ಸುರತ್ಕಲ್ನಲ್ಲಿ ಜಲೀಲ್ ಹತ್ಯೆ ಪ್ರಕರಣ; ಅಂಗಡಿಗಳನ್ನು ಬಂದ್ ಮಾಡಿಸುತ್ತಿರುವ ಪೊಲೀಸರು, ವ್ಯಾಪಾರಿಗಳು ಕಂಗಾಲು
ಮಂಗಳೂರು, ಡಿಸೆಂಬರ್, 27: ಸುರತ್ಕಲ್ನ ಕಾಟಿಪಳ್ಳದಲ್ಲಿ ಜಲೀಲ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾವೂರು, ಬಜಪೆ, ಸುರತ್ಕಲ್, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 29 ರವರೆಗೆ ನಿಷೇಧಾಜ್ಞೆ ಮತ್ತು ಮದ್ಯಮಾರಾಟ ನಿಷೇಧ ಮಾಡಲಾಗಿದೆ. ಯಾರೋ ಮಾಡಿದ ಕೋಮು ದ್ವೇಷಕ್ಕೆ ಸಾಮಾನ್ಯ ಜನರು ಶಿಕ್ಷೆ ಅನುಭವಿಸುಂತಾಗಿದೆ.
ಅಂಗಡಿ ವ್ಯಾಪಾರಿ ಜಲೀಲ್ ಹತ್ಯೆಯ ಬಳಿಕ ಸುರತ್ಕಲ್ ಸುತ್ತಮುತ್ತಲಿನ ಪ್ರದೇಶ ಬೂದಿ ಮುಚ್ಚಿದ ಕೆಂಡದಂತಾಗಿದೆ. ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಪೊಲೀಸರು ತಪಾಸಣೆಯನ್ನು ಮಾಡುತ್ತಿದ್ದಾರೆ. ಕತ್ತಲು ಆವರಿಸುತ್ತಿದ್ದಂತೆಯೇ ಸುರತ್ಕಲ್ ಜಂಕ್ಷನ್ನಲ್ಲಿ ಪೊಲೀಸರು ರೋಡ್ ಪರೇಡ್ ನಡೆಸಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದಾರೆ.

ವ್ಯಾಪಾರಸ್ಥರಿಗೂ ತಟ್ಟಿದ ಹತ್ಯೆಯ ಬಿಸಿ
ಕಳೆದ ಬಾರಿ ಫಾಝೀಲ್ ಹತ್ಯೆಯ ಸಂಧರ್ಭದಲ್ಲಿ ಸುರತ್ಕಲ್ ಜಂಕ್ಷನ್ ಬೂದಿಮುಚ್ಚಿದ ಕೆಂಡದಂತಾಗಿತ್ತು. ವರ್ತಕರಿಗೆ ಈ ಕೋಮುದ್ವೇಷ ಸಾಲವಾಗಿ ಪರಿಣಮಿಸಿದ್ದು, ವ್ಯಾಪಾರ, ವ್ಯವಹಾರ ಇಲ್ಲದೇ ಕಂಗಾಲಾಗಿದ್ಧಾರೆ. ಸಂಜೆ 6 ಗಂಟೆಯ ಸಂಧರ್ಭದಲ್ಲಿ ಅಂಗಡಿಗಳ ಮುಂದೆ ಹಾಜರಾಗುವ ಪೊಲೀಸರು, ಬಲವಂತಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದಾರೆ.

ಪೊಲೀಸರಿಂದ ಕಠಿಣ ನಿಯಮ, ವರ್ತಕರು ಹೇಳಿದ್ದೇನು?
ಪೊಲೀಸ್ ಕಠಿಣನಿಯಮದ ಬಗ್ಗೆ ಮಾತನಾಡಿದ ವರ್ತಕರೊಬ್ಬರು, ಸುರತ್ಕಲ್ ಪ್ರದೇಶ ಇತ್ತೇಚೆಗೆ ಕೋಮು ಸೂಕ್ಷ್ಮ ಪ್ರದೇಶವಾಗಿ ಮಾರ್ಪಾಟು ಆಗುತ್ತಿದ್ದು, ಇದರ ನೇರ ಪ್ರಭಾವ ವರ್ತಕರ ಮೇಲೆ ಆಗುತ್ತಿದೆ. ಜನಸಾಮಾನ್ಯರ ಮೇಲೂ ಪರಿಣಾಮ ಬೀರುತ್ತಿದೆ. ಕೊರೊನಾ ಬಳಿಕ ಆರಂಭಿಸಿದ ಹೊಸ ಉದ್ದಿಮೆ ಲಾಭದಾಯಕ ಆಗುತ್ತಿದೆ ಎಂದಾಗಲೇ ಫಾಝೀಲ್ ಹತ್ಯೆಯಾಯಿತು. ಇದೀಗ ಮತ್ತೊಂದು ಹತ್ಯೆಯಾಗಿದೆ. ಕೋಮುದ್ವೇಷ ಹೊಂದಿದ ಯುವಕರು ಮಾಡುವ ದುಷ್ಕೃತ್ಯದಿಂದ ನಮ್ಮ ಹೊಟ್ಟೆಗೆ ತಣ್ಣೀರುಬಟ್ಟೆಯೇ ಗತಿಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ನಿಷೇಧಾಜ್ಞೆ ಆದೇಶದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ನಿಯಮ ಇಲ್ಲ. ಆದರೂ ಪೊಲೀಸರು ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಇದರಿಂದ ವ್ಯಾಪಾರವೇ ಇಲ್ಲದಂತಾಗಿದೆ ಎಂದು ವರ್ತಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications