ಮಂಗಳೂರು-ಕಾಸರಗೋಡು ನಿತ್ಯ ಸಂಚಾರಕ್ಕೆ ಕೇರಳದ ತಡೆ
ಮಂಗಳೂರು, ಜುಲೈ 08 : ಕೇರಳ ಸರ್ಕಾರ ದಕ್ಷಿಣ ಕನ್ನಡ ಮತ್ತು ಕಾಸರಗೋಡು ನಡುವಿನ ನಿತ್ಯ ಸಂಚಾರಕ್ಕೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆದಿದೆ. ಮಂಗಳವಾರದಿಂದಲೇ ನಿತ್ಯ ಸಂಚಾರಕ್ಕೆ ತಡೆ ಹಾಕಲಾಗಿದೆ.
Recommended Video
ಉದ್ಯೋಗ ಮತ್ತು ಶಿಕ್ಷಣದ ಕಾರಣಕ್ಕೆ ದಕ್ಷಿಣ ಕನ್ನಡ ಮತ್ತು ಕಾಸರಗೋಡು ನಡುವೆ ನಿತ್ಯ ಸಂಚಾರ ನಡೆಸಲು ಕೇರಳ ಸರ್ಕಾರ ಅವಕಾಶ ನೀಡಿತ್ತು. ಆದರೆ, ಗಡಿ ಜಿಲ್ಲೆಗಳ ನಡುವಿನ ನಿತ್ಯ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ನಿತ್ಯವೂ ಮಂಗಳೂರಿಗೆ ಬಂದು ಹೋಗುತ್ತಿದ್ದ ಕೆಲವರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೇರಳ ನಿತ್ಯ ಸಂಚಾರಕ್ಕೆ ತಡೆ ಹಾಕಿದೆ. ತಿಂಗಳಿಗೊಮ್ಮೆ ಸಂಚಾರ ನಡೆಸಲು ಅವಕಾಶ ನೀಡಿದೆ.

ಎರಡೂ ಜಿಲ್ಲೆಗಳ ಜನರ ಬೇಡಿಕೆಯಂತೆ ನಿತ್ಯ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು. ಎರಡೂ ಜಿಲ್ಲಾಡಳಿತಗಳು ನಿತ್ಯ ಸಂಚಾರ ನಡೆಸುವ ಜನರಿಗೆ ಪಾಸುಗಳನ್ನು ವಿತರಣೆ ಮಾಡಿದ್ದವು.
ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸಂಚಾರ ನಡೆಸುವವರು 28 ದಿನಗಳ ಕಾಲ ಅಲ್ಲಿಯೇ ಇರುವ ಷರತ್ತಿಗೆ ಒಪ್ಪಿಗೆ ನೀಡಿದರೆ ಮಾತ್ರವೇ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕಾಸರಗೋಡು ಜಿಲ್ಲಾಡಳಿತ ಹೇಳಿದೆ.
ನಿತ್ಯ ಸಂಚಾರಕ್ಕೆ ತಡೆ ಹಾಕಿರುವ ಕೇರಳ ಸರ್ಕಾರ ತಲಪಾಡಿ ಚೆಕ್ ಪೋಸ್ಟ್ನಲ್ಲಿ ಹೆಚ್ಚುವರಿ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಿದೆ. ನಿತ್ಯ ಸಂಚಾರಕ್ಕೆ ಅವಕಾಶ ನೀಡುವಂತೆ ಬುಧವಾರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಬಿಜೆಪಿ ಮಂಜೇಶ್ವರ ಘಟಕದ ಮುಖಂಡರು ಹೇಳಿದ್ದಾರೆ.












Click it and Unblock the Notifications