ಹೈಕಮಾಂಡ್ ಕೊಟ್ಟ ಹುದ್ದೆಯನ್ನು ಒಲ್ಲೆಯೆಂದ ಕಾಂಗ್ರೆಸ್ಸಿನ ಶಿಸ್ತಿನ ಸಿಪಾಯಿ
ಮಂಗಳೂರು, ಏಪ್ರಿಲ್ 12: ಕಳೆದ ಕೆಲವು ತಿಂಗಳ ಹಿಂದೆಯೇ ಅಂತಿಮವಾಗ ಬೇಕಿದ್ದ ಕರ್ನಾಟಕ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಫೈನಲ್ ಮಾಡಿದ್ದಾರೆ.
ಈ ಪಟ್ಟಿ ಬಿಡುಗಡೆ ಮಾಡಿದ ನಂತರ ಕಾಂಗ್ರೆಸ್ ಅತೃಪ್ತರ ಪಟ್ಟಿ ಬೆಳೆಯುತ್ತಾ ಸಾಗುತ್ತಿದೆ. ಪಕ್ಷಕ್ಕಾಗಿ ಹಗಲು ರಾತ್ರಿ ದುಡಿದವರನ್ನು ಕಡೆಗಣಿಸಿ, ಪಕ್ಷ ಸಂಘಟನೆಯನ್ನು ಪಾಲ್ಗೊಳ್ಳದೇ ಮನೆಯಲ್ಲಿ ಕಾಲಹರಣ ಮಾಡುತ್ತಿರುವವರಿಗೆ ಮಣೆ ಹಾಕಲಾಗಿದೆ ಎನ್ನುವ ಕೂಗು ಹೆಚ್ಚಾಗುತ್ತಿದೆ.
ಕೆಪಿಸಿಸಿಗೆ 40 ಜನ ಉಪಾಧ್ಯಕ್ಷರು, 109 ಪ್ರಧಾನ ಕಾರ್ಯದರ್ಶಿಗಳ ನೇಮಕ
ಮಹಿಳೆಯರಿಗೆ, ಹಿಂದುಳಿಗೆ ವರ್ಗದವರಿಗೆ, ಅಲ್ಪಸಂಖ್ಯಾತರಿಗೆ, ಲಿಂಗಾಯತ, ಒಕ್ಕಲಿಗೆ ಸಮದಾಯ ಸೇರಿದಂತೆ ಎಲ್ಲರಿಗೂ ಮಣೆ ಹಾಕಲಾಗಿದೆ ಎಂದು ಕೆಪಿಸಿಸಿ ಹೇಳುತ್ತಿದ್ದರೂ, ಆಕಾಂಕ್ಷಿಗಳ ಒತ್ತಡದ ಕಾರಣಕ್ಕಾಗಿ ಮತ್ತೆ ಹೆಸರುಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ.
ಆದರೆ, ಇತ್ತ, ಯಾವ ಅಪೇಕ್ಷೆಯನ್ನೂ ನಿರೀಕ್ಷಿಸದಿದ್ದರೂ, ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿಯವರ ಮಗನಿಗೆ ಪದಾಧಿಕಾರಿ ಹುದ್ದೆಯಲ್ಲಿ ಸ್ಥಾನ ಸಿಕ್ಕಿದೆ. ಆದರೆ, ಇದನ್ನು ಅವರ ಕುಟುಂಬ ನಯವಾಗಿ ನಿರಾಕರಿಸಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಟೀಕಿಸುವ ಭರದಲ್ಲಿ ಸಿದ್ದರಾಮಯ್ಯ ಯಾಕಿಂತಹ ಎಡವಟ್ಟು!
ಏಪ್ರಿಲ್ ಒಂಬತ್ತನೇ ತಾರೀಕಿಗೆ ಬಿಡುಗಡೆ ಮಾಡಿದ ಪಟ್ಟಿ
ಏಪ್ರಿಲ್ ಒಂಬತ್ತನೇ ತಾರೀಕಿಗೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ನಲವತ್ತು ಜನರಿಗೆ ಉಪಾಧ್ಯಕ್ಷ ಸ್ಥಾನವನ್ನು ಮತ್ತು 109 ಮುಖಂಡರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ನೀಡಿ ಪ್ರಕಟಿಸಲಾಗಿತ್ತು. ಕೆಪಿಸಿಸಿ ಉಪಾಧ್ಯಕ್ಷ ಸ್ಥಾನದಲ್ಲಿ ಕರಾವಳಿಯ ಅಭಯಚಂದ್ರ ಜೈನ್, ರಮಾನಾಥ ರೈ, ಪ್ರಮೋದ್ ಮಧ್ವರಾಜ್, ಐವಾನ್ ಡಿಸೋಜ ಸೇರಿದಂತೆ, ಜನಾರ್ಧನ ಪೂಜಾರಿಯವರ ಪುತ್ರ ದೀಪಕ್ ಪೂಜಾರಿಯವರ ಹೆಸರನ್ನು ಪ್ರಕಟಿಸಲಾಗಿತ್ತು. ಹೈಕಮಾಂಡ್ ನೀಡಿದ ಈ ಅನಿರೀಕ್ಷಿತ ಹುದ್ದೆಗೆ ಪೂಜಾರಿ ನೋ ಎಂದಿದ್ದಾರೆ.
ಮಕ್ಕಳನ್ನು ಜನಾರ್ದನ ಪೂಜಾರಿ ಸಕ್ರಿಯ ರಾಜಕೀಯದಿಂದ ದೂರ ಉಳಿಸಿದ್ದರು
ಮಕ್ಕಳನ್ನು ಜನಾರ್ದನ ಪೂಜಾರಿ ಸಕ್ರಿಯ ರಾಜಕೀಯದಿಂದ ದೂರ ಉಳಿಸಿದ್ದರೂ ಈ ಲಿಸ್ಟ್ನಲ್ಲಿ ಏಕಾಏಕಿ ಅವರ ಪುತ್ರನ ಹೆಸರು ಸೇರ್ಪಡೆ ಕರಾವಳಿ ಭಾಗದಲ್ಲಿ ಹಲವು ಕುತೂಹಲಕ್ಕೆ ಕಾರಣವಾಗಿತ್ತು. ಪ್ರಾಮಾಣಿಕ ವ್ಯಕ್ತಿತ್ವದ ಪೂಜಾರಿಯವರು ಅನಾರೋಗ್ಯದ ಕಾರಣಕ್ಕಾಗಿ ರಾಜಕೀಯದಲ್ಲಿ ಅಷ್ಟಾಗಿ ತಮ್ಮನ್ನೀಗ ಗುರುತಿಸಿಕೊಂಡಿಲ್ಲ. ಕರಾವಳಿ ಭಾಗದ ರಮಾನಾಥ್ ರೈ ಜೊತೆ ಪೂಜಾರಿ ಉತ್ತಮ ಸಂಬಂಧವನ್ನು ಹೊಂದಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ, ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡು, ಪೂಜಾರಿಯವರು ಹಲವು ಬಾರಿ ಪಕ್ಷಕ್ಕೆ ಮುಜುಗರವನ್ನು ತಂದಿದ್ದರು.
ಕುದುರೆಮುಖ ಕಬ್ಬಿಣದ ಅದಿರು ಕಂಪನಿಯಲ್ಲಿ ಎಂಜಿನಿಯರ್
ಹಿರಿಯ ಮುಖಂಡ ಜನಾರ್ಧನ ಪೂಜಾರಿಯವರಿಗೆ ಮೂವರು ಪುತ್ರರು ಮತ್ತು ಮೂವರೂ ಉತ್ತಮ ಹುದ್ದೆಯಲ್ಲಿದ್ದಾರೆ. ದೀಪಕ್ ಪೂಜಾರಿಯವರು, ಕುದುರೆಮುಖ ಕಬ್ಬಿಣದ ಅದಿರು ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಪೂಜಾರಿಯವರು ರಾಜಕೀಯದಲ್ಲಿ ಇರುವಾಗಲೂ ಪುತ್ರರಿಬ್ಬರು ರಾಜಕೀಯದಿಂದ ದೂರನೇ ಇದ್ದವರು. ಚುನಾವಣೆಯ ವೇಳೆ, ಅಪ್ಪನ ಪರವಾಗಿ ಪ್ರಚಾರದಲ್ಲಿ ಮಾತ್ರ ಇವರು ಗುರುತಿಸಿಕೊಂಡಿದ್ದವರು. ಚುನಾವಣಾ ಸಮಯದಲ್ಲಿ ತಂದೆಗೆ ಇವರು ಸಾಥ್ ನೀಡುತ್ತಿದ್ದದ್ದನ್ನು ಬಿಟ್ಟರೆ, ಅಷ್ಟಾಗಿ ಜಿಲ್ಲೆಯ ರಾಜಕೀಯದಲ್ಲಿ ಪೂಜಾರಿ ಮಕ್ಕಳ ಹೆಸರು ಚಾಲ್ತಿಯಲ್ಲಿರಲಿಲ್ಲ.
ನಳಿನ್ ಕುಮಾರ್ ಕಟೀಲ್ ವಿರುದ್ದ 143,709 ಮತಗಳ ಅಂತರದಿಂದ ಪೂಜಾರಿ ಪರಾಭವ
ಮೂಲಗಳ ಪ್ರಕಾರ, ಬಯಸದೇ ಬಂದ ಭಾಗ್ಯವನ್ನು ಜನಾರ್ಧನ ಪೂಜಾರಿಯವರ ಕುಟುಂಬ ಬೇಡವೆಂದು ಹೇಳಿದೆ. ಹಿಂದೆಯೂ ಮಕ್ಕಳನ್ನು ರಾಜಕೀಯಕ್ಕೆ ಕರೆತಂದಿಲ್ಲ, ನನ್ನ ಸಂಧ್ಯಾ ಜೀವನದಲ್ಲಿ ಮಕ್ಕಳು ರಾಜಕೀಯಕ್ಕೆ ಬರುವುದೂ ಬೇಕಾಗಿಲ್ಲ. ಸೂಕ್ತರಿಗೆ ಆ ಹುದ್ದೆಯನ್ನು ನೀಡಿ ಎಂದು ಪೂಜಾರಿ ಹೇಳಿದ್ದಾರೆ ಎನ್ನುವ ಮಾಹಿತಿಯಿದೆ. ಇಂದಿರಾ, ರಾಜೀವ್ ಗಾಂಧಿ ಕಾಲದಲ್ಲಿ ಕೇಂದ್ರ ಸಚಿವರಾಗಿದ್ದ ಪೂಜಾರಿಯವರು ಹೈಕಮಾಂಡ್ ಪರಮಾಪ್ತರಲ್ಲಿ ಒಬ್ಬರಾಗಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ವಿರುದ್ದ 143,709 ಮತಗಳ ಅಂತರದಿಂದ ಪೂಜಾರಿ ಪರಾಭವಗೊಂಡ ನಂತರ ಬಹುತೇಕ ರಾಜಕೀಯದಿಂದ ದೂರ ಸರಿದಿದ್ದರು.