ಮಂಗಳೂರು : ಕಡಲ್ಕೊರೆತ ತಡೆಗೆ ಶಾಶ್ವತ ಯೋಜನೆ
ಮಂಗಳೂರು, ಜೂ. 19 : ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಕಡಲ್ಕೊರೆತವನ್ನು ಶಾಶ್ವತವಾಗಿ ತಡೆಗಟ್ಟುವ ತಡೆಗೋಡೆಯನ್ನು ನಿರ್ಮಿಸಲು ಸರ್ಕಾರ ಎರಡು ಕಂಪನಿಗಳಿಗೆ ಟೆಂಡರ್ ನೀಡಿದೆ ಎಂದು ಅರಣ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಮೀಪದಲ್ಲಿ ಕಡಲ್ಕೊರೆತ ಉಂಟಾದ ಸ್ಥಳವನ್ನು ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಸಚಿವ ರಮಾನಾಥ ರೈ, ಮುಂಗಾರು ಮಳೆ ಆರಂಭವಾಗುವ ಅವಧಿಯಲ್ಲಿ ಕರ್ನಾಟಕದ ಕರಾವಳಿ ತೀರದಲ್ಲಿ ಕಡಲ್ಕೊರೆತ ಸಂಭವಿಸುತ್ತದೆ ಎಂದು ಹೇಳಿದರು.

ಸರ್ಕಾರ ಕಡಲ್ಕೊರೆತ ತಡೆಯಲು ಶಾಶ್ವತ ಪರಿಹಾರ ರೂಪಿಸುತ್ತಿದೆ. ಅದಕ್ಕಾಗಿ 900 ಕೋಟಿ ರೂ.ಗಳ ಯೋಜನೆಯನ್ನು ರೂಪಿಸಿದೆ ಎಂದು ಸಚಿವರು ತಿಳಿಸಿದರು. ಮೊದಲ ಹಂತದ ಕಾಮಗಾರಿ ಕೈಗೊಳ್ಳಲು ಎರಡು ಕಂಪೆನಿಗಳಿಗೆ ಸರ್ಕಾರ ಟೆಂಡರ್ ನೀಡಿದೆ ಎಂದರು. [ಉಳ್ಳಾಳದಲ್ಲಿ ಕಡಲ್ಕೊರೆತ 40 ಮನೆಗಳಿಗೆ ಹಾನಿ]
ಮುಂಬೈ ಮೂಲದ ಆರ್.ಬಿ.ಚೌವ್ಹಾಣ್ ಮತ್ತು ಕೊಚ್ಚಿ ಮೂಲದ ಆರ್.ಡಿ.ಎಸ್ ಕಂಪನಿಗೆ ಮೊದಲ ಹಂತದ ಕಾಮಗಾರಿಗಳ ಟೆಂಡರ್ ನೀಡಲಾಗಿದೆ. ಈ ಕಂಪನಿಗಳು ಕಡಲ ತೀರದಲ್ಲಿ ಶಾಶ್ವಾತ ತಡೆಗೋಡೆಯನ್ನು ನಿರ್ಮಿಸಲಿವೆ ಎಂದು ರಮಾನಾಥ ರೈ ಹೇಳಿದ್ದಾರೆ.
ಮೊದಲ ಹಂತದಲ್ಲಿ ಕೈಗೊಂಡ ಕಾಮಗಾರಿಗಳು 2016ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಕಡಲ್ಕೊರೆತಕ್ಕೆ ತಾತ್ಕಾಲಿಕ ಪರಿಹಾರದ ಕಾಮಗಾರಿ ಕೈಗೊಳ್ಳಲು ಸರ್ಕಾರ 10 ಕೋಟಿ ರೂ.ಗಳನ್ನು ಮೀಸಲಾಗಿಟ್ಟಿದೆ ಎಂದು ಸಚಿವರು ಮಾಹಿತಿ ನೀಡಿದರು.
ತಾತ್ಕಾಲಿಕವಾಗಿ ಸ್ಥಳಾಂತರ : ಉಳ್ಳಾಳದಲ್ಲಿ ಕಡಲ್ಕೊರೆತಕ್ಕೆ ಸಿಲುಕಿ ಸಂತ್ರಸ್ತರಾಗಿರುವ 70 ಕುಟುಂಬಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗುವುದು. ಉಳ್ಳಾಲ ಕಡಲ ತೀರದಲ್ಲಿ ರಸ್ತೆಗಳು ಸಹ ಕಡಲ್ಕೊರೆತದಿಂದ ಹಾನಿಗೀಡಾಗಿವೆ ಎಂದು ಸಚಿವರು ಹೇಳಿದರು.












Click it and Unblock the Notifications