ಬಾಲಕನ ಕಾಲಿಗೆ ಪ್ರಥಮ ಚಿಕಿತ್ಸೆ ನೀಡಿದ ಪೊಲೀಸ್ ಪೇದೆಗೆ ಪುರಸ್ಕಾರ
ಮಂಗಳೂರು, ಜುಲೈ 21: ಬಸ್ ಗಾಗಿ ಕಾಯುತ್ತಿದ್ದ ಶಾಲಾ ಬಾಲಕನ ಕಾಲಿನಲ್ಲಿ ರಕ್ತ ಹರಿಯುತ್ತಿರುವುದನ್ನು ನೋಡಿದ ಪೋಲೀಸ್ ಕಾನ್ಸ್ಟೇಬಲ್ ಬಾಲಕನ ಕಾಲಿಗೆ ಪ್ರಥಮ ಚಿಕಿತ್ಸೆ ನೀಡಿ ಆರೈಕೆ ಮಾಡಿದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಈ ಹಿನ್ನಲೆಯಲ್ಲಿ ಇಂದು ಮಂಗಳೂರು ಪೋಲೀಸ್ ಆಯುಕ್ತರು ಆರೈಕೆ ಮಾಡಿದ ಕಿಶೋರ್ ಅವರಿಗೆ ನಗದು ಪುರಸ್ಕಾರದೊಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.
ಮಂಗಳೂರಿನ ಬರ್ಕೆ ಪೋಲೀಸ್ ಠಾಣೆಯ ಸಿಬ್ಬಂದಿ ಜುಲೈ 19 ರಂದು ಬೊಕ್ಕಪಟ್ಲ ಶಾಲೆಯ ಸಮೀಪ ತಾತ್ಕಾಲಿಕ ತಪಾಸಣಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಶಾಲೆಯಿಂದ ಮನೆಗೆ ಹೊರಡಲು ಬಸ್ ಗಾಗಿ ಕಾಯುತ್ತಿದ್ದ ಪುಟ್ಟ ಬಾಲಕನ ಕಾಲಿನಿಂದ ರಕ್ತ ಒಸರುತ್ತಿತ್ತು. ಇದನ್ನು ಗಮನಿಸಿದ ಕಿಶೋರ್ ಬಾಲಕನ ಕಾಲಿನ ಗಾಯಕ್ಕೆ ಪ್ರಥಮ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದರು.

ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು. ಈ ಹಿನ್ನಲೆಯಲ್ಲಿ ಹಿರಿಯ ಪೋಲೀಸ್ ಅಧಿಕಾರಿಗಳು ಕಿಶೋರ್ ರನ್ನು ಸನ್ಮಾನಿಸಿದರು. ಜನಸ್ನೇಹಿ ಪೋಲೀಸ್ ವ್ಯವಸ್ಥೆಗೆ ಇದೊಂದು ಸಾಕ್ಷಿಯಾಗಿ ಮೂಡಿಬಂದಿದೆ.












Click it and Unblock the Notifications