ಕೋಟಿ ಚೆನ್ನಯ್ಯರ ಬಗ್ಗೆ ಅವಹೇಳನ: ಬಿಜೆಪಿ ಮುಖಂಡ ಕ್ಷಮೆಯಾಚನೆ
ಮಂಗಳೂರು, ಫೆಬ್ರವರಿ 10: ಕಾಂಗ್ರೆಸ್ ಮುಖಂಡ ಜನಾರ್ಧನ್ ಪೂಜಾರಿ ಹಾಗೂ ಬಿಲ್ಲವ ಸಮಾಜದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಅವರು ಮಂಗಳವಾರ ಕೆಲ್ಲಪುತ್ತಿಗೆಯ ಪುರಾತನ ಶ್ರೀಕ್ಷೇತ್ರ ಭೂತರಾಜಗುಡ್ಡೆಯ ಶ್ರೀ ಧರ್ಮರಸು ದೈವ, ಕುಕ್ಕಿನಂತಾಯ, ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಗರಡಿಗೆ ಭೇಟಿ ನೀಡಿ, ತಪ್ಪು ಕಾಣಿಕೆ ಸಲ್ಲಿಸಿ ಕ್ಷಮೆ ಯಾಚಿಸಿದರು.
ಈ ಕುರಿತು ಮಾತನಾಡಿದ ಜಗದೀಶ್ ಅಧಿಕಾರಿ, ""ನಾನು ಇತ್ತೀಚೆಗೆ ನೀಡಿದ ಹೇಳಿಕೆಗಳಿಂದಾಗಿ ಬಿಲ್ಲವ ಸಮುದಾಯ ಹಾಗೂ ಜನಾರ್ಧನ್ ಪೂಜಾರಿ ಅವರಿಗೆ, ಅವರ ಅಭಿಮಾನಿಗಳಿಗೆ ನೋವುಂಟಾಗಿದೆ. ನನ್ನಿಂದಾದ ತಪ್ಪಿಗೆ ಕೋಟಿ ಚೆನ್ನಯರ ಗರಡಿಯಲ್ಲಿ ಕ್ಷಮೆಯಾಚಿಸಿ, ತಪ್ಪು ಕಾಣಿಕೆ ಸಲ್ಲಿಸುವ ಮೂಲಕ ಎಲ್ಲ ವಿವಾದಗಳಿಗೆ ತಾನು ಇತಿಶ್ರೀ ನೀಡಲು ನಿರ್ಧರಿಸಿದ್ದೇನೆ'' ಎಂದರು.

ನಂತರ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ಧನ್ ಪೂಜಾರಿ ಅವರ ನಿವಾಸಕ್ಕೆ ತೆರಳಿ ಅವರಲ್ಲಿ ಕ್ಷಮೆಯಾಚಿಸುತ್ತೇನೆ. ಜತೆಗೆ ಕುದ್ರೋಳಿ ಹಾಗೂ ಗೆಜ್ಜೆಗಿರಿ ಕ್ಷೇತ್ರಕ್ಕೆ ತೆರಳಿ ತಪ್ಪು ಕಾಣಿಕೆ ಸಲ್ಲಿಸಿ, ಕ್ಷಮೆಯಾಚನೆ ಮಾಡುವುದಾಗಿಯೂ ಜಗದೀಶ್ ಅಧಿಕಾರಿ ತಿಳಿಸಿದ್ದಾರೆ.
ಏನಿದು ವಿವಾದ?
ಮೂಡಬಿದಿರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ, ಕಾಂಗ್ರೆಸ್ ಹಿರಿಯ ನಾಯಕ ಜನಾರ್ಧನ್ ಪೂಜಾರಿ ಬಗ್ಗೆ ಅವಹೇಳನ ಮಾಡಿದ್ದರು. ಇದನ್ನು ಬಿಲ್ಲವ ಸಮಾಜದ ಹಿರಿಯ ಮುಖಂಡರೊಬ್ಬರು ಕರೆ ಮಾಡಿ ಪ್ರಶ್ನೆ ಮಾಡಿದ್ದರು. ಆದರೆ ಅವರ ಫೋನ್ ಕರೆಗೆ ಉದಾಸೀನ ರೀತಿಯಲ್ಲಿ ಜಗದೀಶ್ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದರು.

ಅಲ್ಲದೆ ಕರೆ ಕಟ್ ಮಾಡದೆ ಬಿಲ್ಲವರ ಪ್ರಮುಖ ಶಕ್ತಿಗಳಾದ ಕೋಟಿ ಚೆನ್ನಯರ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದರು. ಅವರ ಪ್ರತೀ ಮಾತುಗಳು ಫೋನ್ನಲ್ಲಿ ರೆಕಾರ್ಡ್ ಆಗಿತ್ತು.












Click it and Unblock the Notifications