''ಲಸಿಕೆ ವಿತರಣೆಯಲ್ಲಿ ಬಿಜೆಪಿಯಿಂದ ಅವ್ಯವಹಾರ'' - ಮಾಜಿ ಎಂಎಲ್ಸಿ ಐವನ್ ಡಿಸೋಜಾ ಆರೋಪ
ಮಂಗಳೂರು, ಮೇ, 29: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಗರದ ಕಾಂಗ್ರೆಸ್ ಕಚೇರಿಯಲ್ಲಿ ದ.ಕ ಕೋವಿಡ್-19 ಹೆಲ್ಪ್ಲೈನ್ ಸಭೆ ನಡೆಸಿದ್ದು, ಈ ಸಭೆಯಲ್ಲಿ ಹಲವು ತೀರ್ಮಾನಗಳನ್ನು ಕೈಗೊಂಡಿದೆ. ದ.ಕ ಕೋವಿಡ್ ಹೆಲ್ಪ್ಲೈನ್ನ ಸಂಚಾಲಕರಾದ ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಈ ಸಭೆಯ ನೇತೃತ್ವವನ್ನು ವಹಿಸಿದ್ದರು.
ಸಭೆಯಲ್ಲಿ ಲಸಿಕೆ ವಿತರಣೆಯಲ್ಲಿ ಆಗುವ ಅವ್ಯವಹಾರವನ್ನು ಸರಕಾರದ ಗಮನಕ್ಕೆ ತರಲು 31ರಂದು ಬೆಳಿಗ್ಗೆ 9ಗಂಟೆಯಿಂದ ಬಿಜೈ ಕಾಪಿಕಾಡ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಹೆಚ್ಚುವರಿ ಬಿಲ್ ವಸೂಲಿ ಬಗ್ಗೆ ಕ್ರಮ ಕೈಗೊಳ್ಳಲು, ವ್ಯಾಪಾರದ ಅವಧಿ ಬೆಳಿಗ್ಗೆ 6ರ ಬದಲು ಬೆಳಿಗ್ಗೆ 8ರಿಂದ 12ಗಂಟೆಯವರೆಗೆ ನೀಡುವಂತೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಮನವಿ ನೀಡಲು ತೀರ್ಮಾನಿಸಲಾಗಿದೆ.
ವ್ಯಾಕ್ಸಿನೇಷನ್ ವಿತರಣೆಯಲ್ಲಿ ವಿಫಲತೆಗೊಂಡಿರುವ ಆಡಳಿತ ವ್ಯವಸ್ಥೆ ಕೂಡಲೇ ಬದಲಾಯಿಸಬೇಕು ಅಲ್ಲದೇ, 100 ಡೋಸ್ ಕೊವಿಡ್ ಲಸಿಕೆಗೆ 600 ಜನಕ್ಕಿಂತ ಹೆಚ್ಚಿನ ಜನರು ಬರುತ್ತಿರುವ ಹಿನ್ನೆಲೆ ಈ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮನವಿ ಮಾಡಲು ಕೂಡಾ ನಿರ್ಧರಿಸಲಾಗಿದೆ.

ಇನ್ನು ಸಭೆಯ ಬಳಿಕ ಪತ್ರೀಕಾಗೋಷ್ಠಿ ನಡೆಸಿ ಮಾತನಾಡಿದ ಮಾಜಿ ವಿಧಾನಾಪರಿಷತ್ ಸದಸ್ಯ ಐವನ್ ಡಿಸೋಜಾ, "ಬಿಜೆಪಿ ಲಸಿಕೆ ವಿಚಾರದಲ್ಲಿ ಅವವ್ಯಹಾರ ನಡೆಸುತ್ತಿದೆ. 100 ಲಸಿಕೆ ಲಭ್ಯವಿದ್ದರೆ 70 ಸಾರ್ವಜನಿಕರಿಗೆ ಮತ್ತು 30 ಬಿಜೆಪಿ ಬೆಂಬಲಿಗರಿಗೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಬೆಳಗ್ಗಿನ ಜಾವ 4 ಗಂಟೆಗೆ 600 ರಷ್ಟು ಜನರು ಲಸಿಕೆ ಕೇಂದ್ರಕ್ಕೆ ಬಂದು ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ 530 ಜನರನ್ನು ಹಿಂದಕ್ಕೆ ಕಳುಹಿಸಿ, ಜನರು ಉಳಿದವರಿಗೆ ಲಸಿಕೆ ನೀಡಿ, ಎಲ್ಲರೂ ತೆರಳಿದ ಬಳಿಕ ಬಿಜೆಪಿ ಪ್ರತಿನಿಧಿಗಳು ತಮ್ಮ ಸಂಬಂಧಿಕರನ್ನು ಹಾಗೂ ಅವರಿಗೆ ತಿಳಿದಿರುವ ವ್ಯಕ್ತಿಗಳನ್ನು ಕರೆಸಿ ಲಸಿಕೆ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ಅಷ್ಟೇ ಅಲ್ಲದೇ ವಾಮಂಜೂರಿನಲ್ಲಿ 200 ರೂ.ಗೆ ಕೂಪನ್ ಮಾರಾಟ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರದ ವತಿಯಿಂದ ನೀಡುವ ಲಸಿಕೆಗೆ ಸೇವಾ ಶುಲ್ಕ 100 ಇದೆ. ಆದರೆ ಇಲ್ಲಿ 200 ಕ್ಕೆ ಕೂಪನ್ ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಸಭೆಯಲ್ಲಿ ಕಾರ್ಪೋರೇಟರ್ಗಳಾದ ಶಶಿಧರ್ ಹೆಗ್ಡೆ, ಅಬ್ದುಲ್ ರೌಫ್, ನವೀನ್ ಡಿ ಸೋಜ, ಮಾಜಿ ಕಾರ್ಪೋರೇಟರ್ಗಳಾದ ಕುಮಾರಿ ಅಪ್ಪಿಲತಾ, ಭಾಸ್ಕರ್ ರಾವ್, ಶುಬೋದಯ ಆಳ್ವ, ಕಾಂಗ್ರೆಸ್ ನಾಯಕರಾದ ವಿವೇಕ್ರಾಜ್ ಪೂಜಾರಿ, ಅಶಿತ್ ಪಿರೇರಾ, ಸಿ.ಎಂ.ಮುಸ್ತಫ, ಗಣೇಶ್, ಚಿತ್ತರಂಜನ್ ಶೆಟ್ಟಿ, ಆರೀಫ್ ಬಾವ, ಆನಂದ ಸೋನ್ಸ್, ದೀಕ್ಷಿತ್ ಅತ್ತಾವರ, ಜೇಮ್ಸ್ ಪ್ರವೀಣ್, ಯೂಸೂಫ್ ಉಚ್ಛಿಲ್, ಸುಂದರ ಪೂಜಾರಿ, ಇಮ್ರಾನ್, ಪದ್ಮಾಪ್ರಸಾದ್ ಜೈನ್, ಶೋಭಾ ಕೇಶವ್, ಫಯಾಜ್, ಯೋಗಿಶ್ ಕುಮಾರ್, ಸತೀಶ್ ಪೆಂಗಳ್, ಅಬಿಬುಲ್ಲ ಕಣ್ಣೂರು ಮುಂತಾದವರು ಉಪಸ್ಥಿತರಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications