ಕೋಳಿ ತಿನ್ನಲು ಬಂದಿದ್ದ ಚಿರತೆ ಬಾವಿಗೆ ಬಿತ್ತು
ಮಂಗಳೂರು, ಮಾ. 18 : ಕೋಳಿ ತಿನ್ನಲು ಬಂದ ಚಿರತೆ ಆಯತಪ್ಪಿ ಬಾವಿಯೊಳಗೆ ಬಿದ್ದ ಘಟನೆ ಬಂಟ್ವಾಳದ ವಳಲೂರು ಎಂಬಲ್ಲಿ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ರಕ್ಷಿಸಿ ಪಿಲಿಕುಳ ವನ್ಯಧಾಮ ಕೇಂದ್ರಕ್ಕೆ ರವಾನಿಸಿದ್ದಾರೆ.
ಮಂಗಳವಾರ ರಾತ್ರಿ ಕೋಳಿ ತಿನ್ನಲು ಬಂದ ಚಿರತೆ ವಳವೂರಿನ ನಿವಾಸಿ ಲಿಂಗಪ್ಪ ಪೂಜಾರಿ ಅವರ ಮನೆ ಸಮೀಪದ ಬಾವಿಗೆ ಬಿದ್ದಿತ್ತು. ಬುಧವಾರ ಬೆಳಗ್ಗೆ ಚಿರತೆಯನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು.

ಬಾವಿಗೆ ಬಿದ್ದಿದ್ದ ಚಿರತೆ ಪೈಪನ್ನು ಹಿಡಿದುಕೊಂಡು ಕುಳಿತಿತ್ತು, ಮೇಲೆ ಬರಲು ಪ್ರಯತ್ನ ನಡೆಸಿತ್ತು. ಘಟನೆಯ ಬಗ್ಗೆ ಮಾಹಿತಿ ತಿಳಿದು ನೂರಾರು ಜನರು ಸ್ಥಳಕ್ಕೆ ಆಗಮಿಸಿದರು. ಜನರನ್ನು ಕಂಡು ಬೆದರಿದ ಚಿರತೆ ಘರ್ಜಿಸಲಾರಂಭಿಸಿತು. [ಮಂಗಳೂರು : ಕಾಡುಹಂದಿ ಉರುಳಿನಲ್ಲಿ ಸಿಕ್ಕಿಬಿದ್ದ ಚಿರತೆ]
ಕಾರ್ಯಾಚರಣೆ ಆರಂಭ : ಅಗ್ನಿಶಾಮಕದಳ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಾವಿಯ ಸುತ್ತ ಬಲೆಯನ್ನು ಹಾಕಿ ಬೋನು ಅಳವಡಿಸಿದರು. ಬಳಿಕ ಬಾವಿಯೊಳಗೆ ಏಣಿಯನ್ನು ಇಳಿಸಿ ಚಿರತೆಯನ್ನು ಮೇಲೇರುವಂತೆ ಪ್ರಚೋದಿಸಿ ಚಿರತೆ ಬೋನಿನೊಳಗೆ ಹೋಗುವಂತೆ ಮಾಡಿದರು. [ಮಂಗಳೂರು : ಚಿರತೆ ಭೀತಿಯಲ್ಲೇ ಗ್ರಾಮಸ್ಥರ ಬದುಕು]

ಪಶು ವೈದ್ಯರು ಅರವಳಿಕೆ ಚುಚ್ಚು ಮದ್ದು ನೀಡಿದ ಬಳಿಕ ಅರಣ್ಯಾಧಿಕಾರಿಗಳು ಚಿರತೆಯನ್ನು ಪಿಲಿಕುಳ ವನ್ಯಧಾಮಕ್ಕೆ ತೆಗೆದುಕೊಂಡು ಹೋದರು. ತುಂಬೆ ಪಂಚಾಯತ್ ಅಧ್ಯಕ್ಷ ಮಹಮ್ಮದ್ ವಳವೂರು ಸೇರಿದಂತೆ ಅನೇಕರು ಸ್ಥಳದಲ್ಲಿ ಹಾಜರಿದ್ದು ಚಿರತೆ ಸೆರೆಹಿಡಿಯುವ ಕಾರ್ಯಚರಣೆಗೆ ಸಹಕಾರ ನೀಡಿದರು.












Click it and Unblock the Notifications