ಕುವೈತ್ನಿಂದ ಮಂಗಳೂರಿಗೆ ಬಂತು 40 ಮೆಟ್ರಿಕ್ ಟನ್ ಆಕ್ಸಿಜನ್
ಮಂಗಳೂರು, ಮೇ 11: ದೇಶದಲ್ಲಿ ತಲೆದೂರಿರುವ ಆಕ್ಸಿಜನ್ ಸಮಸ್ಯೆ ನೀಗಿಸಲು ಮತ್ತೆ ಗಲ್ಫ್ ರಾಷ್ಟ್ರಗಳು ಭಾರತದತ್ತ ಸಹಾಯಹಸ್ತ ಚಾಚಿವೆ. ಕುವೈತ್ನಿಂದ ನವ ಮಂಗಳೂರು ಬಂದರಿಗೆ ಮತ್ತೆ 40 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿದೆ.
ಭಾರತೀಯ ನೌಕಾ ಸೇನೆಯ ಐಎನ್ಎಸ್ ಕೊಲ್ಕತ್ತಾ ಯುದ್ಧ ನೌಕೆಯ ಮೂಲಕ ಆಕ್ಸಿಜನ್ ಮಂಗಳೂರು ಬಂದರನ್ನು ತಲುಪಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ, ಸರ್ಕಾರದ ಪರವಾಗಿ ಬರಮಾಡಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಬಹ್ರೇನ್ನಿಂದ 40 ಟನ್ ಆಕ್ಸಿಜನ್ ಮಂಗಳೂರಿಗೆ ಬಂದಿದ್ದು, ಈ ಆಕ್ಸಿಜನ್ ಅನ್ನು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಹತ್ತಿರದ ಜಿಲ್ಲೆಗಳಿಗೆ ರವಾನಿಸಲಾಗಿತ್ತು. ಈ ಬಾರಿ ಅಗತ್ಯವಿರುವ ಜಿಲ್ಲೆಗಳಿಗೆ ಈ ಆಕ್ಸಿಜನ್ ರವಾನಿಸಲು ಸರ್ಕಾರ ನಿರ್ಧಾರ ಮಾಡಿದೆ.

ಕುವೈತ್ನಿಂದ ಬಂದ ಐಎನ್ಎಸ್ ಕೊಲ್ಕತ್ತಾ ಯುದ್ಧ ನೌಕೆಯಲ್ಲಿ ಐಎಸ್ಒ ಅನಿಲ ಟ್ಯಾಂಕ್ ಸಹಿತ, 5 ಟನ್ ಆಕ್ಸಿಜನ್ ಸಿಲಿಂಡರ್, ಮತ್ತು 4 ಹೈ ಪ್ಲೋ ಆಕ್ಸಿಜನ್ ಕಂಟೈನರ್ ಒಳಗೊಂಡಿತ್ತು.
ಕಳೆದ ಬಾರಿ ಬಹ್ರೇನ್ನಿಂದ ಆಕ್ಸಿಜನ್ ತಂದ ಐಎನ್ಎಸ್ ತಲವಾರ್ ನೌಕೆಯ ಎದುರು ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಹಿತ ಬಿಜೆಪಿ ಶಾಸಕರು ಫೋಟೋ ತೆಗೆಸಿಕೊಂಡು ಇದು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಗೌರವದಿಂದ ಬಂದ ಆಕ್ಸಿಜನ್ ಎಂಬುವುದಾಗಿ ಹೇಳಿಕೊಂಡಿದ್ದರು.

ಈ ಹೇಳಿಕೆಗೆ ಕಾಂಗ್ರೆಸ್ ನಾಯಕರು ಟೀಕಾ ಪ್ರಹಾರ ನಡೆಸಿದ್ದರು. ರಾಜಕೀಯ ನಾಯಕರ ಕ್ರೆಡಿಟ್ ವಾರ್ ಗೆ ಜನರಿಂದ ಆಕ್ರೋಶವೂ ವ್ಯಕ್ತವಾಗಿತ್ತು.












Click it and Unblock the Notifications