ದೆಹಲಿಯಲ್ಲಿ ನಾಪತ್ತೆಯಾಗಿದ್ದ ಮಂಗಳೂರಿನ ನಾಲ್ವರು ಪತ್ತೆ
ಮಂಗಳೂರು, ಜೂನ್ 24 : ಇತ್ತೀಚೆಗೆ ದೆಹಲಿಯಲ್ಲಿ ಅಪಹರಣಕ್ಕೊಳಗಾಗಿದ್ದ ಪುತ್ತೂರು ತಾಲೂಕಿನ ನಾಲ್ವರನ್ನು ಅಪಹರಣಕಾರರು ದುಡ್ಡು ಕಸಿದುಕೊಂಡು ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ಸ್ವತಃ ಅವರೇ ಮನೆಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಇದೀಗ ಎಲ್ಲರೂ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪುತ್ತೂರು ತಾಲೂಕಿನ ಹಳೆ ನೇರಂಕಿ ಎಂಬಲ್ಲಿ ಕೊರಗಪ್ಪ ಪೂಜಾರಿ ಎಂಬವರ ಪುತ್ರ ಕೃಷ್ಣ ಪ್ರಸಾದ್ (26), ಅಭಿಲಾಶ್, ಕಲ್ಲಡ್ಕದ ಪ್ರಶಾಂತ್, ದಿನೇಶ್ ಎಂಬವರನ್ನು ಶುಕ್ರವಾರ ದೆಹಲಿಯಲ್ಲಿ ದುಷ್ಕರ್ಮಿಗಳು ಅಪಹರಿಸಿ 3 ಲಕ್ಷ ರು,ಗೆ ಬೇಡಿಕೆ ಇಟ್ಟಿದ್ದರು.
ನಾಲ್ವರು ಸ್ನೇಹಿತರು ಇತ್ತೀಚಿಗೆ ದೆಹಲಿಗೆ ಜಿಮ್ ಸಲಕರಣೆಗಳ ಖರೀದಿಗೆಂದು ತೆರಳಿದ್ದರು. ಈ ಸಂದರ್ಭದಲ್ಲಿ ನಾಲ್ವರನ್ನು ಅಪಹರಿಸಿ ಮೂರೂ ಲಕ್ಷ ರೂ. ಹಣದ ಬೇಡಿಕೆ ಇಟ್ಟದ್ದರು.
ಕೃಷ್ಣ ಪ್ರಸಾದ್ ನಾಪತ್ತೆಯಾದ ಬಗ್ಗೆ ಅವರ ತಂದೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪುತ್ರನನ್ನು ಬಿಡಿಸುವ ದೆಸೆಯಲ್ಲಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಅವರಿಗೆ ಮನವಿ ಮಾಡಿಕೊಂಡಿದ್ದರು.
ಯುವಕರು ಹರಿಯಾಣ ಮತ್ತು ದಿಲ್ಲಿ ಬಾರ್ಡರ್ ನಿಂದ ಕರೆ ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿತ್ತು. ದೆಹಲಿಯಲ್ಲಿ ಪೊಲೀಸರು ಕಾರ್ಯಾಚರಣೆಗಿಳಿದಿರುವಂತೆಯೇ ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಕೂಡ ಅಲ್ಲಿಗೆ ವಿಮಾನದಲ್ಲಿ ತೆರಳಲು ಸಿದ್ಧರಾಗಿದ್ದರು.
ಅಪಹರಣಕ್ಕೊಳಗಾದ ಯುವಕರೇ ಕರೆ ಮಾಡಿ ತಾವು ಬಿಡುಗಡೆಯಾಗಿದ್ದಾಗಿ ಮಾಹಿತಿ ನೀಡಿದ್ದಾರೆ. 1.5 ಲಕ್ಷ ರು. ಕಸಿದುಕೊಂಡಿದ್ದು ಯುವಕರ ಮೊಬೈಲ್ ಗಳನ್ನೂ ಅಪಹರಣಕಾರರು ಕಸಿದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಅಪಹರಣಕ್ಕೊಳಗಾದವರು ಊರಿಗೆ ಮರಳಿದ ಬಳಿಕವಷ್ಟೇ ಹೆಚ್ಚಿನ ಮಾಹಿತಿ ತಿಳಿಯಲಿದೆ.












Click it and Unblock the Notifications