'ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀರಾಮನ ಎತ್ತರಕ್ಕೆ ಏರಿದ್ದಾರೆ'
ಮಂಗಳೂರು, ಅಕ್ಟೋಬರ್.25: ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ 51ನೇ ವರ್ಷದ ಪಟ್ಟಾಭಿಷೇಕ ವರ್ಧಂತಿ ಉತ್ಸವ ಧರ್ಮಸ್ಥಳದಲ್ಲಿ ಬುಧವಾರ(ಅ.24) ನಡೆಯಿತು.
ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಮಹೋತ್ಸವದ 51ನೇ ವರ್ಷಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಪಾಲ್ಗೊಳ್ಳಬೇಕಾಗಿತ್ತು. ಆದರೆ ಮುಖ್ಯಂಮಂತ್ರಿ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಆಗಿದ್ದರಿಂದ ಈ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.
ಮುಖ್ಯ ಮಂತ್ರಿ ಅವರ ಅನುಪಸ್ಥಿತಿಯಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಕಾರ್ಯಕ್ರಮ ಉದ್ಘಾಟಿಸಿದರು.
ಇದೇ ವೇಳೆ, ಧರ್ಮಸ್ಥಳದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಮಂಜೂಷಾ ವಸ್ತು ಸಂಗ್ರಹಾಲಯವನ್ನು ಸಚಿವರು ಉದ್ಘಾಟಿಸಿದರು. ಅಲ್ಲದೆ, ಧರ್ಮಸ್ಥಳ ಆಸುಪಾಸಿನಲ್ಲಿ ನಡೆಯಲಿರುವ ವಿವಿಧ ರಸ್ತೆಗಳ ಅಭಿವೃದ್ಧಿಯ ಶಿಲಾನ್ಯಾಸವನ್ನು ಸಚಿವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ರೇವಣ್ಣ, ಫೆಬ್ರವರಿಯಲ್ಲಿ ನಡೆಯೋ ಮಹಾಮಸ್ತಕಾಭಿಷೇಕಕ್ಕೆ ಮುಖ್ಯಮಂತ್ರಿಯವರಿಂದ ಪೂರ್ಣ ಸಿದ್ಧತೆ ನಡೆಯಲಿದೆ. ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ 23 ಕೋಟಿ ರೂಪಾಯಿಯನ್ನು ವಿವಿಧ ಕಾಮಗಾರಿಗಳಿಗೆ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

100 ಕೋಟಿ ರೂಪಾಯಿ ಬಿಡುಗಡೆ
"ಬಿಸಿ ರೋಡ್ ನಿಂದ ಧರ್ಮಸ್ಥಳದವರೆಗೆ ರಸ್ತೆ ಅಭಿವೃದ್ಧಿಗೆ ಕೇಂದ್ರದಿಂದ 100 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಮಹಾಮಸ್ತಕಾಭಿಷೇಕದ ಸಂದರ್ಭ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು, ಗುತ್ತಿಗೆದಾರರಿಗೆ ತಿಳಿಸಿದ್ದೇನೆ" ಎಂದು ಎಚ್.ಡಿ ರೇವಣ್ಣ ಭರವಸೆ ನೀಡಿದರು. ನಂತರ ಡಾ.ಹೆಗ್ಗಡೆ ಅವರನ್ನು ಸನ್ಮಾನಿಸಿದರು.

ಅತ್ಯಂತ ಸ್ವಚ್ಛತೆಯ ದೇವಸ್ಥಾನ ಧರ್ಮಸ್ಥಳ
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯು ಟಿ ಖಾದರ್, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆಯವರು ದೇಶಕ್ಕೆ ಮಾದರಿ. ಭಾರತದ ಅತ್ಯಂತ ಸ್ವಚ್ಛತೆಯ ದೇವಸ್ಥಾನವೆಂದು ಧರ್ಮಸ್ಥಳ ಖ್ಯಾತಿ ಪಡೆದಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಸ್ವಾಭಿಮಾನದ ಜೀವನ ಸಾಗಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರಣವಾಗಿದೆ ಎಂದು ಹೇಳಿದರು.

ನಾನೂ ಕಾರ್ಯಕರ್ತನಂತೆ ಭಾಗಿಯಾಗುತ್ತೇನೆ
ಆದರ್ಶ ವ್ಯಕ್ತಿಗಳ ಜೀವನಗಾಥೆ ಓದುವುದರ ಜೊತೆಗೆ ಹೆಗಡೆಯವರು ಸಾಗಿದ ಹಾದಿ ಬಗ್ಗೆ ಓದಿದಲ್ಲಿ ವ್ಯಕ್ತಿತ್ವ ಬದಲಾವಣೆ ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ಮಸ್ತಕಾಭಿಷೇಕದ ಸಂದರ್ಭ ಎಲ್ಲರ ಜತೆ ನಾನೂ ಕಾರ್ಯಕರ್ತನಂತೆ ಭಾಗಿಯಾಗುತ್ತೇನೆ ಎಂದು ಯುಟಿ ಖಾದರ್ ತಿಳಿಸಿದರು.

ಧರ್ಮಸ್ಥಳದಲ್ಲಿ ರಾಮರಾಜ್ಯವಿದೆ
ಈ ಸಂರ್ಭದಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀರಾಮನ ಎತ್ತರಕ್ಕೆ ಏರಿದ್ದಾರೆ. ಧರ್ಮಸ್ಥಳದಲ್ಲಿ ರಾಮರಾಜ್ಯವಿದೆ. ಸರಕಾರಕ್ಕೆ ಮಾರ್ಗದರ್ಶನ ನೀಡುವ ಆಡಳಿತವೆಂದರೆ ಧರ್ಮಸ್ಥಳದ ಆಡಳಿತ ವ್ಯವಸ್ಥೆ. ಜಿಲ್ಲೆಯ ಹಲವು ದೇವಸ್ಥಾನಗಳು ಜೀರ್ಣೋದ್ಧಾರವಾಗಿದ್ದರೆ ಅದಕ್ಕೆ ಧರ್ಮಸ್ಥಳ ಕಾರಣ ಎಂದು ಹೇಳಿದರು.











Click it and Unblock the Notifications