ಮಂಗಳೂರಲ್ಲಿ ಮಹದಾಯಿಗಾಗಿ ಮಿಡಿಯುವವರಿಲ್ಲ!
ಮಂಗಳೂರು, ಜುಲೈ 30: ಮಹದಾಯಿ ಯೋಜನೆ ತೀರ್ಪನ್ನು ವಿರೋಧಿಸಿ ಕರೆ ನೀಡಲಾಗಿರುವ ಕರ್ನಾಟಕ ಬಂದ್ ಗೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ನೈತಿಕ ಬೆಂಬಲ ನೀಡಲು ನಿರ್ಧರಿಸಿದ್ದು, ಯಾವುದೇ ಬಂದ್ ನಡೆಸುವುದಿಲ್ಲ ಎಂದು ಸಂಘ ಸಂಸ್ಥೆಗಳು ಘೋಷಿಸಿದ್ದವು, ಅದರಂತೆ, ಜಿಲ್ಲೆಯಾದ್ಯಂತ ಬಂದ್ ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಬಂದ್ ಗೆ ಸಂಬಂಧಿಸಿದಂತೆ ಯಾವುದೇ ಸಂಘಟನೆಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿಲ್ಲ. ಹಾಗಾಗಿ, ಶಾಲಾ , ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಎ. ಬಿ ಇಬ್ರಾಹಿಂ ತಿಳಿಸಿದ್ದಾರೆ.[ಗ್ಯಾಲರಿ: ಮಹದಾಯಿ ತೀರ್ಪು ಖಂಡಿಸಿ ರೈತರ ಆಕ್ರೋಶ]
ಬಸ್ ಸಂಚಾರಕ್ಕೆ ಅಡ್ಡಿಯಿಲ್ಲ: ರಾಜ್ಯ ಬಂದ್ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಯಾವುದೇ ಅಡ್ಡಿ ಆತಂಕವಿಲ್ಲ. ಮಾತ್ರವಲ್ಲದೆ ನಮಗೆ ಬೆಂಬಲಿಸಲು ಯಾರು ಕೂಡಾ ಸಂಪರ್ಕ ಮಾಡಿಲ್ಲ. ಪ್ರತಿನಿತ್ಯದಂತೆ ಬಸ್ಗಳು ಸಂಚಾರ ನಡೆಸಿವೆ ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲಕರ ಒಕ್ಕೂಟದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಹೇಳಿದ್ದಾರೆ. [ಮಹದಾಯಿ ನೀರು ಹಂಚಿಕೆ : ಕಥೆ ವ್ಯಥೆ ಟೈಮ್ ಲೈನ್]
ಅದೇ ರೀತಿ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಬಸ್ಗಳನ್ನು ಬೆಳಗ್ಗಿನ ಪರಿಸ್ಥಿತಿಯನ್ನು ನೋಡಿ ನಿರ್ಧರಿಸಲಾಗಿದ್ದು, ದೂರದ ಪ್ರಯಾಣದ ಬಸ್ ಸಂಚಾರ ಕೂಡಾ ಆರಂಭಿಸಲಾಗಿದೆ ಎಂದು ಕೆಎಸ್ ಆರ್ಟಿಸಿ ಡಿಸಿ ವಿವೇಕಾನಂದ ಹೆಗ್ಡೆ ಹೇಳಿದರು.

ಮಂಗಳೂರಲ್ಲಿ ಅಲ್ಲಲ್ಲಿ ಪ್ರತಿಭಟನೆ
ಬೆಳಗ್ಗೆ ಡಿಸಿ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಮಾಡಲಾಯಿತು. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ದಾಸ್ ಮಾತನಾಡಿ ಕನ್ನಡ ಭಾಷೆ ನೆಲ, ಜಲ ರಕ್ಷಣೆಗೆ ಕರ್ನಾಟಕ ರಕ್ಷಣಾ ವೇದಿಕೆ ಯಾವತ್ತೂ ಬದ್ದವಾಗಿದ್ದು ಮಹಾದಾಯಿ ಹೋರಾಟ ವಿಷಯದಲ್ಲೂ ರಾಜ್ಯದ ಜನತೆಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ಬೀದಿಗಿಳಿದು ಹೋರಾಟ
ರಾಜ್ಯದಲ್ಲಿ ರೈತರಿಗೆ ಅನ್ಯಾಯವಾದಾಗ ಕರ್ನಾಟಕ ರಕ್ಷಣಾ ವೇದಿಕೆ ಬೀದಿಗಿಳಿದು ಹೋರಾಟ ಮಾಡುತ್ತದೆ. ಮಹಾದಾಯಿ ವಿಷಯದಲ್ಲೂ ಜಿಲ್ಲಾ ಕರವೇ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ಮುಂದುವರೆಸಿದೆ. ಟಯರ್ ಗಳಿಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನೆ ಮುಂದುವರೆದಿದೆ.

ಸಿನಿಮಾಕ್ಕಿಲ್ಲ ಆತಂಕ
ಜಿಲ್ಲೆಯಲ್ಲಿ ಸಿನೆಮಾ ಪ್ರದರ್ಶನಕ್ಕೆ ಅಡ್ಡಿ ಆತಂಕವಿಲ್ಲ. ಚಿತ್ರ ಪ್ರದರ್ಶನ ನಡೆಸಲಿದೆ ಎಂದು ಚಿತ್ರ ಪ್ರದರ್ಶನಕಾರರ ಸಂಘದ ಕಾರ್ಯದರ್ಶಿ ಶಂಕರ್ ಪೈ ಹೇಳಿದರು.

ಬಂದ್ ನಿಂದ ಜನಜೀವನಕ್ಕೆ ಹಾನಿಯಿಲ್ಲ
ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶಾಲೆ ಕಾಲೇಜುಗಳು, ವ್ಯವಹಾರ ವಹಿವಾಟುಗಳು,ಹೊಟೆಲ್, ಆಟೋರಿಕ್ಷಾ, ಟ್ಯಾಕ್ಸಿ, ರೈಲು, ಸಿನೆಮಾ ಪ್ರದರ್ಶನ ಎಂದಿನಂತೆ ನಡೆದಿದೆ.












Click it and Unblock the Notifications