ಬೀಫ್ ರಫ್ತು ಮಾಡೋ ಹೆಚ್ಚಿನ ಕಂಪನಿಗಳು ಬಿಜೆಪಿ ಸಂಸದರದ್ದು:ಮಿಥುನ್ ರೈ
ಮಂಗಳೂರು, ಅಕ್ಟೋಬರ್. 15: ದೇಶ ಬೀಫ್ ರಫ್ತಿನಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಇದು ಕೇಂದ್ರದ ಬಿಜೆಪಿ ಸರಕಾರ ಸಾಧನೆ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಟೀಕಿಸಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀಫ್ ರಫ್ತು ಮಾಡುವ ಹೆಚ್ಚಿನ ಕಂಪನಿಗಳು ಬಿಜೆಪಿ ಸಂಸದರದ್ದು. ಆದರೆ ಮಂಗಳೂರಿನಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದವರು ಕಸಾಯಿಖಾನೆ ವಿರುದ್ಧ ಪ್ರತಿಭಟನೆ ಮಾಡುತ್ತಾರೆ.
ಸಂಘ ಪರಿವಾರದ್ದು ಗೋ ಮಾತೆಯ ಮೇಲಿನ ನೈಜ ಕಾಳಜಿಯಾಗಿದ್ದರೆ ಕೇಂದ್ರ ಸರಕಾದ ವಿರುದ್ಧ ಪ್ರತಿಭಟಿಸಲಿ ಎಂದು ಸವಾಲು ಹಾಕಿದರು.

ಸಚಿವ ಯುಟಿ ಖಾದರ್ ಅವರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಸಾಯಿಖಾನೆಗಳ ಅಭಿವೃದ್ಧಿಯ ಸಲಹೆ ನೀಡಿದ್ದು ಮಾತ್ರ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ರಾಜಕೀಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ಖಾದರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಇದು ಸಂಘಪರಿವಾರದ ಮುಖಂಡರಿಗೆ ಶೋಭೆ ತರುವಂತದ್ದಲ್ಲ ಎಂದು ಕಿಡಿಕಾರಿದರು.
ಸ್ಮಾರ್ಟ್ ಸಿಟಿ ಯೋಜನೆಯಲ್ಲೇ ಕಸಾಯಿಖಾನೆಗಳ ಅಭಿವೃದ್ಧಿ ಪ್ರಸ್ತಾಪಿಸಲಾಗಿದೆ. ಬಿಜೆಪಿ ಸಂಸದರು, ಶಾಸಕರು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಸಾಯಿಖಾನೆ ಅಭಿವೃದ್ಧಿಯ ಪ್ರಸ್ತಾವನೆಯನ್ನು ಸೇರಿಸುವಾಗ ಪ್ರತಿಭಟನೆ ಮಾಡಬಹುದಿತ್ತು.

ಈಗಲೂ ಕೇಂದ್ರದಲ್ಲಿ ನಗರಾಭಿವೃದ್ಧಿ ಸಚಿವರ ಮೂಲಕ ಅದನ್ನು ಬದಲಾಯಿಸಲು ಸಾಧ್ಯವಿದೆ. ಅದನ್ನು ಬಿಟ್ಟು, ಕೇವಲ ರಾಜಕೀಯ ಉದ್ದೇಶದಿಂದ, ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಮಿಥುನ್ ರೈ ತಾಕೀತು ಮಾಡಿದರು.












Click it and Unblock the Notifications