ಮಂಗಳೂರು: ಅರಣ್ಯ ಇಲಾಖೆ ಅಧಿಕಾರಿಗಳಿಗೆ ದಿಗ್ಬಂಧನ
ಮಂಗಳೂರು, ಸೆಪ್ಟೆಂಬರ್ 23 : ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರು ಹಾಗೂ ಬಾಳುಗೋಡು ಗ್ರಾಮಗಳನ್ನು ಪುಷ್ಪಗಿರಿ ವನ್ಯಧಾಮಕ್ಕೆ ಸೇರಿಸಿರುವುದನ್ನು ವಿರೋಧಿಸಿ ಐದು ಗ್ರಾಮಗಳ ಗ್ರಾಮಸ್ಥರು ನಿರಂತರ ಪ್ರತಿಭಟನೆಗಳನ್ನು ನಡೆಸುತಿದ್ದಾರೆ.
ಶುಕ್ರವಾರ ಬಾಳುಗೋಡು ಪರಿಸರಕ್ಕೆ ಬಂದಿದ್ದ ವನ್ಯಜೀವಿ ವಿಭಾಗದ ಅಧಿಕಾರಿಗಳ ವಾಹನವನ್ನು ಗ್ರಾಮಸ್ಥರು ತಡೆಹಿಡಿದಿದ್ದಾರೆ. ಓರ್ವ ರೇಂಜರ್, ಇಬ್ಬರು ಫಾರೆಸ್ಟರ್, ಇಬ್ಬರು ಗಾರ್ಡ್ ಹಾಗೂ ಓರ್ವ ಚಾಲಕ ಇರುವ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡಕ್ಕೆ ದಿಗ್ಭಂಧನ ಹಾಕಿದ್ದು, ಯಾವುದೇ ಕಾರಣಕ್ಕೂ ಅಧಿಕಾರಿಗಳನ್ನು ಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಡಿಎಫ್ಓ ಆಗಮಿಸಿ ತಮ್ಮ ಸಮಸ್ಯೆ ಇತ್ಯರ್ಥಗೊಳಿಸುವವರೆಗೂ ಅಧಿಕಾರಿಗಳು ಜಾಗ ಬಿಟ್ಟು ತೆರಳಬಾರದೆಂದು ಗ್ರಾಮಸ್ಥರು ಬಿಗಿಪಟ್ಟು ತಳೆದಿದ್ದರು.
ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಸುಬ್ರಹ್ಮಣ್ಯ ಠಾಣೆಯ ಪೊಲೀಸರು ಗ್ರಾಮಸ್ಥರ ಮನವೊಲಿಸಿ ಅಧಿಕಾರಿಗಳನ್ನು ಬಿಡುಗಡೆಗೊಳಿಸಿದ್ದಾರೆ .
ಇತ್ತೀಚೆಗೆ ಸುಳ್ಯದ ಕೊಲ್ಲಮೊಗರಿನಲ್ಲಿ ನಡೆದ ಅರಣ್ಯ ಅಧಿಕಾರಿಗಳ ಹಾಗೂ ಗ್ರಾಮಸ್ಥರ ನಡುವೆ ನಡೆದ ಜನಸಂಪರ್ಕ ಸಭೆಯಲ್ಲಿ ಪುಷ್ಪಗಿರಿ ಸೂಕ್ಷ್ಮ ಪ್ರದೇಶದಿಂದ ಹೊರಗಿಡುವವರೆಗೂ ಈ ಗ್ರಾಮಗಳಿಗೆ ಅಧಿಕಾರಿಗಳನ್ನು ಬರಲು ಬಿಡುವುದಿಲ್ಲ ಎನ್ನುವ ಪ್ರತಿಜ್ಞೆಯನ್ನೂ ಗ್ರಾಮಸ್ಥರು ಮಾಡಿದ್ದರು.












Click it and Unblock the Notifications