Mangaluru North Constituency: ಹಿಂದುತ್ವ, ಅಭಿವೃದ್ದಿ ವಿಚಾರದಲ್ಲಿ ಬಿಜೆಪಿ - ಕಾಂಗ್ರೆಸ್ ಬಿಗ್ ಫೈಟ್
ವಿಧಾನಸಭಾ ಕ್ಷೇತ್ರಗಳ ವಿಂಗಡಣೆಯ ನಂತರ ಹಿಂದಿನ ಸುರತ್ಕಲ್ ಗೆ, ಮೂಡಬಿದಿರೆ ವ್ಯಾಪ್ತಿಯ ಕೆಲವೊಂದು ಗ್ರಾಮಗಳನ್ನು ಸೇರಿಸಿ ಮಂಗಳೂರು ಉತ್ತರ ಎಂದು ನಾಮಕರಣ ಮಾಡಲಾಯಿತು. ಮಂಗಳೂರು ಮಹಾನಗರ ಪಾಲಿಕೆಯ 23 ವಾರ್ಡುಗಳು, ಗುರುಪುರ ಮತ್ತು ಸುರತ್ಕಲ್ , ಈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.
ಮಂಗಳೂರು ಬಂದರು, ಆಯಿಲ್ ರಿಫೈನರಿ, ಎಂಸಿಎಫ್ ಸೇರಿದಂತೆ ವಾಣಿಜ್ಯೋದ್ಯಮದಿಂದ ಕೂಡಿರುವ ಈ ಕ್ಷೇತ್ರದಲ್ಲಿ ವಿಭಿನ್ನ ಜನಾಂಗ, ಭಾಷೆಯ ಜನರು ನೆಲೆಸಿದ್ದಾರೆ. ಖಟ್ಟರ್ ಹಿಂದೂ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘಟನೆ, ಬಜರಂಗದಳ, ಶ್ರೀರಾಮಸೇನೆ, ಮುಸ್ಲಿಂ ಖಟ್ಟರ್ ಸಂಘಟನೆ ಪಿಎಫ್ಐ ಸಕ್ರಿಯವಾಗಿರುವ ಕ್ಷೇತ್ರ ಕೂಡಾ ಇದಾಗಿದೆ. ಸದಾ ಒಂದಲ್ಲಾ ಒಂದು ಕೋಮು ಸಂಘರ್ಷಕ್ಕೆ ಈ ಕ್ಷೇತ್ರ ಹೆಸರಾಗಿರುವುದರಿಂದ ಕೋಮುಸೂಕ್ಷ್ಮ ಪ್ರದೇಶವೆಂದು ಪೊಲೀಸ್ ಫೈಲ್ನಲ್ಲಿ ದಾಖಲಾಗಿದೆ.

ದಕ್ಷಿಣ ಕನ್ನಡದ ಇತರ ಭಾಗದಂತೆ ತುಳು ಇಲ್ಲಿ ಸಂವಹನೆಗೆ ಹೆಚ್ಚಾಗಿ ಬಳಸುವ ಭಾಷೆ. ಪ್ರವಾಸೋದ್ಯಮ, ಉದ್ಯಮ, ಮೀನುಗಾರಿಕೆ, ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಕೊಂಕಣಿ, ಸೂಫಿ ಸಂಸ್ಕೃತಿಯ ಬ್ಯಾರಿ, ಮಲಯಾಳಿ ಭಾಷಿಗರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದೇವಾರಾಧನೆ, ದೈವರಾಧನೆ, ನಾಗಾರಾಧನೆಗೆ ಕ್ಷೇತ್ರದಲ್ಲಿ ಹೆಚ್ಚಿನ ಪ್ರಾಶಸ್ತ್ಯ. ತೆಂಗು, ಅಡಿಕೆ, ಭತ್ತ ಈ ಭಾಗದಲ್ಲಿ ಬೆಳೆಯುವ ಪ್ರಮುಖ ಬೆಳೆಗಳು. ಮಂಗಳೂರು ಬಂದರು ಇಲ್ಲಿನ ಆರ್ಥಿಕತೆ ಜೀವಾಳ.
ಕ್ಷೇತ್ರ ವಿಂಗಡಣೆಯ ನಂತರ ನಡೆದ ನಾಲ್ಕು ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಎರಡು ಬಾರಿ ಗೆದ್ದಿವೆ. ಕಳೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಬಿಜೆಪಿಯ ಡಾ. ವೈ.ಭರತ್ ಶೆಟ್ಟಿಯವರು ಕಾಂಗ್ರೆಸ್ಸಿನ ಬಿ.ಎ.ಮೊಹಿಯುದ್ದೀನ್ ಬಾವ ವಿರುದ್ದ 26,648 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ತ್ರಾಸದಾಯಕ ಆಗಬಹುದು ಎನ್ನುವುದು ಸದ್ಯದ ಚಿತ್ರಣ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರು ನಂತರ ಅತಿಹೆಚ್ಚು ಕಾಂಗ್ರೆಸ್ ಟಿಕೆಟಿಗಾಗಿ ಅರ್ಜಿ ಸಲ್ಲಿಕೆಯಾದ ಕ್ಷೇತ್ರ ಮಂಗಳೂರು ಉತ್ತರ. ಹನ್ನೊಂದು ಜನ ಟಿಕೆಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಮೊಹಿಯುದ್ದೀನ್ ಬಾವ, ಉದ್ಯಮಿ ಇನಾಯತ್ ಆಲಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ, ಕವಿತಾ ಸನಿಲ್, ಅಲ್ತಾಫ್ ಸುರತ್ಕಲ್, ಲುಕ್ಮಾನ್ ಬಂಟ್ವಾಳ ಕೂಡ ಸೇರಿದ್ದಾರೆ. ಇವರಲ್ಲಿ ಮೊಹಿಯುದ್ದೀನ್ ಮತ್ತು ಇನಾಯತ್ ನಡುವೆ ಟಿಕೆಟಿಗಾಗಿ ತೀವ್ರ ಪೈಪೋಟಿಯಿದೆ.
ಬಿಜೆಪಿಯಲ್ಲಿ ಹಲವು ಟಿಕೆಟ್ ಆಕಾಂಕ್ಷಿಗಳು
ಬಿಜೆಪಿಯಲ್ಲಿ ಹಲವು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಅದರಲ್ಲಿ ಭರತ್ ಶೆಟ್ಟಿ, ಮಾಜಿ ಸಚಿವ ಕೃಷ್ಣ ಪಾಲೆಮಾರ್ ಕೂಡಾ ಸೇರಿದ್ದಾರೆ. ಸಂಘ ಪರಿವಾರದ ಮುಖಂಡರು ಯಾರಿಗೆ ಸೂಚಿಸುತ್ತಾರೋ ಅವರಿಗೆ ಟಿಕೆಟ್ ಎನ್ನುವುದು ಬಿಜೆಪಿಯಲ್ಲಿ ಎಲ್ಲರಿಗೂ ಗೊತ್ತಿರುವ ವಿಚಾರ. ಇದರ ಜೊತೆಗೆ, ಬಿಲ್ಲವ ಮುಖಂಡ ಸತ್ಯಜಿತ್ ಸುರತ್ಕಲ್ ಅವರ ಹೆಸರೂ ಕೇಳಿ ಬರುತ್ತಿದೆ. ಭರತ್ ಶೆಟ್ಟಿಯವರ ಹೆಸರು ಮುಂಬರುವ ಲೋಕಸಭಾ ಚುನಾವಣೆಗೂ ಚಾಲ್ತಿಯಲ್ಲಿದೆ. ಹಾಗಾಗಿ, ಇದು ಕುತೂಹಲಕ್ಕೆ ಕಾರಣವಾಗಿದೆ.

ದಕ್ಷಿಣದಲ್ಲಿ ಬಿಲ್ಲವರಿಗೆ, ಉತ್ತರದಲ್ಲಿ ಬಂಟ್ಸ್ ಸಮುದಾಯದವರಿಗೆ ಟಿಕೆಟ್?
ಕಾಂಗ್ರೆಸ್ ಈ ಬಾರಿ ಹೊಸ ಪ್ರಯೋಗಕ್ಕೆ ಮುಂದಾಗುವ ಸಾಧ್ಯತೆಯ ಬಗ್ಗೆ ಕೇಳಿ ಬರುತ್ತಿದೆ. ಮಂಗಳೂರು ದಕ್ಷಿಣದಲ್ಲಿ ಬಿಲ್ಲವರಿಗೆ, ಉತ್ತರದಲ್ಲಿ ಬಂಟ್ಸ್ ಸಮುದಾಯದ ನಾಯಕರಿಗೆ ಟಿಕೆಟ್ ನೀಡುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಮುಸ್ಲಿಂ ಟಿಕೆಟ್ ಆಕಾಂಕ್ಷಿಗಳ ಮನವೊಲಿಸಿ, ಹಿಂದೂ ಸಮುದಾಯದವರಿಗೆ ಟಿಕೆಟ್ ನೀಡಿ, ಬಿಜೆಪಿಗೆ ಸಡ್ಡು ಹೊಡೆಯುವ ತಂತ್ರಗಾರಿಕೆ ಡಿ.ಕೆ.ಶಿವಕುಮಾರ್ ಪ್ರಯೋಗಿಸುವ ಸಾಧ್ಯತೆಯ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.
ಕ್ಷೇತ್ರಾಭಿವೃದ್ದಿಯ ಜೊತೆಗೆ ಹಿಂದುತ್ವವೂ ಪ್ರಮುಖ ವಿಷಯ
ಕ್ಷೇತ್ರಾಭಿವೃದ್ದಿಯ ಜೊತೆಗೆ ಹಿಂದುತ್ವವೂ ಪ್ರಮುಖ ವಿಷಯವಾಗಿರುವುದರಿಂದ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಕೂಡಾ ಕೋಲ, ನೇಮ, ಬ್ರಹ್ಮಕಲಶದಲ್ಲಿ ಭಾಗವಹಿಸುತ್ತಿದ್ದಾರೆ. ಬಿಲ್ಲವರು, ಬಂಟರು ಮತ್ತು ಅಲ್ಪಸಂಖ್ಯಾತರ ಮತಗಳು ಇಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಎಸ್ಡಿಪಿಐ ಕೂಡಾ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವುದರಿಂದ ಅದು ನೇರವಾಗಿ ಕಾಂಗ್ರೆಸ್ ಮತಬ್ಯಾಂಕಿಗೆ ಕೈಯಿಡುವ ಸಾಧ್ಯತೆಯಿಲ್ಲದಿಲ್ಲ. ಒಟ್ಟಿನಲ್ಲಿ ಸುರತ್ಕಲ್ ಟೋಲ್ ಗೇಟ್, ಹಿಂದುತ್ವದ ವಿಚಾರವೇ ಇಲ್ಲಿ ನಿರ್ಣಾಯಕ.
ಕ್ಷೇತ್ರದ ಮತದಾರರ ಸಂಖ್ಯೆ (2018ರ ಚುನಾವಣಾ ಆಯೋಗದ ಅಂಕಿಅಂಶ ಪ್ರಕಾರ)
ಪುರುಷರು: 1,14,723
ಮಹಿಳೆಯರು: 1,20,126
ಇತರರು: 07
ಒಟ್ಟು ಮತದಾರರು: 2,34,856












Click it and Unblock the Notifications