ಮೀನುಗಾರರ ಸುರಕ್ಷತೆಗೆ ಬರಲಿದೆ ಬೋಟ್ ಟ್ರ್ಯಾಕರ್ ಆ್ಯಪ್
ಮಂಗಳೂರು, ಆಗಸ್ಟ್ 27: ಭದ್ರತೆ ದೃಷ್ಟಿಯಿಂದ ಹಾಗೂ ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕುವ ಮೀನುಗಾರರ ರಕ್ಷಣೆಗೆ ಸಹಕಾರಿ ಯಾಗಲು ದಕ್ಷಿಣ ಕನ್ನಡ ಜಿಲ್ಲಾಡಳಿತ ತಂತ್ರಜ್ಞಾನದ ಮೊರೆ ಹೋಗಿದೆ. ಇದಕ್ಕಾಗಿ ಆರಂಭಿಸಿದ್ದ ಬೋಟ್ ಟ್ರ್ಯಾಕರ್ ಆ್ಯಪ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ಪ್ರಥಮ ಹಂತದಲ್ಲಿ ಮಂಗಳೂರು ಕರಾವಳಿಯ ಐದು ಬೋಟ್ಗಳಲ್ಲಿ ಪೈಲಟ್ ಪ್ರಾಜೆಕ್ಟ್ ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ. ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರ ಸುರಕ್ಷತೆಗೆ ಈ ಆ್ಯಪ್ ನೆರವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬೋಟ್ಗಳೆಷ್ಟು? ಅದರಲ್ಲಿ ಇರುವ ಮೀನುಗಾರರು ಯಾರು ಮತ್ತು ಅವರ ಸುರಕ್ಷತೆ ಕುರಿತು ನಿಖರ ಮಾಹಿತಿಯನ್ನು ಜಿಲ್ಲಾಡಳಿತ ಪಡೆಯಲು ಅನುಕೂಲವಾಗುವಂತೆ ಹೊಸ ಆ್ಯಪ್ ಸಿದ್ಧಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರ ಪರಿಕಲ್ಪನೆಯ ಈ ಆ್ಯಪ್ ಅನ್ನು ಮೈಸೂರಿನ ವಿಝ್ಲೈಟ್ ಇನೊವೇಶನ್ ಸೆಂಟರ್ ರೂಪಿಸಿದೆ. ಪೈಲಟ್ ಪ್ರಾಜೆಕ್ಟ್ ಆಗಿ ಮುಂದಿನ ವಾರ ಮಂಗಳೂರಿನ ಕರಾವಳಿಯ ಐದು ಬೋಟ್ಗಳಲ್ಲಿ ಜಾರಿಗೊಳಿಸಲು ತಯಾರಿ ನಡೆದಿದೆ. ಮೊದಲ ಹಂತದಲ್ಲಿ ದಕ್ಷಿಣ ಕನ್ನಡದ ಕರಾವಳಿಯಲ್ಲಿ ಈ ಆ್ಯಪ್ ಬಳಸಲು ಉದ್ದೇಶಿಸಲಾಗಿದ್ದು, ಮುಂದಿನ ಹಂತದಲ್ಲಿ ಕರ್ನಾಟಕ ಕರಾವಳಿಯ ಇತರ ಜಿಲ್ಲೆಗಳಲ್ಲಿ ಕೂಡ ಉಪಯೋಗಿಸುವ ಕುರಿತು ಚರ್ಚೆ ನಡೆಯುತ್ತಿದೆ.

ಮುಂಬರುವ ದಿನಗಳಲ್ಲಿ ಹೊಸ ಆ್ಯಪ್ ಅನ್ನು ಎಲ್ಲ ಬೋಟ್ ಮಾಲೀಕರು ಡೌನ್ಲೋಡ್ ಮಾಡಿಟ್ಟುಕೊಳ್ಳಲಿದ್ದಾರೆ. ಬೋಟ್ ಪ್ರತೀ ಬಾರಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೊದಲು ಬೋಟ್ ನಲ್ಲಿರುವ ಮೀನುಗಾರರ ತಂಡದ ನಾಯಕ ಬೋಟ್ನಲ್ಲಿರುವ ಸದಸ್ಯರ ಗುಂಪು ಚಿತ್ರ ಅಥವಾ ವಿಡಿಯೋ ತೆಗೆದು ಪೂರಕ ಮಾಹಿತಿ ಜತೆ ಆ್ಯಪ್ನಲ್ಲಿ ಅಪ್ಲೋಡ್ ಮಾಡಬೇಕಿದೆ.

ಮೀನುಗಾರಿಕೆ ನಡೆಸಿ ವಾಪಸಾಗುವ ಸಂದರ್ಭದಲ್ಲಿ ಕೂಡ ಚಿತ್ರವನ್ನು ಅಪ್ಲೋಡ್ ಮಾಡಬೇಕಾಗಿದೆ. ಹೊಸ ಆ್ಯಪ್ ಜಿಪಿಎಸ್ ಆಧಾರದಲ್ಲಿ ಕಾರ್ಯನಿರ್ವಹಿಸಲಿದೆ. ಚಂಡಮಾರುತ ಸೇರಿದಂತೆ ಇತರ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಅಗತ್ಯ ಮುಂಜಾಗರೂಕತಾ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಈ ಆ್ಯಪ್ ನೆರವಾಗಲಿದೆ.












Click it and Unblock the Notifications