ಮೌನಕ್ಕೆ ಶರಣಾದ ಜನಾರ್ಧನ ಪೂಜಾರಿ: ಇದು ರಾಜಕೀಯ ನಿವೃತ್ತಿ ಸೂಚನೆಯೇ?
Recommended Video

ಮಂಗಳೂರು, ಆಗಸ್ಟ್ 06: ಕರಾವಳಿಯ ಫೈರ್ ಬ್ರಾಂಡ್, ಕಾಂಗ್ರೆಸ್ ನ ಹಿರಿಯ ನಾಯಕ, ನೇರ ನಿಷ್ಠೂರ ನುಡಿಯ ಜನಾರ್ಧನ ಪೂಜಾರಿ ಸದ್ದಿಲ್ಲದೇ ರಾಜಕೀಯ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದಾರೆಯೇ? ಎಂಬ ಅನುಮಾನ ಕರಾವಳಿಯ ರಾಜಕೀಯ ವಲಯದಲ್ಲಿ ಮೂಡಲಾರಂಭಿಸಿದೆ.
ಈ ಕುರಿತು ಗಂಭೀರ ಚರ್ಚೆಗಳು ಕೂಡ ಆರಂಭವಾಗಿವೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಬ್ಬರಿಸಿದ್ದ ಜನಾರ್ಧನ ಪೂಜಾರಿ ಈಗ ಸೈಲೆಂಟ್ ಆಗಿದ್ದಾರೆ.
ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಡವಿದಾಗಲೆಲ್ಲಾ ಪೂಜಾರಿ ಸಿದ್ದರಾಮಯ್ಯ ವಿರುದ್ಧ ಮಾತಿನ ಚಾಟಿ ಏಟು ಬೀಸುತ್ತಿದ್ದರು. ಇದು ಕಾಂಗ್ರೆಸ್ ಮುಖಂಡರಿಗೆ ಇರಿಸುಮುರಿಸು ಉಂಟುಮಾಡಿತ್ತು.
ತನ್ನ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದ್ದ ಪೂಜಾರಿ ಅವರ ಮಾತು ಸತ್ಯವಾಗಿದೆ . ತಮ್ಮ ಮಾತಿಗೆ ಬೆಲೆ ಕೊಡದೇ ರಾಜ್ಯ ಕಾಂಗ್ರೆಸ್ ಮುಖಂಡರು ಅವಮಾನಿಸಿದ್ದಾರೆ ಎನ್ನುವ ದುಗುಡ ಅವರಲ್ಲಿ ಮನೆ ಮಾಡಿದೆ.

ದೂರ ಉಳಿಯುವ ಮುನ್ಸೂಚನೆ
ಕಳೆದ ಬಾರಿ ಮಂಗಳೂರಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರ ಎದುರು ಕಣ್ಣಿರು ಸುರಿಸಿ ತಮ್ಮ ವೇದನೆ, ತಮಗಾಗುತ್ತಿರುವ ಅವಮಾನಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಪೂಜಾರಿ, ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ, ಸರ್ಕಾರದ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಜೊತೆಗೆ ಅವರ ಕಾರ್ಯವೈಖರಿಯನ್ನು ಸಾಕಷ್ಟು ಬಾರಿ ಖಂಡಿಸಿದ್ದ ಜನಾರ್ಧನ ಪೂಜಾರಿ ಇದೀಗ ರಾಜಕಾರಣದಿಂದ ದೂರ ಉಳಿಯುವ ಮುನ್ಸೂಚನೆ ನೀಡಿದ್ದಾರೆ.

5 ಬಾರಿ ಸೋಲು
ಕಳೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜನಾರ್ಧನ ಪೂಜಾರಿ ಭಾರೀ ಹಿನ್ನಡೆ ಅನುಭವಿಸಿದ್ದರು. ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಎದುರು 1.43 ಲಕ್ಷಕ್ಕೂ ಮೀರಿ ಮತಗಳ ಅಂತರದಿಂದ ಸೋಲನುಭವಿಸಿದ್ದರು.
ಈ ಕ್ಷೇತ್ರದಿಂದ 1977 ರಿಂದ 1989 ರ ವರೆಗೆ ಸತತ 4 ಬಾರಿ ಗೆಲುವು ಸಾಧಿಸಿದ್ದ ಪೂಜಾರಿ, ನಂತರ 5 ಬಾರಿ ಈ ಕ್ಷೇತ್ರದಿಂದ ಸೋಲನುಭವಿಸಿದ್ದಾರೆ.

ಹೊಸ ಆಭ್ಯರ್ಥಿಯ ಹುಡುಕಾಟ
ಈ ಬಾರಿ ಪೂಜಾರಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸದಿರಲು ನಿರ್ಧರಿಸಿದ್ದು, ಹೊಸ ಆಭ್ಯರ್ಥಿಯ ಹುಡುಕಾಟ ಆರಂಭವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ಮಾಜಿ ಸಚಿವ ರಮಾನಾಥ್ ರೈ ಭಾರೀ ಕಸರತ್ತು ನಡೆಸುತ್ತಿದ್ದಾರೆ.
ಈ ನಡುವೆ ಯುವ ಕಾಂಗ್ರೆಸ್ ಮುಖಂಡ ಹಾಗು ಡಿಕೆ ಶಿವಕುಮಾರ್ ಆಪ್ತ ಮಿಥುನ್ ರೈ ತನ್ನ ಪ್ರಭಾವ ಬಳಸಿ ಟಿಕೆಟ್ ಗಿಟ್ಟಿಸಲು ಶತಪ್ರಯತ್ನ ನಡೆಸುತ್ತಿದ್ದರೆ ಮತ್ತೊಂದೆಡೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ತಮ್ಮ ಅಲ್ಪಸಂಖ್ಯಾತ ಎನ್ನುವ ಟ್ರಂಪ್ ಕಾರ್ಡ್ ಬಳಸಿ ಟಿಕೆಟ್ ಪಡೆಯುವ ತವಕದಲ್ಲಿದ್ದಾರೆ.

ಅನಾರೋಗ್ಯ, ವಯಸ್ಸಿನ ಕಾರಣ
ಟಿಕೆಟ್ ಗಾಗಿ ನಡೆಯುತ್ತಿರುವ ಪೈಪೋಟಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಅನ್ನು ಕಟ್ಟಿ ಬೆಳೆಸಿದ್ದ ತಮ್ಮನ್ನು ಕಾಂಗ್ರೆಸ್ ನಾಯಕರು ಯಾವುದೇ ಸಭೆ, ಸಮಾರಂಭಗಳಿಗೆ ಆಹ್ವಾನಿಸದೇ ನಿರ್ಲಕ್ಷಿಸುತ್ತಿರುವ ರೀತಿ, ಕಾಂಗ್ರೆಸ್ ಮುಖಂಡರ ಚುಚ್ಚು ಮಾತುಗಳು, ಅನಾರೋಗ್ಯ ಹಾಗೂ ವಯಸ್ಸಿನ ಕಾರಣ ಕೊಟ್ಟು ರಾಜಕಾರಣದಿಂದ ದೂರ ಸರಿಯಲು ಜನಾರ್ಧನ ಪೂಜಾರಿ ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications