ಬಂಟ್ವಾಳದಲ್ಲಿ ಯುವಕನ ಹತ್ಯೆ, ಇಂದು ಮಂಗಳೂರು ಬಂದ್
ಮಂಗಳೂರು, ನವೆಂಬರ್ 13 : ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಜಂಟಿಯಾಗಿ ಶುಕ್ರವಾರ ಮಂಗಳೂರು ಬಂದ್ಗೆ ಕರೆ ನೀಡಿವೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಮೂರು ದಿನಗಳ ಕಾಲ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಗುರುವಾರ ರಾತ್ರಿ ಬಂಟ್ವಾಳದಲ್ಲಿ ಯುವಕರಿಬ್ಬರ ಮೇಲೆ ದಾಳಿ ನಡೆಸಿದ ಅಪರಿಚಿತ ತಂಡವೊಂದು ಚೂರಿಯಿಂದ ಇರಿದು ಒಬ್ಬನನ್ನು ಹತ್ಯೆ ಮಾಡಿದೆ. ಈ ಘಟನೆಯನ್ನು ಖಂಡಿಸಿ ಮತ್ತು ಮಡಿಕೇರಿಯಲ್ಲಿ ವಿಎಚ್ಪಿ ಮುಖಂಡ ಕುಟ್ಟಪ್ಪ ಹತ್ಯೆ ಖಂಡಿಸಿ ಇಂದು ಬಂದ್ ಕರೆ ನೀಡಲಾಗಿದೆ. [ನವೆಂಬರ್ 13ರಂದು ಕರ್ನಾಟಕ ಬಂದ್ ಇಲ್ಲ]

ಶಾಲಾ ಕಾಲೇಜು ರಜೆ : ಬಂದ್ ಕರೆ ನೀಡಿರುವ ಜಿಲ್ಲಾದ್ಯಂತ ತಕ್ಷಣದಿಂದಲೇ ಜಾರಿಗೆ ಬರುವಂತೆ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಆದೇಶ ಹೊರಡಿಸಿದ್ದಾರೆ. ನ. 13ರ ಶುಕ್ರವಾರ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. [ಕೊಡಗಿನಲ್ಲಿ ಬೂದಿಮುಚ್ಚಿದ ಕೆಂಡದಂಥ ವಾತಾವರಣ]
ಬಂಟ್ವಾಳದಲ್ಲಿ ಯುವಕನ ಹತ್ಯೆ : ಕಾರಿನಲ್ಲಿ ಬಂದ ಅಪರಿಚಿತರ ತಂಡ ಯುವಕರ ಮೇಲೆ ದಾಳಿ ನಡೆಸಿ ಒಬ್ಬನನ್ನು ಹತ್ಯೆ ಮಾಡಿರುವ ಘಟನೆ ಬಂಟ್ವಾಳದಲ್ಲಿ ಗುರುವಾರ ಸಂಜೆ ನಡೆದಿದೆ. ಈ ಘಟನೆಯನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಶುಕ್ರವಾರ ಮಂಗಳೂರು ಬಂದ್ಗೆ ಕರೆ ನೀಡಿವೆ.

ನಾವೂರು ಹಳೆಗೇಟು ನಿವಾಸಿ ಹರೀಶ (30) ಮೃತಪಟ್ ಯುವಕ. ಹರೀಶ ಮತ್ತು ಸ್ನೇಹಿತ ಶಮೀವುಲ್ಲ ಅವರು ಗುರುವಾರ ಸಂಜೆ ಕ್ರಿಕೆಟ್ ಆಡಿ ಮನೆಗೆ ವಾಪಸ್ ಆಗುತ್ತಿದ್ದರು. ಅಂಗಡಿಯೊಂದರಲ್ಲಿ ತಂಪು ಪಾನೀಯ ಕುಡಿದು ರಸ್ತೆಗೆ ಬರುತ್ತಿದ್ದಂತೆ ಕಾರಿನಲ್ಲಿ ಬಂದ ಅಪರಿಚಿತರ ತಂಡ ಇಬ್ಬರ ಮೇಲೆ ದಾಳಿ ಮಾಡಿದೆ. ಇಬ್ಬರಿಗೂ ಚೂರಿಯಿಂದ ಇರಿದ ತಂಡ ಬಳಿಕ ಕಾರಿನಲ್ಲಿ ಪರಾರಿಯಾಗಿದೆ. ಚೂರಿ ಇರಿತದಿಂದ ಗಾಯಗೊಂಡಿದ್ದ ಹರೀಶ ಮೃತಪಟ್ಟರೆ ಶಮೀವುಲ್ಲ ಗಾಯಗೊಂಡಿದ್ದಾನೆ.
ಬಸ್ಸಿಗೆ ಬೆಂಕಿ : ಇತ್ತ ಪುತ್ತೂರಿನಲ್ಲಿ ಗುರುವಾರ ರಾತ್ರಿ ಅಪರಿಚಿತರು ಕೆಎಸ್ಆರ್ಟಿಸಿ ಬಸ್ಸಿಗೆ ಬೆಂಕಿ ಹಚ್ಚಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದರು.












Click it and Unblock the Notifications