ದ.ಕ ಜಿಲ್ಲೆಯಲ್ಲಿ ಗೆಲುವಿನ ಉತ್ತರ ಕಂಡುಕೊಳ್ಳಲಾಗದ ಎಡಪಕ್ಷಗಳು
ಮಂಗಳೂರು, ಏಪ್ರಿಲ್ 1: ಬೀಡಿ ಕಾರ್ಮಿಕರು ಹೆಚ್ಚಾಗಿ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಮ್ಯುನಿಸ್ಟ್ ಪಕ್ಷಕ್ಕೆ ಸ್ಥಾನ ಇಲ್ಲ. ಬೀಡಿ ಕಾರ್ಮಿಕರ ಹೋರಾಟ, ಕೂಲಿ ಕಾರ್ಮಿಕರ ಹೋರಾಟಗಳಲ್ಲಿ ಜೊತೆ ಇರುವ ಜನರು ಚುನಾವಣೆ ಸಮಯದಲ್ಲಿ ಮಾತ್ರ ಎಡಪಕ್ಷಗಳಿಗೆ ಮತ ನೀಡುತ್ತಿಲ್ಲ.
ಕಳೆದ ಮೂರು ದಶಕಗಳಿಂದ ಎಡಪಕ್ಷಗಳಿಗೆ ಕರಾವಳಿಯಲ್ಲಿ ಯಾವುದೇ ಗೆಲುವನ್ನು ಕೂಡ ಸಾಧಿಸಲು ಸಾಧ್ಯವಾಗಿಲ್ಲ. ಅಲ್ಲದೆ ಗಣನೀಯವಾಗಿ ಮತ ಗಳಿಕೆ ಕಡಿಮೆಯಾಗುತ್ತಿದೆ. 1962ರಲ್ಲಿ ಉಳ್ಳಾಲ ಕ್ಷೇತ್ರದಲ್ಲಿ ಸಿಪಿಐ ಪ್ರಥಮ ಜಯ ದಾಖಲಿಸಿತು. ರೈತ ನಾಯಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಎ.ಕೃಷ್ಣ ಶೆಟ್ಟಿ ಅವರು ಕಾಂಗ್ರೆಸ್ ನ ಬಿ.ಎಂ ಇದಿನಬ್ಬರ ವಿರುದ್ದ 813 ಮತಗಳ ಅಂತರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದರು.
ಒಂದೇ ಅವಧಿಗೆ ಶಾಸಕರಾಗಿದ್ದ ಅವರು 1967 ಮತ್ತು 1972ರ ಚುನಾವಣೆಯಲ್ಲಿ ಪರಾಭವಗೊಂಡರು. ಎರಡು ಕ್ಷೇತ್ರದಲ್ಲಿ ಕಮ್ಯನಿಸ್ಟ್ ನೇತಾರ ಬಿ.ವಿ.ಕಕ್ಕಿಲಾಯ ಜಯ ಗಳಿಸಿದ್ದರು. ಬಿ.ವಿ ಕಕ್ಕಿಲಾಯ ಎಂದೇ ಪ್ರಸಿದ್ಧಿ ಪಡೆದಿದ್ದ ಕಮ್ಯುನಿಸ್ಟ್ ನೇತಾರ, ಸ್ವಾತಂತ್ರ್ಯ ಹೋರಾಟಗಾರ ಬೇವಿಂಜೆ ವಿಷ್ಣು ಕಕ್ಕಿಲಾಯರು ಮಾತ್ರ ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರು.
18 ಸಾವಿರ ಮತಗಳ ಅಂತರದಿಂದ ಬಿ.ವಿ. ಕಕ್ಕಿಲಾಯ
1972ರ ಚುನಾವಣೆಯಲ್ಲಿ ಆಗಿನ ಕಾಂಗ್ರೆಸ್ ಮುಖ್ಯಮಂತ್ರಿ ದೇವರಾಜ ಅರಸು ಅವರು ಸಿಪಿಐ ಜೊತೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡರು. ಬಂಟ್ವಾಳ ಕ್ಷೇತ್ರದಲ್ಲಿ ಸಿಪಿಎಂನಿಂದ ಸ್ಪರ್ಧಿಸಿದ್ದ ಬಿ.ವಿ. ಕಕ್ಕಿಲಾಯರು 18 ಸಾವಿರ ಮತಗಳ ಅಂತರದಿಂದ ಗೆದ್ದು ದಾಖಲೆ ನಿರ್ಮಿಸಿದ್ದರು.
ವಿಟ್ಲ ಕ್ಷೇತ್ರದ ಪ್ರಥಮ ಶಾಸಕರಾದರು
ಆ ನಂತರ 1978ರಲ್ಲಿ ವಿಟ್ಲ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿ ರಚನೆಯಾಯಿತು. ಬಂಟ್ವಾಳದ ಶಾಸಕರಾಗಿದ್ದ ಬಿ.ವಿ.ಕಕ್ಕಿಲಾಯ ವಿಟ್ಲ ಕ್ಷೇತ್ರದಿಂದ ಕಣಕ್ಕಿಳಿದರು. 10 ಸಾವಿರ ಮತಗಳ ಅಂತರದ ಜಯ ಸಾಧಿಸಿ ವಿಟ್ಲ ಕ್ಷೇತ್ರದ ಪ್ರಥಮ ಶಾಸಕರಾದರು. ಆದರೆ 1983ರಲ್ಲಿ ನಡೆದ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಬಂದು, ಬಿಜೆಪಿಯ ರುಕ್ಮಯ ಪೂಜಾರಿ ಅವರು ಗೆಲ್ಲುವ ಮೂಲಕ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.
ಎರಡನೇ ಬಾರಿ ಉಳ್ಳಾಲ ಎಡಪಕ್ಷದ ವಶವಾಯಿತು
1983ರ ಚುನಾವಣೆಯಲ್ಲಿ ವಿಟ್ಲ ಕ್ಷೇತ್ರ ಕಳೆದುಕೊಂಡ ಎಡ ಪಕ್ಷಗಳಿಗೆ ಉಳ್ಳಾಲ ಕ್ಷೇತ್ರದಲ್ಲಿ ಸಿಪಿಎಂನ ರಾಮಚಂದ್ರರಾವ್ ಗೆಲವು ಸಾಧಿಸುವ ಮೂಲಕ ಎರಡನೇ ಬಾರಿ ಉಳ್ಳಾಲ ಎಡಪಕ್ಷದ ವಶವಾಯಿತು. ಆದರೆ 1985ರ ಚುನಾವಣೆಯಲ್ಲಿ ರಾಮಚಂದ್ರ ರಾವ್ ಪರಾಭವಗೊಂಡರು. ಅಲ್ಲಿಂದ ಕರಾವಳಿಯಲ್ಲಿ ಎಡಪಕ್ಷಗಳ ಗೆಲವು ಮರಿಚೀಕೆಯಾಯಿತು. ಆ ನಂತರ ನಡೆದ 7 ವಿಧಾನಸಭಾ ಚುನಾವಣೆಗಳಲ್ಲಿ ಎಡಪಕ್ಷಗಳಿಗೆ ಮತ್ತೆ ಗೆಲವು ಸಾಧಿಸಲು ಸಾಧ್ಯವಾಗಲಿಲ್ಲ. ಎಡಪಕ್ಷಗಳು ಕರಾವಳಿಯಲ್ಲಿ ಒಂದೆರಡು ಸ್ಥಾನಗಳಲ್ಲಿ ಸ್ಪರ್ಧಿಸುತ್ತಾ ಬಂದಿವೆ. ಆದರೆ ಗೆಲವು ಮಾತ್ರ ಸಾಧ್ಯವಾಗಲಿಲ್ಲ. ಅಲ್ಲದೆ ಎಡಪಕ್ಷದ ಮತ ಗಳಿಕೆ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗುತ್ತಾ ಬಂದಿದೆ.
ಮಂಗಳೂರು ದಕ್ಷಿಣಕ್ಕೆ ಸುನಿಲ್ ಕುಮಾರ್ ಬಜಾಲ್
ಈ ಸಲದ ಕರ್ನಾಟಕ ವಿಧಾನಸಭಾ ಕ್ಷೇತ್ರಕ್ಕೆ ಸಿಪಿಎಂನಿಂದ ಮಂಗಳೂರು ದಕ್ಷಿಣಕ್ಕೆ ಸುನಿಲ್ ಕುಮಾರ್ ಬಜಾಲ್ ಮತ್ತು ಮಂಗಳೂರು ಉತ್ತರದಿಂದ ಮುನೀರ್ ಕಾಟಿಪಳ್ಳ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಕಳೆದ ಮೂರು ದಶಕಗಳಿಂದ ಗೆಲ್ಲಲು ಪ್ರಯತ್ನಿಸುತ್ತಿರುವ ಎಡ ಪಕ್ಷಗಳಿಗೆ ಈ ಬಾರಿ ಗೆಲುವು ಸಿಗಲಿದೆಯಾ ಕಾದು ನೋಡಬೇಕಿದೆ.