ಮಂಗಳೂರು : ಭವಂತಿ ರಸ್ತೆ ಜನರಿಗೆ ಮನೆ ಕಳೆದುಕೊಳ್ಳುವ ಭೀತಿ
ಮಂಗಳೂರು, ಜ.29 : ಮಂಗಳೂರು ನಗರದ ಭವಂತಿ ರಸ್ತೆಯಲ್ಲಿನ ರಮಾಕಾಂತಿ ಮತ್ತು ರೂಪವಾಣಿ ಚಿತ್ರಮಂದಿರಗಳ ನಡುವಿನ ಜಮೀನಿನಲ್ಲಿರುವ ಜನರಿಗೆ ಮನೆ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈ ಜಾಗದಲ್ಲಿರುವ 8 ಕುಟುಂಬಗಳು ಮನೆಯನ್ನು ಖಾಲಿ ಮಾಡಬೇಕೆಂದು ನ್ಯಾಯಾಲಯ ಆದೇಶ ನೀಡಿದ್ದು, ಜನರು ಆತಂಕಗೊಂಡಿದ್ದಾರೆ.
ಈ ಜಮೀನಿನ ಮಾಲೀಕರು ಗುರುವಾರ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿ ಮನೆಯನ್ನು ತೆರವುಗೊಳಿಸಲು ಮುಂದಾದರು ಈ ಸಮಯದಲ್ಲಿ ಜನರು ಪ್ರತಿಭಟನೆ ನಡೆಸಿದರು. ತಕ್ಷಣ ಮನೆ ಖಾಲಿ ಮಾಡಲು ಸಾಧ್ಯವಿಲ್ಲ ಮತ್ತಷ್ಟು ಸಮಯಾವಕಾಶ ನೀಡಬೇಕೆಂದು ಮನವಿ ಮಾಡಿದರು.

ಸ್ಥಳಕ್ಕೆ ಆಗಮಿಸಿದ ಶ್ರೀರಾಮ ಸೇನೆಯ ಕುಮಾರ್ ಅವರು ಇಲ್ಲಿ ವಾಸಿಸುತ್ತಿರುವ ಜನರಿಗೆ ಮನೆಯನ್ನು ತೆರವುಗೊಳಿಸಲು ಎಪ್ರಿಲ್ತನಕ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪದ ಸ್ಥಳದ ಮಾಲೀಕ ಸುರೇಶ್ ಭಟ್ ಅವರು, ಮುಂದಿನ ಗುರುವಾರದೊಳಗೆ ಮನೆಗಳನ್ನು ಖಾಲಿ ಮಾಡುವಂತೆ ಸೂಚನೆ ನೀಡಿದ್ದಾರೆ.

ಗುರುವಾರದೊಳಗೆ ಮನೆ ಖಾಲಿ ಮಾಡದಿದ್ದರೆ ನ್ಯಾಯಾಲಯದ ಆದೇಶದಂತೆ ಬೀಗ ಹಾಕಲಾಗುತ್ತದೆ. ಮನೆಯಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುತ್ತದೆ ಎಂದು ಸುರೇಶ್ ಭಟ್ ನಿವಾಸಿಗಳಿಗೆ ಭರವಸೆ ನೀಡಿದ್ದಾರೆ.

ಏನಿದು ವಿವಾದ : ರಮಾಕಾಂತಿ ಮತ್ತು ರೂಪವಾಣಿ ಚಿತ್ರಮಂದಿರಗಳ ನಡುವಿನ ಜಮೀನು ಸುರೇಶ್ ಭಟ್ ಮತ್ತು ಮುಂಬೈ ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದೆ. ಈ ಜಾಗದ ಬಗ್ಗೆ ದಶಕಗಳ ಹಿಂದಿನಿಂದಲೂ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಯುತ್ತಿದೆ.

1999ರಲ್ಲಿ ಈ ಜಮೀನನ್ನು ಅದರ ಮಾಲೀಕರಾದ ಸುರೇಶ್ ಭಟ್ ಒಪ್ಪಿಸುವಂತೆ ಕೋರ್ಟ್ ಆದೇಶ ನೀಡಿತ್ತು. ಆದರೆ, ಈ ಆದೇಶದ ವಿರುದ್ಧ ಅಲ್ಲಿ ನೆಲೆಸಿದ್ದ ಕುಟುಂಬದವರು ಮೇಲ್ಮನವಿ ಸಲ್ಲಿಸಿದ ಕಾರಣ ಪುನಃ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಸದ್ಯ ನ್ಯಾಯಾಲಯ ಹೊರಡಿಸಿರುವ ಆದೇಶದಂತೆ ಮನೆಯನ್ನು ತೆರವು ಮಾಡಬೇಕಾಗಿದೆ.

ವಂಚನೆ ಆರೋಪ : ಸುರೇಶ್ ಭಟ್ ಅವರು ಹಣ ನೀಡಿದಲ್ಲಿ ಜಾಗವನ್ನು ನಿಮ್ಮ ಹೆಸರಿಗೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ದರು. 13 ಮನೆಯವರು ಒಟ್ಟು 8 ಲಕ್ಷ ರೂ.ಗಳನ್ನು ನಮ್ಮನಮ್ಮ ಹೆಸರಿಗೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದೆವು. ಆದರೆ, ಹಣ ಪಡೆದು ಸುರೇಶ್ ನಮ್ಮನ್ನು ವಂಚಿಸಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.












Click it and Unblock the Notifications