International Yoga Day 2023: ಚೆನ್ನೈನಲ್ಲಿ ಶಿಷ್ಯರಿಗೆ ಯೋಗಾಸನ ಹೇಳಿಕೊಟ್ಟ ಪೇಜಾವರ ಶ್ರೀ
ಮಂಗಳೂರು, ಜೂನ್, 21: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಇಂದು ದೇಶಾದ್ಯಂತ ಯೋಗಾಸದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗೆಯೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹ ಬೆಳ್ಳಂಬೆಳಗ್ಗೆಯೇ ವಿಶೇಷ ರೀತಿಯಲ್ಲಿ ಈ ಆಚರಣೆಯನ್ನು ಮಾಡಲಾಗಿದೆ. ಅದೇ ರೀತಿ ತಮಿಳುನಾಡಿನ ಚೆನ್ನೈನಲ್ಲಿ ಪೇಜಾವರ ವಿಶ್ಚಪ್ರಸನ್ನ ತೀರ್ಥ ಸ್ವಾಮೀಜಿಯವರು ಯೋಗಾಸನ ಮಾಡವ ಮೂಲಕ ಗಮನ ಸೆಳೆದಿದ್ದಾರೆ.
ಚೆನ್ನೈನ ಮಠದಲ್ಲಿನ ದೇವರ ಗರ್ಭಗುಡಿಯ ಮುಂಭಾಗ ಪೇಜಾವರ ಶ್ರೀಗಳು ವಿವಿಧ ಯೋಗಾಸನದ ಭಂಗಿಗಳ ಪ್ರದರ್ಶನ ಮಾಡಿದ್ದಾರೆ. ಈ ವೇಳೆ ಶ್ರೀಗಳೊಂದಿಗೆ ಮಠದ ಶಿಷ್ಯರು ಕೂಡ ಯೋಗಾಸನವನ್ನು ಮಾಡಿದ್ದಾರೆ.

ಇನ್ನು ಪೇಜಾವರ ಶ್ರೀಗಳು ತಮಿಳುನಾಡಿನ ಚೆನ್ನೈ ಪ್ರವಾಸದಲ್ಲಿದ್ದರೂ ಕೂಡ ದೈನದಂದಿನ ಚಟುವಟಿಕೆಯನ್ನು ಮಾತ್ರ ಮರೆತಿಲ್ಲ ಎನ್ನುವುದು ಈ ಈ ಮೂಲಕವೇ ಗೊತ್ತಾಗುತ್ತದೆ. ಹೀಗೆ ಪೇಜಾವರ ಶ್ರೀಗಳು ಯೋಗಾಸನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಅಲ್ಲದೆ ಈ ಬಗ್ಗೆ ಮಾತನಾಡಿದ ಶ್ರೀಗಳು ಮಾನಸಿಕ ಮತ್ತು ಶಾರೀರಿಕ ಆರೋಗ್ಯವನ್ನು ಕಾಪಾಡಲು ಯೋಗ ಅತ್ಯವಶ್ಯಕವಾಗಿದೆ. ಎಲ್ಲರೂ ಸೂರ್ಯ ನಮಸ್ಕಾರ ಮಾಡುವುದನ್ನು ರೂಢಿಸಿಕೊಳ್ಳಿ ಎಂದು ಕರೆ ನೀಡಿದರು.
ಹಾಗೆಯೇ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಯೋಗ ದಿನಾಚರಣೆ ಆಚರಿಸಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆ ಹಾಗೂ ವಿಶ್ವ ಯೋಗ ದಿನಾಚರಣೆ ಸಮಿತಿಯಿಂದ ಯೋಗ ದಿನಾಚರಣೆ ಆಚರಿಸಲಾಗಿದ್ದು, ಈ ವೇಳೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸೇರಿದಂತೆ ನೂರಾರು ಜನ ಭಾಗಿಯಾಗಿದ್ದರು.
ಚಿಕ್ಕಮಗಳೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಚಿಕ್ಕಮಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಬೆಳಗ್ಗೆ 6 ಗಂಟೆಯಿಂದಲೇ 800ಕ್ಕೂ ಅಧಿಕ ಜನ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ. ಒಂದೂವರೆ ಗಂಟೆ ನಡೆದ ಯೋಗ ದಿನಾಚರಣೆಯಲ್ಲಿ ಹತ್ತಾರು ಯೋಗ ಭಂಗಿಗಗಳನ್ನು ಮಾಡಲಾಯಿತು.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಯೋಗದ ಮಹತ್ವದ ಬಗ್ಗೆಯ ಭಾಷಣವನ್ನು ಎಲ್.ಇ.ಡಿ.ಸ್ಕ್ರೀನ್ ಮೂಲಕ ಪ್ರಸಾರ ಮಾಡಲಾಯಿತು. ಇದೇ ವೇಳೆ ವೇದಿಕೆ ಕಾರ್ಯಕ್ರಮ ಕೂಡ ನಡೆದಿದ್ದು, ನಿತ್ಯ ಯೋಗ ಮಾಡುವುದರಿಂದ ಆರೋಗ್ಯ ಉತ್ತಮವಾಗಿರಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯೋಗದ ಮಹತ್ವವನ್ನು ಯೋಗದಲ್ಲಿ ಪಾಲ್ಗೊಂಡವರೆಗೆ ತಿಳಿಸಿದರು.
ಚಾಮರಾಜನಗರದಲ್ಲೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಚಾಮರಾಜನಗರ: ಚಾಮರಾಜನಗರದಲ್ಲಿ ನಡೆದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಗರದ ಖಾಸಗಿ ಭವನದಲ್ಲಿ ಜಿಲ್ಲಾಡಳಿತದಿಂದ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಐನೂರಕ್ಕೂ ಹೆಚ್ಚು ಜನರು ಸಾಮೂಹಿಕ ಯೋಗಾಭ್ಯಾಸ ಮಾಡಿದರು. ವಿದ್ಯಾರ್ಥಿಗಳ ಜೊತೆ ಯೋಗಪಟುಗಳು ಉತ್ಸಾಹದಿಂದ ಪಾಲ್ಗೊಂಡಿದ್ದು, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಹಾಗೂ ಎಡಿಸಿ ಕಾತ್ಯಾಯಿನಿದೇವಿ ವಿದ್ಯಾರ್ಥಿಗಳ ಜೊತೆ ಹತ್ತಾರು ಆಸನಗಳನ್ನು ಮಾಡಿದರು.
ಚಾಮರಾಜನಗರದಲ್ಲಿ ನಡೆದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಡಿಸಿ, ಎಡಿಸಿ ಹಾಗೂ ನಗರಸಭೆ ಆಯುಕ್ತರು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.












Click it and Unblock the Notifications