ಬಂಟ್ವಾಳ: ಮಾಜಿ ಗ್ರಾ.ಪಂ ಸದಸ್ಯನಿಗೆ ಭಜರಂಗದಳದಿಂದ ಬೆದರಿಕೆ
ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮುಹಮ್ಮದ್ ಇಕ್ಬಾಲ್ ರಿಗೆ ವಿಹಿಂಪ-ಭಜರಂಗದಳ ಹೆಸರಿನಲ್ಲಿ ಕೊಲೆ ಬೆದರಿಕೆ ಪತ್ರ ಬಂದಿದೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಮಂಗಳೂರು, ಫೆಬ್ರವರಿ 7: ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮುಹಮ್ಮದ್ ಇಕ್ಬಾಲ್ ರಿಗೆ ವಿಹಿಂಪ-ಭಜರಂಗದಳ ಹೆಸರಿನಲ್ಲಿ ಕೊಲೆ ಬೆದರಿಕೆ ಪತ್ರ ಬಂದಿದೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪುದು ಗ್ರಾಮದ ಅಮೆಮಾರ್ ನಿವಾಸಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಮುಹಮ್ಮದ್ ಇಕ್ಬಾಲ್ ಎಂಬವವರಿಗೆ ಪೋಸ್ಟ್ ನಲ್ಲಿ ಕೊಲೆ ಬೆದರಿಕೆ ಪತ್ರ ಬಂದಿದೆ. ಪತ್ರ ಬಂದ ಕವರ್ನ ಒಂದು ಭಾಗದಲ್ಲಿ ಇಕ್ಬಾಲ್ ಹೆಸರು ಮತ್ತು ವಿಳಾಸ ಬರೆದಿದ್ದರೆ ಇನ್ನೊಂದು ಭಾಗದಲ್ಲಿ ವಿ.ಎಚ್.ಪಿ., ಭಜರಂಗದಳ ಫರಂಗಿಪೇಟೆ ಎಂದು ಬರೆಯಲಾಗಿದೆ.[ಹಫ್ತಾ ದಂಧೆ: ಮಂಗಳೂರು ಮಂಗಳಮುಖಿಯರ ನಡುವೆ ಮಾರಾಮಾರಿ]

ಘಟನೆ ವಿವರ:
ಇಕ್ಬಾಲ್ ಅವರು ಫರಂಗಿಪೇಟೆಯ ಹಳೆ ರಸ್ತೆಯಲ್ಲಿ ಗುಜರಿ ಅಂಗಡಿ ಹೊಂದಿದ್ದಾರೆ. ಕಳೆದ ವಾರ ತನ್ನ ಸಹೋದರನ ಪುತ್ರನಿಗೆ ತುರ್ತು ಚಿಕಿತ್ಸೆ ನೀಡಲು ನಿರಾಕರಿಸಿದ್ದ ಫರಂಗಿಪೇಟೆಯ ವೈದ್ಯರೊಬ್ಬರಲ್ಲಿ ವಿಚಾರಿಸಲು ತೆರಳಿದ್ದ ವೇಳೆ ವೈದ್ಯ ಮತ್ತು ಇಕ್ಬಾಲ್ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿ, ಬಳಿಕ ರಾಜಿ ಸಂಧಾನದೊಂದಿಗೆ ಇತ್ಯರ್ಥಗೊಂಡಿತ್ತು.[ಮಂಗಳೂರಿನಲ್ಲಿ ಕಳ್ಳತನ: ಲ್ಯಾಪ್ ಟಾಪ್ ಸಮೇತ ಸಿಕ್ಕ ಇಬ್ಬರು]
ಈ ಹಿನ್ನಲೆಯಲ್ಲಿ ಕೊಲೆ ಪತ್ರದಲ್ಲಿ ಕೆಟ್ಟದಾಗಿ ನಿಂದಿಸಿರುವುದಲ್ಲದೆ "ಡಾಕ್ಟರ್ಗೆ ಬೈದ ನಿನ್ನನ್ನು ಫರಂಗಿಪೇಟೆಯ ಗುಜರಿ ವ್ಯಾಪಾರಿ ಹಮೀದ್ನನ್ನು ಕೊಲೆ ಮಾಡಿದ ರೀತಿಯಲ್ಲೇ ಒಂದೇ ವಾರದೊಳಗೆ ಮರ್ಡರ್ ಮಾಡುತ್ತೇನೆ" ಎಂದು ಬೆದರಿಕೆ ಹಾಕಲಾಗಿದೆ. ಸುಮಾರು 13 ವರ್ಷದ ಹಿಂದೆ ಮಂಗಳೂರಿನಲ್ಲಿ ಗುಜರಿ ವ್ಯಾಪಾರಿಯಾಗಿದ್ದ ಹಮೀದ್ ಎಂಬವರನ್ನು ಫರಂಗಿಪೇಟೆಯಲ್ಲಿ ಕೊಲೆಗೈಯಲಾಗಿತ್ತು.

ಅಂಚೆ ಮೂಲಕ ಕೊಲೆ ಬೆದರಿಕೆ ಒಡ್ಡಿದ ದುಷ್ಕರ್ಮಿಗಳನ್ನು ಅತೀ ಶೀಘ್ರದಲ್ಲಿ ಪತ್ತೆ ಹಚ್ಚಿ, ಪುದು ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಪೋಲಿಸ್ ಇಲಾಖೆ ಮಧ್ಯ ಪ್ರವೇಶಿಸಬೇಕೆಂದು ಎಸ್ಡಿಪಿಐ ಪುದು ವಲಯ ಸಮಿತಿ ಅಧ್ಯಕ್ಷರಾದ ಸುಲೈಮಾನ್ ಉಸ್ತಾದ್ ಆಗ್ರಹಿಸಿದ್ದಾರೆ.
ಕೊಲೆ ಬೆದರಿಕೆ ಪ್ರಕರಣದಲ್ಲಿ ಪೋಲಿಸ್ ಇಲಾಖೆಯು ಒಂದು ವಾರದೊಳಗಾಗಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಪರಂಗಿಫೇಟೆ ಪೋಲಿಸ್ ಠಾಣೆಯ ಮುಂದೆ ಎಸ್ಡಿಪಿಐ ಪುದು ವಲಯ ಸಮಿತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಅವರು ಎಚ್ಚರಿಸಿದ್ದಾರೆ.












Click it and Unblock the Notifications