ಕಲ್ಲಡ್ಕ ಗಲಭೆಯಲ್ಲಿ ಎಸ್ಡಿಪಿಐ-ರೈ-ಬಿಜೆಪಿ ವೋಟ್ ಬ್ಯಾಂಕ್ ರಾಜಕೀಯ
ಮಂಗಳೂರು, ಜೂನ್ 21: ಕಾಂಗ್ರೆಸ್ ಭದ್ರ ಕೋಟೆ ಬಂಟ್ವಾಳ ವಿಧಾನಸಭೆ ಕ್ಷೇತ್ರದ ಮುಸ್ಲಿಂ ಮತಗಳ ಮೇಲೆ ಎಸ್ಡಿಪಿಐ ಕಣ್ಣಿಟ್ಟಿದೆ. ಇದೇ ವೇಳೆ ತನ್ನ ಮತಗಳನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಸ್ಕೆಚ್ ಹಾಕಿದೆ. ಇವೆರಡರ ಹೋರಾಟವನ್ನು ಖುಷಿಯಿಂದ ಮತ್ತು ಕುತೂಹಲದಿಂದ ನೋಡುತ್ತಿರುವ ಬಿಜೆಪಿ ತಮ್ಮ ಹಿಂದೂ ಮತಗಳ ಠೇವಣಿ ನವೀಕರಣಕ್ಕೆ ಕಾಯುತ್ತಿದೆ.
ಪರಿಣಾಮ ಕಲ್ಲಡ್ಕದಲ್ಲಿ ಎಸೆಯುವ ಒಂದೊಂದು ಕಲ್ಲುಗಳಲ್ಲೂ ಸಿಗುವ ಲಾಭಗಳ ಕುರಿತು ಪಕ್ಷಗಳು ಒಳಗೊಳಗೆ ಖುಷಿಯಿಂದ ಲೆಕ್ಕ ಹಾಕುತ್ತಿವೆ.
ಪ್ರಭಾಕರ ಭಟ್ ವಿರುದ್ಧ ಕೇಸ್ ಜಡಿದು ಬಂಧಿಸಿ, ರೈ ವಿಡಿಯೋ ವೈರಲ್
ಬಂಟ್ವಾಳದಲ್ಲಿ ಬಿಜೆಪಿ ಮತ್ತು ಎಸ್ಡಿಪಿಐ ಪಕ್ಷಗಳ ಮೊದಲ ಗುರಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ. ಪರಿಣಾಮ ರೈ ವಿರುದ್ಧ ಅಭಿಯಾನಗಳು ಆರಂಭವಾಗಿವೆ. ಅವರನ್ನು ಗಾಳಕ್ಕೆ ಬೀಳಿಸಲು ಎಸ್ಡಿಪಿಐ, ಬಿಜೆಪಿ ಕಟಿಬದ್ಧವಾಗಿವೆ.
ಮುಸ್ಲಿಮರ ಮತ ಬ್ಯಾಂಕ್ ಭದ್ರವಾಗಿರುವವರೆಗೆ ಉಸ್ತುವಾರಿ ಸಚಿವ ರಮಾನಾಥ ರೈ ಅವರನ್ನು ಅಲುಗಾಡಿಸುವಂತಿಲ್ಲ. ಬಂಟ್ವಾಳದಲ್ಲಿ ಮುಸ್ಲಿಮರ ಸಂಖ್ಯೆಯೂ ಹೆಚ್ಚು. ಹೀಗಾಗಿ ಎಸ್ ಡಿಪಿಐ ಒಂದಷ್ಟು ಮತ ಪಡೆಯಬಹುದಾದ ಕ್ಷೇತ್ರಗಳಲ್ಲಿ ಬಂಟ್ವಾಳ ಮೊದಲ ಸ್ಥಾನದಲ್ಲಿದೆ. ಮುಸ್ಲಿಂ ಮತ್ತು ದಲಿತ ಸಮೀಕರಣ ನಡೆದರೆ ಇಲ್ಲಿ ಗೆಲುವಿನ ಸಮೀಪ ಬರಬಹುದು ಎನ್ನುವುದು ಎಸ್ಡಿಪಿಐ ಲೆಕ್ಕಾಚಾರ.
ರೈ ವಜಾಗೇ ಸಹಿ ಸಂಗ್ರಹ ಅಭಿಯಾನ
ಮೇಲಿನ ಎಲ್ಲಾ ಕಾರಣಗಳಿಗಾಗಿ ಇದೀಗ ಸಚಿವ ರೈ ವಿರುದ್ಧ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ನೊಂದ ಮುಸ್ಲಿಮರ ಹೆಸರಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ.
ರಮಾನಾಥ ರೈ ವಿರುದ್ಧ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ
ರಮಾನಾಥ ರೈ ವಜಾಕ್ಕೆ ನಿರ್ಣಯ
ಇದೇ ವೇಳೆ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾಾನ್ ಅಧ್ಯಕ್ಷತೆಯಲ್ಲಿ ಬೆಂಗಳೂರಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸಚಿವ ರೈ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ನಿರ್ಣಯ ಮಂಡಿಸಿದೆ. ಜತೆಗೆ ಎಸ್ ಡಿಪಿಐ ಅಭ್ಯರ್ಥಿಗಳನ್ನು ಗೆಲ್ಲಿಸುವ ಬಗ್ಗೆ ಪಣ ತೊಟ್ಟಿದ್ದಾರೆ.
ಬಂಟ್ವಾಳದಲ್ಲಿ 50 ಸಾವಿರ ಮುಸ್ಲಿಮರ ಮತಗಳಿವೆ; ಇದು ನಿರ್ಣಾಯಕ. ಕಳೆದ ಬಾರಿ ಎಸ್ಡಿಪಿಐ ಅಭ್ಯರ್ಥಿ ಇಬ್ರಾಹಿಂ ಅವರಿಗೆ 7 ಸಾವಿರ ಮತಗಳು ಬಿದ್ದಿವೆ. ಇದರಲ್ಲಿ 2 ಸಾವಿರ ಜೆಡಿಎಸ್ ಮತ್ತುಳಿದ 5 ಸಾವಿರ ಮುಸ್ಲಿಮರ ಮತಗಳು ಎನ್ನುವುದನ್ನು ಎದುರಾಳಿಗಳೂ ಒಪ್ಪುತ್ತಾರೆ.
ರೈ-ಮುಸ್ಲಿಂ ಸಖ್ಯ
ಆದರೆ ಮುಸ್ಲಿಂ ಮುಖಂಡರು ಬಹುತೇಕ ರೈಗಳ ಜತೆಯಲ್ಲಿಯೇ ಇದ್ದಾರೆ. ಕೆಲವು ಯುವಜನರು ಮಾತ್ರ ಎಸ್ಡಿಪಿಐ ಜತೆಗಿದ್ದಾರೆ. ಸಮುದಾಯದ ವಿಚಾರ ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿರುವ ಎಸ್ಡಿಪಿಐ ರೈ ಎಡವುದನ್ನೇ ಸದಾ ಕಾಯುತ್ತಿದೆ. ಅಥವಾ ಅವರು ಎಡವುವಂತೆ ಮಾಡಲು ಬಲೆ ಬೀಸುತ್ತಿದೆ.
ಎಸ್ಡಿಪಿಐ ಪ್ರಬಲವಾಗುತ್ತಿರುವುದರಿಂದ ಬಂಟ್ವಾಳದಲ್ಲಿ ಕೋಮು ಗಲಭೆ ಆದರೆ ಇದರಿಂದ ಕಾಂಗ್ರೆಸ್ಗೆ ಲಾಭ ಖಂಡಿತಾ ಇಲ್ಲ. ಇಲ್ಲಿ ಲಾಭ ಇರುವುದು ಬಿಜೆಪಿ ಮತ್ತು ಎಸ್ಡಿಪಿಐಗೆ. ಹೀಗಾಗಿ ರೈಗಳು ಶಾಂತಿ ಕಾಪಾಡಲು ಹರಸಾಹಸ ಪಡುತ್ತಿದ್ದಾರೆ . ಗಲಾಟೆ ಆದರೂ ನಷ್ಟ, ಗಲಾಟೆ ನಿಯಂತ್ರಿಸಲು ಪೊಲೀಸ್ ಬಲ ಪ್ರಯೋಗಿಸಿದರೂ ದೌರ್ಜನ್ಯದ ಅಪವಾದ ಸರಕಾರವೇ ಹೊರಬೇಕು ಹೀಗಾಗಿ ಡಬ್ಬಲ್ ನಷ್ಟ ಆಡಳಿತ ಪಕ್ಷಕ್ಕೆ. ಅದರಲ್ಲೂ ಉಸ್ತುವಾರಿ ಸಚಿವರ ರಮಾನಾಥ ರೈಗಳಿಗೆ.
ರಮಾನಾಥ ರೈ ವಿರುದ್ಧ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ
ಎಸ್ ಡಿ ಪಿ ಐ ಪಿತೂರಿ
"ರೈ ವಿರುದ್ಧ ಸಹಿ ಸಂಗ್ರಹ, ಆರೋಪ ಇತ್ಯಾದಿ ಎಲ್ಲ ಕೆಲಸ ಎಸ್ಡಿಪಿಐ ಪಕ್ಷದವರದ್ದು. ಅವರು ಆಸೆಯಿಂದ ಅಲ್ಲಿ ಈ ರೀತಿ ಪಿತೂರಿ ಮಾಡುತ್ತಿದ್ದಾರೆ. ಆದರೆ ಬಹುತೇಕ ಮುಸ್ಲಿಮರು ರಮಾನಾಥ ರೈ ಜತೆಗಿದ್ದಾರೆ. ಅವರಿಗೆ ಬಂಟ್ವಾಳದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಕಳೆದ ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ಅವರ ಅಭ್ಯರ್ಥಿ ಇಬ್ರಾಹಿಂ ಪಡೆದ ಮತಗಳು ಕೇವಲ 7 ಸಾವಿರ ಎನ್ನುವುದು ನೆನಪಿರಲಿ," ಎನ್ನುತ್ತಾರೆ ಬಂಟ್ವಾಳ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್.
ಇನ್ನೂ ಮುಸ್ಲಿಂ ಮತಗಳು ರೈ ಕೈಯಲ್ಲೇ ಇವೆ
ಒಟ್ಟಿನಲ್ಲಿ ಮುಸ್ಲಿಂ ಸಮುದಾಯವನ್ನು ಸಮಧಾನಪಡಿಸಲು ತಂತ್ರ ಹೂಡಿದ ರೈಗಳು ಪ್ರತಿಪಕ್ಷಗಳಿಗೆ, ಮಾಧ್ಯಮಗಳಿಗೆ ಆಹಾರವಾಗಿದ್ದಾರೆ. ಆದರೆ ರೈಗಳ ಆಹಾರವಾಗಿರುವ ಮುಸ್ಲಿಂ ಓಟ್ ಬ್ಯಾಂಕ್ ಸದ್ಯಕ್ಕೆ ರೈ ಕೈಯಲ್ಲಿಯೇ ಇದೆ.