡಿಮದ್ದು ಪ್ರದರ್ಶನ ಹಿಂದೂ ವ್ಯಾಪಾರಿಗಳಿಗೆ ನೀಡಲು ತೀರ್ಮಾನ ಮಾಡಲಾಗಿದ್ದು, ಇದಕ್ಕಾಗಿ ಉಪಸಮಿತಿಯನ್ನು ತಯಾರಿಸಲಾಗಿದೆ. ಜಾತ್ರೋತ್ಸವದಲ್ಲಿ ಸಂಪೂರ್ಣ ಸಾಮರಸ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, "ಕಾನೂನಿನ ಚೌಕಟ್ಟಿನಲ್ಲಿ ಸಭೆ ನಡೆಯಬೇಕು. ಇದಕ್ಕಾಗಿ ಸಂಘಟನೆಗಳ ಸಭೆ ಕರೆದು ಸೂಕ್ತ ಭದ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಜಾತ್ರೆಯಲ್ಲಿ ಧಾರ್ಮಿಕ ದತ್ತಿ ನಿಯಮಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಜಾತ್ರಾ ಗದ್ದೆಯಲ್ಲಿ ಅನ್ಯಧರ್ಮೀಯರಿಗೆ ಅವಕಾಶ ನೀಡಬಾರೆದೆಂಬ ನಿಯಮವನ್ನು ಪಾಲಿಸಲಾಗಿದ್ದು, ದೇವಸ್ಥಾನದ ಆವರಣ ಮತ್ತು ಆಸುಪಾಸಿನಲ್ಲಿ ಅನ್ಯಧರ್ಮೀಯರಿಗೆ ಏಲಂನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿಲ್ಲ. ಜಾತ್ರೋತ್ಸವ ಅಂಗಡಿಗಳ ಏಲಂ ಪ್ರಕ್ರಿಯೆ ಮಾರ್ಚ್ 29ರಂದು ನಡೆಯಲಿದ್ದು, ಕೇವಲ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಅಂತಾ ಹೇಳಲಾಗಿದೆ".

"ಕರಾವಳಿಯ ಬಹುತೇಕ ದೇವಸ್ಥಾನಗಳ ಜಾತ್ರೋತ್ಸವ, ನೇಮ-ನಡಾವಳಿಗಳಲ್ಲಿ ಸಿಡಿಮದ್ದು ಪ್ರದರ್ಶನ ಮುಸ್ಲಿಂ ವ್ಯಾಪಾರಿಗಳೇ ನಡೆಸಿಕೊಂಡು ಬರುತ್ತಿದ್ದರು. ಆದರೆ ಇದೀಗ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಡಿಮದ್ದು ಪ್ರದರ್ಶನಕ್ಕೆ ಮುಸ್ಲಿಂ ವ್ಯಾಪಾರಿಗೆ ಅವಕಾಶ ನಿರಾಕರಿಸಲಾಗಿದೆ. ಜಾತ್ರೋತ್ಸವದಲ್ಲಿ ನಡೆಸಲಾಗುವ ಸಿಡಿಮದ್ದು ಪ್ರದರ್ಶನದ ಮುಸ್ಲಿಂ ವ್ಯಾಪಾರಿಯನ್ನು 'ಗರ್ನಲ್ ಸಾಹೀಬರು' ಅಂತಾ ಉಲ್ಲೇಖ ಮಾಡಲಾಗುತಿತ್ತು. ಆದರೆ ಈ ವಿವಾದ ಆ ಸಾಮರಸ್ಯದ ಕೊಂಡಿಗೂ ಕೊಳ್ಳಿ ಇಟ್ಟಿದೆ ಅನ್ನುವುದು ಬಹುಜನರ ವಾದವಾಗಿದೆ".












Click it and Unblock the Notifications