ಕೊರಗಜ್ಜ ದೈವಕ್ಕೆ ಅವಮಾನ ಮಾಡಿದ್ದ ವ್ಯಕ್ತಿಯಿಂದ ಕ್ಷಮೆ ಯಾಚನೆ
ಮಂಗಳೂರು, ನವೆಂಬರ್ 6: ತುಳುನಾಡಿನ ಆರಾಧ್ಯ ಕೊರಗಜ್ಜ ದೈವಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿದ ವ್ಯಕ್ತಿಯು ಕೊರಗಜ್ಜ ದೈವ ಸನ್ನಿಧಾನಕ್ಕೆ ತೆರಳಿ, ಹರಕೆ ಒಪ್ಪಿಸಿ, ಕ್ಷಮೆ ಯಾಚಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಶಿರಸಿ ಮೂಲದ ಮನೋಜ್ ಪಂಡಿತ್ ಎಂಬಾತ ಕೆಲ ದಿನಗಳ ಹಿಂದೆ ಫೇಸ್ ಬುಕ್ ನಲ್ಲಿ ತುಳುನಾಡಿನ ಕಾರಣಿಕ ದೈವ ಎಂದೇ ನಂಬಲಾಗಿರುವ ಸ್ವಾಮಿ ಕೊರಗಜ್ಜ ಗೆ ಕೀಳು ಭಾಷೆ ಬಳಸಿ, ಬರಹ ಪೋಸ್ಟ್ ಮಾಡಿದ್ದ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಮನೋಜ್ ಪಂಡಿತ್ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು.

ಆ ನಂತರ ಪೊಲೀಸರು ಮನೋಜ್ ಪಂಡಿತ್ ನನ್ನು ಬಂಧಿಸಿ ಬಿಡುಗಡೆ ಮಾಡಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಮನೋಜ್ ಪಂಡಿತ್ ತಾಯಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ದೈವನಿಂದನೆ ಕಾರಣ ಎಂದು ಮನೋಜ್ ಗೆ ಅನ್ನಿಸಿದ್ದರಿಂದ ಕಾರಣಿಕ ದೈವ ಸ್ವಾಮಿ ಕೊರಗಜ್ಜ ಎದುರು ಹರಕೆ ಒಪ್ಪಿಸಿ, ಕ್ಷಮೆ ಯಾಚಿಸಲು ತೀರ್ಮಾನಿಸಿದ್ದರು.

ಮನೋಜ್ ಪಂಡಿತ್ ಕೋರಿಕೆಯಂತೆ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಸಾರಥ್ಯದ ಹಿಂದೂ ಸಂರಕ್ಷಣಾ ಸಮಿತಿ ಸದಸ್ಯರೊಂದಿಗೆ ಸ್ವಾಮಿ ಕೊರಗಜ್ಜ ದೈವ ಸನ್ನಿಧಾನಕ್ಕೆ ಆಗಮಿಸಿದ ಮನೋಜ್ ಪಂಡಿತ್, ಕ್ಷಮೆ ಕೋರಿ ಹರಕೆ ಒಪ್ಪಿಸಿದ್ದಾರೆ.












Click it and Unblock the Notifications