ಮೋದಿ ಅಲೆಗೆ ಕಾಂಗ್ರೆಸ್ ತತ್ತರ : ಅನಂತ್ ಕುಮಾರ್
ಮಂಗಳೂರು, ಏ.2: ಶೃಂಗೇರಿಯಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಮತಯಾಚನೆ ಮಾಡಿದ ಬೆನ್ನಲ್ಲೇ ಮಂಗಳೂರಿಗೆ ಬಂದಿರುವ ಅನಂತ್ ಕುಮಾರ್ ಅವರು ನಳೀನ್ ಕುಮಾರ್ ಕಟೀಲು ಪರ ಮತಬೇಟೆ ಆರಂಭಿಸಿದರು. ರಾಜ್ಯದೆಲ್ಲೆಡೆ ಮೋದಿ ಅಲೆ ವ್ಯಾಪಕವಾಗಿದ್ದು ಈ ಬಾರಿ ಕಾಂಗ್ರೆಸ್ ನೆಲಕಚ್ಚಲಿದೆ, ಸಮೀಕ್ಷೆಗಳು ಇದ್ದನ್ನೇ ಹೇಳಿವೆ ಎಂದಿದ್ದಾರೆ.
ಮೋದಿ ಅಲೆಗೆ ತತ್ತರಿಸಿರುವ ಕಾಂಗ್ರೆಸ್ ನಾಯಕರು ದಿನಕ್ಕೊಂದರಂತೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ಗಮನಿಸಿದರೆ ಕಾಂಗ್ರೆಸ್ಸಿಗೆ ಸೋಲಿನ ಭಯ ಎದುರಾಗಿರುವುದು ಸ್ಪಷ್ಟವಾಗುತ್ತದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಕೂಡಾ ಬಿಜೆಪಿ ಪರವಾಗಿ ಬಂದಿದ್ದು ಕರ್ನಾಟಕದಲ್ಲಿ ಬಿಜೆಪಿ 20 ಸ್ಥಾನ ಗೆಲ್ಲಲಿದೆ ಎಂದು ಕೊಡಿಯಾಲ್ ಬೈಲ್ ನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಅನಂತ್ ಕುಮಾರ್ ಹೇಳಿದರು.[ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಕಾಂಗ್ರೆಸ್ ಪಕ್ಷ ಸಮರ್ಥ ನಾಯಕರನ್ನು ಚುನಾವಣೆಗೆ ನಿಲ್ಲಿಸುವಲ್ಲೂ ವಿಫಲವಾಗಿದೆ. ಹಿರಿಯ ನಾಯಕ ಎಸ್ ಎಂ ಕೃಷ್ಣ ಅವರು ಕೂಡಾ ತಮ್ಮ ಪಕ್ಷದ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ಪ್ರಧಾನಿ ಅಭ್ಯರ್ಥಿ ಘೋಷಿಸದೆ ಮತದಾರರಲ್ಲಿ ಗೊಂದಲ ಉಂಟು ಮಾಡಿದ್ದಾರೆ. ಇದೇ ಗೊಂದಲ ಬಿಜೆಪಿಗೆ ವರದಾನವಾಗಲಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಎಲ್ಲೆಡೆ ಜಯಭೇರಿ ಬಾರಿಸುವ ವಿಶ್ವಾಸವಿದೆ ಎಂದರು.
ಪ್ರಮೋದ್ ಮುತಾಲಿಕ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಹೊರಹಾಕಿದ್ದರ ಹಿಂದೆ ನಿಮ್ಮ ಕೈವಾಡ ಇದೆಯೇ? ಎಂಬ ಪ್ರಶ್ನೆಯನ್ನು ತಳ್ಳಿ ಹಾಕಿದ ಅನಂತ್ ಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಲಾರೆ ಎಂದು ಬಿಟ್ಟರು. ಅನಂತ್ ಅವರ ಸುದ್ದಿಗೋಷ್ಠಿ ಇನ್ನಷ್ಟು ವಿವರ ಮುಂದಿದೆ...

ಕಾಂಗ್ರೆಸ್ ವಿಫಲ ತೃತೀಯ ರಂಗ ಅತಂತ್ರ
ಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಪೂರ್ಣ ವೈಫಲ್ಯ ಆಡಳಿತ ನೀಡಿದ್. ಯುಪಿಎ ಸರ್ಕಾರ ನಾಯಕತ್ವದ ಕೊರತೆ ಅನುಭವಿಸುತ್ತಿದೆ. ತೃತೀಯ ರಂಗವನ್ನು ಜನ ಖಂಡಿತ ಇಷ್ಟಪಡುವುದಿಲ್ಲ. ಆರ್ಥಿಕವಾಗಿ ಸಾಮಾಜಿಕವಾಗಿ ಭದ್ರತೆಯನ್ನು ಜನ ಬಯಸಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅನಂತ್ ಜತೆ ಯಾರಿದ್ದರು?
ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ಶಾಸಕ ಮೋನಪ್ಪ ಭಂಡಾರಿ, ಮಾಜಿ ಶಾಸಕ ಯೋಗೀಶ್ ಭಟ್, ಸುಲೋಚನಾ ಭಟ್ ಹಾಗೂ ಇನ್ನಿತರ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಯಾರು ಗೊತ್ತಿಲ್ಲ
ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಯಾರು ಗೊತ್ತಿಲ್ಲ. ಸೋನಿಯಾ ಗಾಂಧಿ ತಯಾರಿಲ್ಲ. ಮನಮೋಹನ್ ಸಿಂಗ್ ಚುನಾವಣೆಗೆ ನಿಲ್ಲದೆ ಪಲಾಯನವಾದಿಯಾಗಿದ್ದಾರೆ. ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಮಾಡಿ ಬಲಿಪಶು ಮಾಡಲು ಸೋನಿಯಾ ಸಿದ್ಧರಿಲ್ಲ. ಹೀಗಾಗಿ ಸ್ಥಿರ ಸರ್ಕಾರಕ್ಕಾಗಿ ಮೋದಿ ಅವರನ್ನು ಗೆಲ್ಲಿಸುವುದು ಜನರಿಗೆ ಅನಿವಾರ್ಯವಾಗಿದೆ.

ಬೆಂಗಳೂರಿನಲ್ಲಿ ಐದು ದಳಗಳಾಗಿ ಗೆಲ್ಲುತ್ತೇವೆ
ಬೆಂಗಳೂರಿನಲ್ಲಿ ಪಿಸಿ ಮೋಹನ್, ಸದಾನಂದ ಗೌಡ, ಬಚ್ಚೇಗೌಡ, ಮುನಿರಾಜುಗೌಡ ಜತೆಗೆ ನನ್ನನ್ನು ಜನ ಆಯ್ಕೆ ಮಾಡುವುದರ ಮೂಲಕ ಕಮಲ ಪಕ್ಷದ ಐದು ದಳಗಳಾಗಿ ಗೆದ್ದು ಬರುತ್ತೇವೆ. ಕರ್ನಾಟಕದಲ್ಲಿ 20 ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ ಎಂದರು.











Click it and Unblock the Notifications