ದಕ್ಷಿಣ ಕನ್ನಡ: ಒಂದೇ ಬೈಕ್ನಲ್ಲಿ ಇಬ್ಬರು ಪುರುಷರು ಪ್ರಯಾಣಿಸುವಂತಿಲ್ಲ
ಮಂಗಳೂರು, ಆಗಸ್ಟ್ 4: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ದಿನಗಳ ಅಂತರದಲ್ಲಿ ಮೂರು ಹತ್ಯೆಗಳಾಗಿವೆ. ಹಾಗಾಗಿ ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ದ್ವಿಚಕ್ರವಾಹನದಲ್ಲಿ ಹಿಂಬದಿ ಸೀಟ್ನಲ್ಲಿ ಪುರುಷರು ಓಡಾಡುವುದಕ್ಕೆ ಕೆಲವು ದಿನಗಳ ಕಾಲದವರೆಗೆ ನಿರ್ಬಂಧ ಹೇರಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಉನ್ನತ ಮಟ್ಟದ ಸಭೆಯ ಬಳಿಕ ಮಾತನಾಡಿದ ಅವರು, "ಪ್ರಸ್ತುತ ಇರುವ ರಾತ್ರಿ ನಿರ್ಬಂಧವನ್ನು ಹಂತಹಂತವಾಗಿ ಸಡಿಲಿಕೆ ಮಾಡಲಾಗುತ್ತದೆ. ಆ ಬಳಿಕ ಮುನ್ನೆಚ್ಚರಿಕಾ ದೃಷ್ಟಿಯಿಂದ ದ್ವಿಚಕ್ರ ವಾಹನಗಳಲ್ಲಿ ಇಬ್ಬರು ಪುರುಷ ಸವಾರರ ಓಡಾಟಕ್ಕೆ ಕಡಿವಾಣ ಹಾಕಲಾಗುತ್ತದೆ. ಆದರೆ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ಈ ನಿರ್ಬಂಧ ಇರುವುದಿಲ್ಲ" ಎಂದು ಹೇಳಿದರು.
"ಫಾಜಿಲ್ ಹಂತಕರೆಲ್ಲರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ತನಿಖಾಧಿಕಾರಿ ಮಹೇಶ್ ಕುಮಾರ್ ಆರೋಪಿಗಳನ್ನು ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಿ ಚಾರ್ಜ್ ಶೀಟ್ ಸಲ್ಲಿಸುತ್ತಾರೆ. ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ಬಗ್ಗೆ ನಮಗೆ ಮಾಹಿತಿಯಿದೆ. ಸಂಚು ರೂಪಿಸಿದವರು, ಹತ್ಯೆ ಮಾಡಿದವರ ಬಗ್ಗೆ ಸಂಪೂರ್ಣ ಮಾಹಿತಿಯಿದೆ" ಎಂದರು.

"ಅವರೆಲ್ಲರೂ ತಲೆಮರೆಸಿಕೊಂಡಿದ್ದಾರೆ. ಸದ್ಯದಲ್ಲಿಯೇ ಅವರನ್ನು ದಸ್ತಗಿರಿ ಮಾಡುವ ಪ್ರಯತ್ನ ನಡೆಯುತ್ತಿದೆ. ಪ್ರಕರಣದ ತನಿಖೆಯನ್ನು ಎನ್ಐಎಗೆ ಒಪ್ಪಿಸಲಾಗಿದೆ. ಶೀಘ್ರದಲ್ಲೇ ಕರ್ನಾಟಕ ಪೊಲೀಸರು ಆರೋಪಿಗಳನ್ನು ಬಂಧಿಸಲಿದ್ದಾರೆ" ಎಂದು ಅಲೋಕ್ ಕುಮಾರ್ ಹೇಳಿದರು.
"ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ಗಡಿ ಚೆಕ್ ಪೋಸ್ಟ್ ಗಳಿವೆ. ಸಿಎಂ ನಿರ್ದೇಶನದಂತೆ ಗಡಿ ಚೆಕ್ ಪೋಸ್ಟ್, ಸಿಸಿ ಕ್ಯಾಮರಾಗಳನ್ನು ಹೆಚ್ಚಳ ಮಾಡಲಾಗುತ್ತಿದೆ. ಸೂಕ್ಷ್ಮ ಪ್ರದೇಶಗಳ ಬಗ್ಗೆ, ಕೆಲ ಸಂಘಟನೆಗಳ ಮೇಲೂ ನಿಗಾ ಇರಿಸಿದ್ದೇವೆ. ಪೊಲೀಸ್ ಅಧಿಕಾರಿಗಳು ಕಿಡಿಗೇಡಿಗಳ ಮೇಲೆ ಹದ್ದಿನ ಕಣ್ಣಿರಿಸಿದ್ದಾರೆ. ಆದ್ದರಿಂದ ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಾಕಷ್ಟು ಕ್ರಮ ಜರುಗಿಸಲಿದ್ದೇವೆ" ಎಂದರು.
"ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಗಳ ತನಿಖೆಯ ಪರಿಶೀಲನೆ ನಡೆಸಿದ್ದೇನೆ. 2015ರ ನಂತರದ ಕೋಮುಸಂಘರ್ಷದ ಪ್ರಕರಣದ ಆರೋಪಿಗಳ ಬಗ್ಗೆ, ಈ ತನಿಖೆ ಯಾವ ಹಂತದಲ್ಲಿದೆ ಎಂಬುದರ ಬಗ ಪರಿಶೀಲನೆ ನಡೆಸಲಾಗುತ್ತಿದೆ" ಎಂದು ಹೇಳಿದರು.

"ಪ್ರಕರಣದ ಆರೋಪಿಗಳು ಜಾಮೀನಿನ ಬಳಿಕ ಏನು ಮಾಡುತ್ತಿದ್ದಾರೆ? ಎಂಬ ಬಗ್ಗೆಯೂ ನಾವು ಗಮನ ಹರಿಸುತ್ತಿದ್ದೇವೆ. ಮೊದಲಾಗಿ ಸರಣಿ ಹತ್ಯೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲೂ ಪ್ರಯತ್ನ ಮುಂದುವರಿದಿದೆ. ಅಲ್ಲದೆ ಅವಿಭಜಿತ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಬಗ್ಗೆ ನಾವು ಸಂಪೂರ್ಣ ನಿಗಾ ಇರಿಸಿದ್ದೇವೆ" ಎಂದರು.












Click it and Unblock the Notifications