ಕರಾವಳಿಯ ಸಾವಿರಾರು ಕಾರ್ಮಿಕರು ಮತ್ತೆ ಸೌದಿಕರಣದ ಭೀತಿಯಲ್ಲಿ
ಮಂಗಳೂರು, ಸೆಪ್ಟೆಂಬರ್.06: ಕೊಲ್ಲಿ ರಾಷ್ಟ್ರದಲ್ಲಿರುವ ಕರಾವಳಿಯ ಕಾರ್ಮಿಕರಿಗೆ ಮತ್ತೆ ನಡುಕ ಆರಂಭವಾಗಿದೆ. ಉದ್ಯೋಗ ನಿಮಿತ್ತ ಕೊಲ್ಲಿ ರಾಷ್ಟ್ರದಲ್ಲಿ ನೆಲೆಸಿರುವ ಸಾವಿರಾರು ಕರಾವಳಿಯ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಸೌದಿ ಅರೇಬಿಯಾದ ಕಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಮತ್ತೆ ಸ್ವದೇಶದ 12 ವಲಯದ ಉದ್ಯೋಗಗಳನ್ನು ಸೌದೀಕರಣ ಮಾಡುಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಕರಾವಳಿಯ ಕಾರ್ಮಿಕರ ಮೇಲೆ ಮತ್ತೊಮ್ಮೆ ಉದ್ಯೋಗ ಕಳೆದುಕೊಳ್ಳುವ ಕಾರ್ಮೋಡ ಆವರಿಸತೊಡಗಿದೆ.
ಸೌದಿ ಅರೇಬಿಯಾದ ಕಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ಸೌದೀಕರಣದ ಈ ನಿರ್ಧಾರದಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಮಂದಿ ವಿದೇಶಿಯರು ಮತ್ತೇ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸಲಿದ್ದಾರೆ.

ಈ ಹಿಂದೆ ಸೌದೀಕರಣ ನಡೆದಾಗ ಲಕ್ಷಾಂತರ ವಿದೇಶಿಯರು ತಮ್ಮ ಉದ್ಯೋಗ ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ಕರಾವಳಿ ಪ್ರದೇಶದ ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡು ತಾಯ್ನಾಡಿಗೆ ಮರಳಿದ್ದರು.
ಎರಡು ವರ್ಷಗಳ ಹಿಂದೆ ಸೌದೀಕರಣ ಜಾರಿಗೊಂಡಾಗ ದಕ್ಷಿಣ ಕನ್ನಡ ಉಡುಪಿ ಸೇರಿದಂತೆ ಕೇರಳದ ಕಾಸರಗೋಡಿನ ಸಾವಿರಾರು ಮಂದಿ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದರು. ಇದೀಗ ಮತ್ತೆ ಮೊದಲ ಹಂತದ ಶುದ್ಧೀಕರಣ ಸೆಪ್ಟೆಂಬರ್ ಹನ್ನೊಂದರಂದೇ ಆರಂಭಗೊಳ್ಳಲಿದೆ ಎಂದು ಹೇಳಲಾಗಿದೆ.
ವಾಹನಗಳ ಶೋ ರೂಂ, ಆಟೋ ಮೊಬೈಲ್, ಸಿದ್ಧ ಉಡುಪು, ಪೀಠೋಪಕರಣ ಹಾಗೂ ಮನೆ ಬಳಕೆಯ ವಸ್ತುಗಳ ಮಾರಾಟ ಮಳಿಗೆಗಳನ್ನು ಪ್ರಥಮ ಹಂತದಲ್ಲಿ ಸೌದೀಕರಣಕ್ಕೆ ಒಳ ಪಡೆಯಲಿದೆ.
ದ್ವಿತೀಯ ಹಂತದಲ್ಲಿ ನವೆಂಬರ್ 9 ರಂದು ಎಲೆಕ್ಟ್ರಿಕ್ ಹಾಗೂ ಎಲೆಕ್ಟ್ರಿಕಲ್ಸ್ ವಾಚ್ ಅಂಗಡಿಗಳು ಕನ್ನಡಕ ಹಾಗೂ ಮೆಡಿಕಲ್ ಶಾಪ್ ಗಳು ಹಾಗೂ 2019 ಜನವರಿ 7ರಿಂದ ತೃತೀಯ ಹಂತದಲ್ಲಿ ಸೌದೀಕರಣ ನಡೆಯಲಿದೆ.
ಕೊಲ್ಲಿ ರಾಷ್ಟ್ರದಲ್ಲಿ ಹೊಸ ಕಾನೂನು ಜಾರಿಯಿಂದಾಗಿ ದಕ್ಷಿಣ ಕನ್ನಡ ಹಾಗು ಉಡುಪಿಯ ಸಾವಿರಾರು ಮಂದಿಯ ಉದ್ಯೋಗದ ಮೇಲೆ ತೂಗು ಕತ್ತಿ ನೇತಾಡುತ್ತಿದೆ. ಸೌದೀಕರಣದಿಂದ ಉದ್ಯೋಗ ಕಳೆದುಕೊಂಡು ದಕ್ಷಿಣ ಕನ್ನಡ ಜಿಲ್ಲೆಗೆ ಮರಳುವ ಉದ್ಯೋಗ ವಂಚಿತರಿಗಾಗಿ ಎನ್ ಆರ್ ಐ ಕೇಂದ್ರ ಅರಂಭಿಸಲು ಚಿಂತಿಸಲಾಗಿದೆ.
ಮಂಗಳೂರಿನ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಯೇ ಈ ಎನ್ ಆರ್ ಐ ಕೇಂದ್ರ ಆರಂಭಿಸಲು ಚಿಂತಿಸಲಾಗಿದ್ದು, ಕೊಲ್ಲಿ ರಾಷ್ಟ್ರದಲ್ಲಿ ಕೆಲಸ ಕಳೆದುಕೊಂಡು ತಾಯ್ನಾಡಿಗೆ ಮರಳುವ ಸಂತ್ರಸ್ತರ ಮಾಹಿತಿಯನ್ನು ಈ ಕೇಂದ್ರದಲ್ಲಿ ದಾಖಲಿಸಲಾಗುವುದು.
ಈ ಮಾಹಿತಿಯಿಂದ ಕೆಲಸ ಕಳೆದು ಕೊಂಡವರಿಗೂ ಹಾಗು ಜಿಲ್ಲಾಡಳಿತಕ್ಕೂ ಮುಂದಿನ ನಿರ್ಧಾರ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಹೇಳಲಾಗಿದೆ.












Click it and Unblock the Notifications