ಜ.4ರಿಂದ ಮಂಗಳೂರಿನಲ್ಲಿ 'ಸಾದೃಶ್ಯಂ' ಚಿತ್ರಕಲಾ ಪ್ರದರ್ಶನ
ಮಂಗಳೂರು. ಜನವರಿ. 03: ಮಹಾಲಸಾ ಚಿತ್ರಕಲಾ ಶಾಲೆ ವಿದ್ಯಾರ್ಥಿಗಳಿಂದ 'ಸಾದೃಶ್ಯಂ' ಎಂಬ ಚಿತ್ರಕಲಾ ಪ್ರದರ್ಶನವನ್ನು ಬಲ್ಲಾಳ್ ಬಾಗ್ ನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಜನವರಿ 4ರಿಂದ ಜ.8ರವರೆಗೆ ಆಯೋಜಿಸಲಾಗಿದೆ.
ಈ ಚಿತ್ರಕಲಾ ಪ್ರದರ್ಶನ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ನಡೆಯಲಿದ್ದು ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಮಹಾಲಸಾ ಚಿತ್ರಕಲಾ ಶಾಲೆ ಪ್ರಾಂಶುಪಾಲ ಪುರುಷೋತ್ತಮ್ ನಾಯಕ್ ತಿಳಿಸಿದ್ದಾರೆ.
ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ಸರಸ್ವತಿ ಈ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ಮಹಾಲಸಾ ಶಿಕ್ಷಣ ಸಮಿತಿ ನಿರ್ದೇಶಕ ಬಾಬುರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಕಲಾವಿದ ರಮೇಶ್ ರಾವ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಈ ಕುರಿತು ಮಾತನಾಡಿದ ಚಿತ್ರಕಲಾ ವಿಭಾಗದ ಮುಖ್ಯಸ್ಥ ಎನ್. ಎಸ್. ಪತ್ತಾರ್, ಈಗಾಗಲೇ ಕಲಾ ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿರುವ ತೈಲವರ್ಣ ಮಾಧ್ಯಮದ ಬಳಕೆ ಉತ್ತೇಜಿಸುವ ದೃಷ್ಟಿಯಿಂದ ಶಾಲೆಯಲ್ಲಿ 'ಮರುಕೃತಿ ರಚನಾ ಶಿಬಿರ' ಆಯೋಜಿಸಲಾಗಿತ್ತು.
ಈ ಮರು ಕೃತಿಗಳನ್ನು ಇದೀಗ ಸಮೂಹ ಪ್ರದರ್ಶನ ಮಾಡಲಾಗುತ್ತಿದೆ. ಉಪನ್ಯಾಸಕ ಸಯ್ಯದ್ ಆಸಿಫ್ ಅಲಿ ಅವರ ಮಾರ್ಗದರ್ಶನದಲ್ಲಿ ಈ ಕಲಾಕೃತಿಗಳು ಮೂಡಿಬಂದಿವೆ. ಚಿತ್ರಕಲೆಗಳನ್ನು ವೀಕ್ಷಿಸಲು ಎಲ್ಲವೂ ನೈಜ್ಯ ಚಿತ್ರಣಗಳಂತೆ ಪ್ರತಿಬಿಂಬಿಸುತ್ತವೆ ಎಂದು ಅವರು ತಿಳಿಸಿದರು.
ಮರುಕೃತಿ ರಚನಾ ಶಿಬಿರದಲ್ಲಿ ಒಟ್ಟು 28 ತೈಲವರ್ಣ ಕಲಾಕೃತಿಗಳು ರಚನೆಗೊಂಡಿವೆ. ವಿದ್ಯಾರ್ಥಿಗಳಲ್ಲಿ ಕುಶಲತೆ ಹಾಗೂ ಏಕಾಗ್ರತೆ ಅಭಿವೃದ್ದಿ ಪಡಿಸುವ ಉದ್ದೇಶದಿಂದ ಈ ಕಲಾಕೃತಿಗಳನ್ನು ರಚಿಸಲಾಗಿದೆ. ಈ ಎಲ್ಲಾ ಕಲಾಕೃತಿಗಳು ಕ್ಯಾನ್ ವಾಸ್ ನ ಮೇಲೆ ರಚಿಸಿರುವುದೇ ವಿಶೇಷ ಎಂದು ಹೇಳಿದರು.