ಮಂಗಳೂರಿಗೆ 100 ಕೋಟಿ ರು.ನೀಡುವಂತೆ ಸಿದ್ದರಾಮಯ್ಯಗೆ ಮನವಿ
ಮಂಗಳೂರು, ಮಾರ್ಚ್. 29 : 4ನೇ ಹಂತದಲ್ಲಿ ಮಂಗಳೂರು ಜಿಲ್ಲೆಗೆ 100 ಕೋಟಿ ರು. ಅನುದಾನ ನೀಡುವಂತೆ ಶಾಸಕ ಲೋಬೋ ನೇತೃತ್ವದಲ್ಲಿ ಮೇಯರ್ ಕವಿತಾ ಸುನೀಲ್ ಒಳಗೊಂಡ ನಿಯೋಗ ಮಂಗಳವಾರ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಗೆ 3ನೇ ಹಂತದ 100 ಕೋಟಿ ರು. ಹಣ ಮಂಜೂರಾಗಿದ್ದು, ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ. ಇನ್ನು ಹಲವಾರು ಕಾಮಗಾರಿಗಳು ಆರ್ಥಿಕ ಕೊರತೆಯಿಂದ ಅಪೂರ್ಣವಾಗಿ ಅರ್ಧಕ್ಕೆ ನಿಂತಿವೆ.[ಬರಾವಲೋಕನ: ಕಾಣೆಯಾಗಿರೋ ಮಂಗಳೂರಿನ 64 ಕೆರೆ ಹುಡಿಕಿಕೊಡಿ ಪ್ಲೀಸ್!!]

ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹಾಗೂ ಹೆಚ್ಚುವರಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಜಿಲ್ಲೆಗೆ 4ನೇ ಹಂತದಲ್ಲಿ 100 ಕೋಟಿ ರು. ಅನುದಾನವನ್ನು ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಗೆ ನೇತ್ರಾವತಿ ನದಿಗೆ ತುಂಬೆಯಲ್ಲಿ ನಿರ್ಮಿಸಲಾಗಿರುವ ನೂತನ ಕಿಂಡಿ ಅಣೆಕಟ್ಟಿನ ಎತ್ತರವನ್ನು 7 ಮೀಟರ್ಗೆ ಹೆಚ್ಚಿಸಿದ ಕಾರಣ ಹಿನ್ನೀರಿನಲ್ಲಿ ಸುಮಾರು 500 ಎಕರೆ ರೈತರ ಕೃಷಿ ಭೂಮಿ ಮುಳುಗಡೆಯಾಗಲಿದೆ.
ಇನ್ನು ಸಂತ್ರಸ್ತ ರೈತರಿಗೆ ಸಂಪೂರ್ಣ ಪರಿಹಾರ ನೀಡಲು ಅಗತ್ಯ ಅನುದಾನವನ್ನು ನೀಡಬೇಕು ಎಂದು ಮನವಿಯಲ್ಲಿ ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.
ಮನಪಾದ ಹಿರಿಯ ಸದಸ್ಯರಾದ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ರವೂಫ್, ಇತರರು ಉಪಸ್ಥಿತರಿದ್ದರು











Click it and Unblock the Notifications