ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಡಾನ್ ಬಂಧನ
ಮಂಗಳೂರು, ಜನವರಿ 14: ಕರಾವಳಿಯ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಶಂಕೆಯ ಮೇಲೆ ಕೇರಳದ ಕಾಸರಗೋಡಿನ ಕುಖ್ಯಾತ ಡಾನ್ ಒಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈತ ಅರ್ ಎಸ್ ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ ಇತರ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಹೇಳಲಾಗಿದೆ.
ಭಾನುವಾರ (ಜ.13) ಸಿನಿಮೀಯ ಶೈಲಿಯಲ್ಲಿ ದಾಳಿ ಮಾಡಿದ ದೆಹಲಿ ಪೊಲೀಸರು ಮುಹತಾಸಿಂ ಅಲಿಯಾಸ್ ತಾಸಿಂ ಯಾನೆ ಡಾನ್ ಎಂಬಾತನನ್ನು ಬಂಧಿಸಿದ್ದಾರೆ.
ಕರಾವಳಿಯ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಕೆಲದಿನಗಳ ಹಿಂದೆ ಕೇಂದ್ರ ಗುಪ್ತಚರ ಇಲಾಖೆಯಿಂದ ಮಾಹಿತಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಗೆ ರವಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆರ್ ಎಸ್ ಎಸ್ ಮುಖಂಡ ಡಾ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಹೆಚ್ಚಿನ ಭದ್ರತೆಗೆ ನೀಡಲಾಗಿತ್ತು.
ಅದಲ್ಲದೇ ವಿಶ್ವ ಹಿಂದೂ ಪರಿಷತ್ ಮುಂಡರಾದ ಶರಣ್ ಪಂಪ್ ವೆಲ್ ಹಾಗೂ ಜಗದೀಶ್ ಶೇಣವ ಅವರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿತ್ತು. ಇದು ಕರಾವಳಿಯಲ್ಲಿ ಆತಂಕದ ವಾತಾವರಣ ಸೃಷ್ಠಿಸಿತ್ತು.

ಬಂಧಿಸಿದ ದೆಹಲಿ ಪೊಲೀಸರು
ಹತ್ಯೆಗೆ ಸಂಚು ರೂಪಿಸಿದ ಶಂಕೆಯಲ್ಲಿ ಕಾಸರಗೋಡು ಜಿಲ್ಲೆಯ ಚೆಮ್ನಾಡ್ ಪಂಚಾಯಿತಿ ವ್ಯಾಪ್ತಿಯ ಚೆಂಬರಿಕ ನಿವಾಸಿ, ಸಿ.ಎಂ ಮುಹತಾಸಿಂ ಅಲಿಯಾಸ್ ತಾಸಿಂ ಯಾನೆ ಡಾನ್(41)ಎಂಬುವನನ್ನು ದೆಹಲಿ ಪೊಲೀಸರು ಭಾನುವಾರ (ಜ.13)ದಂದು ಬಂಧಿಸಿದ್ದಾರೆ.

ಐಸಿಸ್ ನಂಟು ಹೊಂದಿರುವ ಶಂಕೆ
ಬಂಧಿತ ಆರೋಪಿ ಡಾನ್ ಉಗ್ರ ಸಂಘಟನೆ ಐಸಿಸ್ ನಂಟು ಹೊಂದಿರುವ ಶಂಕೆ ಇದ್ದು, ಆರ್ಎಸ್ಎಸ್ ಮುಖಂಡರ ಹತ್ಯೆಗೆ ಸ್ಕೆಚ್ ಹಾಕುವಲ್ಲಿ ಮುಹತಾಸಿಂ ಪ್ರಮುಖ ಪಾತ್ರ ವಹಿಸಿರುವ ಅನುಮಾನಗಳಿವೆ ಎಂದು ಹೇಳಲಾಗಿದೆ.

ರಹಸ್ಯ ಕಾರ್ಯಾಚರಣೆ
ಕಾಸರಗೋಡಿಗೆ ಆಗಮಿಸಿದ್ದ ದೆಹಲಿ ಪೊಲೀಸರು ಅತ್ಯಂತ ರಹಸ್ಯ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ನಂತರ ಸ್ಥಳೀಯ ಪೊಲೀಸರ ಸಹಕಾರದಿಂದ ಕಾಸರಗೋಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಿದ ಬಳಿಕ ದೆಹಲಿಗೆ ಕರೆದೊಯ್ಯದಿದ್ದಾರೆ.

ಕಾಸರಗೋಡಿಗೆ ಬಂದ ಪೊಲೀಸರು
ಆರ್ಎಸ್ಎಸ್ ಮುಖಂಡರ ಹತ್ಯೆಗೆ ಸಂಚು ನಡೆಯುತ್ತಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಗೆ ಮಾಹಿತಿ ಲಭಿಸಿದ ಬೆನ್ನಲ್ಲೇ ಕಾಸರಗೋಡಿಗೆ ಬಂದ ದೆಹಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿರುವುದು ಗಮನಾರ್ಹ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸ್ಥಳೀಯ ಪೊಲೀಸರು ನಿರಾಕರಿಸಿದ್ದಾರೆ.












Click it and Unblock the Notifications