ಹೊರ ಜಿಲ್ಲೆಯ ಪೊಲೀಸರಿಗೆ ತುಳು ಕಲಿಸಿದ ಮಂಗಳೂರು ಪೊಲೀಸ್ ಆಯುಕ್ತ
ಮಂಗಳೂರು, ಆಗಸ್ಟ್ 28: ಪೊಲೀಸರು ಜನಸ್ನೇಹಿಯಾಗಿರಬೇಕು ಅನ್ನುವುದು ಎಲ್ಲರ ವಾದ. ಜನ ಕಷ್ಟ ಅಂತಾ ಬಂದಾಗ ಸ್ಪಂದಿಸಬೇಕು, ಸಮಸ್ಯೆಗಳನ್ನು ತಾಳ್ಮೆಯಿಂದ ಕೇಳಬೇಕು, ಭಾಷೆಯೂ ಹಿತ-ಮಿತವಾಗಿರಬೇಕು. ಇದು ಜನಸ್ನೇಹಿ ಪೊಲೀಸರ ಲಕ್ಷಣ ಅನ್ನುವುದು ಜನರ ಮಾತು.
ಮಂಗಳೂರು ನಗರ ಪೊಲೀಸರನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಜನರ ಮಾತೃ ಭಾಷೆಯನ್ನು, ಭಾಷೆ ಗೊತ್ತಿರದ ಪೊಲೀಸರಿಗೆ ಕಲಿಸುವ ಮೂಲಕ ಪೊಲೀಸರನ್ನು ಜನಸ್ನೇಹಿಯನ್ನಾಗಿಸಲು ಪ್ರಯತ್ನಿಸಿದ್ದಾರೆ.
ಪೊಲೀಸರು ಸದಾ ಜನರ ಜೊತೆ ಬೆರೆಯಬೇಕಾಗಿರುವುದರಿಂದ, ಜನರ ಬಳಸುವ ಭಾಷೆ ಪೊಲೀಸರಿಗೂ ತಿಳಿದಿದ್ದರೆ ಕರ್ತವ್ಯ ನಿರ್ವಹಿಸುವುದಕ್ಕೆ ಬಹಳ ಅನುಕೂಲವಾಗುತ್ತದೆ. ತನಿಖೆಯ ದೃಷ್ಟಿಯಿಂದಲೂ, ಜನರ ಸಮಸ್ಯೆಗಳಿಗೂ ಸ್ಪಂದಿಸುವ ದೃಷ್ಟಿಯಿಂದಲೂ ಪ್ರಾದೇಶಿಕ ಭಾಷೆಯ ಅರಿವಿದ್ದರೆ ಒಳ್ಳೆಯದು ಎಂಬುವುದನ್ನು ಕಮೀಷನರ್ ಎನ್. ಶಶಿಕುಮಾರ್ ಮನಗಂಡಿದ್ದಾರೆ.

ವಿನೂತನ ಪ್ರಯತ್ನಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ
ಈಗ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿರುವ ತುಳು ಭಾಷೆ ಗೊತ್ತಿರದ ಪೊಲೀಸ್ ಸಿಬ್ಬಂದಿಗಳಿಗೆ ತುಳು ಕಲಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಭಾಗಿತ್ವದಲ್ಲಿ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರ ಜಿಲ್ಲೆಯ ಪೊಲೀಸರಿಗೆ ಕಮೀಷನರ್ ಎನ್. ಶಶಿಕುಮಾರ್ ತುಳು ಕಲಿಸುವ ಕಾರ್ಯಗಾರ ಮಾಡುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ನಿಂದ ಮಂಗಳೂರು ನಗರ ಪೊಲೀಸ್ ಕಮೀಷನೇಟರ್ ಇಲಾಖೆ ವಿಭಾಗ ಆಗಿ ಹನ್ನೊಂದು ವರ್ಷ ಕಳೆದರೂ ಇಲ್ಲಿಯವರೆಗೆ ಇಂತಹ ವಿನೂತನ ಪ್ರಯತ್ನವನ್ನು ಯಾರೂ ಮಾಡಿರಲಿಲ್ಲ. ಸದ್ಯದ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಈ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು, ಉತ್ತಮ ಬೆಂಬಲ ವ್ಯಕ್ತವಾಗಿದೆ.

ಗುಪ್ತ ಮಾಹಿತಿ ಸಂಗ್ರಹ ಕಷ್ಟಸಾಧ್ಯ
ಕಮೀಷನೇಟರ್ ವ್ಯಾಪ್ತಿಗೆ ನೇಮಕವಾಗಿ ಬರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಹೆಚ್ಚಿನವರು ಹೊರ ಜಿಲ್ಲೆಯವರು. ಈ ರೀತಿ ಹೊರ ಜಿಲ್ಲೆಯಿಂದ ಬಂದವರಿಗೆ ಇಲ್ಲಿನ ಜನ ಮಾತನಾಡುವ ತುಳು ಭಾಷೆ ಅಷ್ಟೊಂದು ಅರ್ಥವಾಗುವುದಿಲ್ಲ. ಈ ಪ್ರಾದೇಶಿಕ ಭಾಷೆಯ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲದೇ ಇರುವುದರಿಂದ ಕಾನೂನು ಸುವ್ಯವಸ್ಥೆ ಪಾಲನೆ, ಅಪರಾಧ ಪತ್ತೆ ಹಚ್ಚುವಿಕೆ, ಗುಪ್ತ ಮಾಹಿತಿ ಸಂಗ್ರಹಕ್ಕೆ ಒಂದಿಷ್ಟು ಕಷ್ಟಸಾಧ್ಯವಾಗುತ್ತಿತ್ತು. ಹೀಗಾಗಿ ಮೇಲಾಧಿಕಾರಿಗಳ ಸಲಹೆಯಂತೆ, ಅಧಿಕಾರಿ, ಸಿಬ್ಬಂದಿಗಳ ಒತ್ತಾಸೆಯಂತೆ ಇದೀಗ ತುಳು ಭಾಷೆ ಕಲಿಕಾ ಕಾರ್ಯಾಗಾರಕ್ಕೆ ಚಾಲನೆ ನೀಡಲಾಗಿದೆ. ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಆಸಕ್ತಿಯಲ್ಲೇ ಕಾರ್ಯಾಗಾರ ಪ್ರಾರಂಭವಾಗಿದೆ.

ಹೊರ ಜಿಲ್ಲೆಯ 800ಕ್ಕೂ ಹೆಚ್ಚು ಸಿಬ್ಬಂದಿಗಳು
ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲೇ ಸುಮಾರು 800ಕ್ಕೂ ಹೆಚ್ಚು ಅಧಿಕಾರಿ ಸಿಬ್ಬಂದಿಗಳು ಹೊರ ಜಿಲ್ಲೆಗಳಾದ ವಿಜಯಪುರ, ಬೆಳಗಾವಿ, ಕಲಬುರಗಿ, ಯಾದಗಿರಿ, ಬೆಂಗಳೂರು, ಗದಗ, ಬಾಗಲಕೋಟೆಯಿಂದ ಸೇರಿದಂತೆ ಹೊರ ಜಿಲ್ಲೆಯಿಂದ ಬಂದವರಿದ್ದಾರೆ. ಹೀಗಾಗಿ ಪ್ರಾರಂಭದ ಬ್ಯಾಚ್ನಲ್ಲಿ 50 ಅಧಿಕಾರಿ ಸಿಬ್ಬಂದಿಗಳಿಗೆ ತುಳು ಭಾಷೆ ಕಲಿಕಾ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ. ಒಂದು ತಿಂಗಳುಗಳ ಕಾಲ ನಡೆಯಲಿರುವ ಈ ತರಬೇತಿ ಕಾರ್ಯಕ್ರಮವನ್ನು ತುಳು ಸಾಹಿತ್ಯ ಅಕಾಡೆಮಿ ನಡೆಸಿ ಕೊಡುತ್ತಿದೆ. ಕಮೀಷನರ್ ಕಚೇರಿಯ ಸಭಾಂಗಣದಲ್ಲೇ ದಿನದಲ್ಲಿ ಮೂರು ಗಂಟೆಗಳ ಕಾಲ ಈ ತರಬೇತಿ ನೀಡಲಾಗುತ್ತಿದೆ.

50 ಲಕ್ಷಕ್ಕೂ ಹೆಚ್ಚು ಜನ ತುಳು ಭಾಷೆ ಮಾತನಾಡುತ್ತಾರೆ
ತುಳು ಮಾತ್ರವಲ್ಲದೇ ಬ್ಯಾರಿ ಭಾಷೆಯನ್ನೂ ಪೊಲೀಸರಿಗೆ ಕಲಿಸುವ ಪ್ರಯ್ನತ್ನವನ್ನು ಮಾಡಲಾಗುತ್ತಿದೆ. ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಪೊಲೀಸರಿಗೆ ಬ್ಯಾರಿ ಭಾಷೆಯನ್ನೂ ಕಲಿಸಲಾಗುತ್ತದೆ. ಬ್ಯಾರಿ ಸಾಹಿತ್ಯ ಅಕಾಡೆಮಿಯ ಕೆಲ ಸದಸ್ಯರು ಪೊಲೀಸರಿಗೆ ಬ್ಯಾರಿ ಭಾಷೆ, ಸಾಮಾನ್ಯವಾಗಿ ಬಳಸುವ ಶಬ್ಧ, ಜನರ ಜೊತೆ ಸಂವಹನಕ್ಕೆ ಬೇಕಾಗುವಷ್ಟು ಭಾಷೆಯನ್ನು ಕಲಿಸಿಕೊಡಲಾಗುತ್ತದೆ.
50 ಲಕ್ಷಕ್ಕೂ ಹೆಚ್ಚು ಜನ ತುಳು ಭಾಷೆಯನ್ನು ಪೂರ್ತಿ ವಿಶ್ವದಲ್ಲಿ ಮಾತನಾಡುತ್ತಾರೆ. ಸದ್ಯ ತುಳು ಲಿಪಿಯ ಅಭಿವೃದ್ದಿ ಸಾಕಷ್ಟು ಆಗಿದ್ದು, ಯುನಿಕೋಡ್ಗು ಸೇರುವ ಅಂತಿಮ ಹಂತದಲ್ಲಿದೆ. ಒಟ್ಟಿನಲ್ಲಿ ಸ್ಥಳೀಯ ಭಾಷೆಯನ್ನು ಪೊಲೀಸರಿಗೆ ಕಲಿಸಿ, ಜನ ಒಡನಾಟ ಹೆಚ್ಚಿಸುವುದರ ಜೊತೆಗೆ ತನಿಖೆಗೂ ಸಹಕಾರಿಯಾಗುವಂತೆ ಕಮೀಷನರ್ ಮಾಡಿರುವ ಹೊಸ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications