ಕಳಂಕರಹಿತ ಸರಕಾರಕ್ಕೆ ಮಸಿ ಬಳಿಯಲು ಕೇಂದ್ರ ಯತ್ನ: ಖಾದರ್
ಮಂಗಳೂರು, ಆಗಸ್ಟ್ 3: "ಇದು ಕೇಂದ್ರ ಸರಕಾರದ ಸೇಡಿನ ರಾಜಕಾರಣ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಕಳಂಕರಹಿತ ಆಡಳಿತ ನೀಡಿದ್ದಾರೆ. ಇದಕ್ಕೆ ಮಸಿ ಬಳಿಯುವ ಉದ್ದೇಶದಿಂದ ಆದಾಯ ತೆರಿಗೆ ಇಲಾಖೆಯಂಥ ಸಂಸ್ಥೆಗಳನ್ನು ಬಳಸಿಕೊಂಡು ದಾಳಿ ಮಾಡಲಾಗಿದೆ" ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಸಚಿವ ಡಿಕೆ ಶಿವಕುಮಾರ್ ಮೇಲಿನ ಆದಾಯ ತೆರಿಗೆ ದಾಳಿ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಯು.ಟಿ.ಖಾದರ್ ಪ್ರತಿಕ್ರಿಯೆ ನೀಡಿ, ಗುಜರಾತ್ ಶಾಸಕರು ರಕ್ಷಣೆಗಾಗಿ ರಾಜ್ಯಕ್ಕೆ ಆಗಮಿಸಿದ್ದಾರೆ. ಇದನ್ನೇ ನೆಪವಾಗಿಸಿ ಅಧಿಕಾರ ದುರುಪಯೋಗ ಮಾಡಿಕೊಂಡು ದಾಳಿ ನಡೆಸಲಾಗಿದೆ ಎಂದರು.

ಭ್ರಷ್ಟಾಚಾರ ವಿರುದ್ಧ ಕಾಳಜಿ ಇದ್ದರೆ ಕೇಂದ್ರ ಸರಕಾರ ಲೋಕಪಾಲ್ ಮಸೂದೆ ಜಾರಿ ಮಾಡಲಿ. ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಉಪವಾಸ ಕೂತವರು. ಈಗ ಯಾಕೆ ಲೋಕಪಾಲ್ ಮಸೂದೆ ಬಗ್ಗೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ಲೋಕಪಾಲ್ ಜಾರಿಗೆ ತಂದು ಕೇಂದ್ರ ಸರಕಾರ ಪ್ರಾಮಾಣಿಕತೆ ಮೆರೆಯಲಿ. ಈಗ ನಡೆದಿರುವ ಆದಾಯ ತೆರಿಗೆ ದಾಳಿಯಿಂದಾಗಿ ಕಾಂಗ್ರೆಸ್ ಭಯಗೊಂಡಿಲ್ಲ. ಸವಾಲನ್ನು ನಿಭಾಯಿಸಲು ಡಿಕೆ ಶಿವಕುಮಾರ್ ಸಮರ್ಥರಿದ್ದಾರೆ. ಆದರೆ ಸೇಡಿನ ರಾಜಕಾರಣಕ್ಕೆ ಕಾಂಗ್ರೆಸ್ ವಿರೋಧವಿದೆ. ಮುಂದಿನ ಹೋರಾಟದ ಬಗ್ಗೆ ಪಕ್ಷ ತೀರ್ಮಾನ ಕೈಗತ್ತಿಕೊಳ್ಳಲಿದೆ ಎಂದರು.
ಇನ್ನು ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾ ನಿಗೂಢ ಸಾವು ಪ್ರಕರಣ ತನಿಖೆ ಸಮರ್ಪಕವಾಗಿ ನಡೆಯುತ್ತಿದೆ. ತನಿಖೆಯಿಂದ ಹೆತ್ತವರ ಸಂಶಯ ನಿವಾರಿಸುವ ನಂಬಿಕೆಯಿದೆ. ಆದರೆ ಘಟನೆ ಬಗ್ಗೆ ಗೊಂದಲ ಸೃಷ್ಟಿಸುವ ಪ್ರಯತ್ನ ಬೇಡ. ಸಂಸ್ಥೆಗೆ ಕೆಟ್ಟ ಹೆಸರು ತರುವುದು ಬೇಡ ಎಂದರು.












Click it and Unblock the Notifications