ಮೂಲರಪಟ್ನ ಸೇತುವೆ ಕುಸಿತಕ್ಕೆ ಅಕ್ರಮ ಮರಳುಗಾರಿಕೆ ಕಾರಣ?
ಮಂಗಳೂರು, ಜೂನ್ 26: ಬಂಟ್ವಾಳ ತಾಲೂಕನ್ನು ಸಂಪರ್ಕಿಸುವ ಮೂಲರಪಟ್ನದ ಫಲ್ಗುಣಿ ಸೇತುವೆ ಕುಸಿಯುವುದಕ್ಕೆ ಅಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯೇ ಕಾರಣ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಇದರ ಜೊತೆಗೆ ಅಕ್ರಮ ಮರಳುಗಾರಿಕೆ ಮತ್ತು ಎಂ.ಆರ್.ಪಿ.ಎಲ್. ಪೈಪ್ ಲೈನ್ ಕಾಮಗಾರಿಯಿಂದಾಗಿ ಸೇತುವೆ ಶಿಥಿಲವಾಗುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು ಎಂದೂ ಸ್ಥಳೀಯರು ದೂರಿದ್ದಾರೆ.
ಎಂ.ಆರ್.ಪಿ.ಎಲ್.ನ ಪೈಪ್ ಲೈನ್ ಹಾಕುವುದಕ್ಕಾಗಿ ಸೇತುವೆ ಬಳಿಯಲ್ಲೇ ಡ್ರೆಜ್ಜಿಂಗ್ ಮಾಡಿದ್ದು ಇದರ ಬಗ್ಗೆ ಸ್ಥಳೀಯ ಪಂಚಾಯತ್ ಸದಸ್ಯರು ಮತ್ತು ಅಧಿಕಾರಿಗಳು ಮೌನವಾಗಿದ್ದರು. ಈಗ ಸೇತುವೆ ಕುಸಿದಿರುವುದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ನಡುವೆ ಸೇತುವೆ ಕುಸಿದ ಸಮೀಪದಲ್ಲೇ ಇರುವ ತೂಗು ಸೇತುವೆ ಮೂಲಕ ಸಾಗಲು ಎರಡು ಸರ್ವಿಸ್ ರಸ್ತೆ ನಿರ್ಮಿಸಲು ಕಾಮಗಾರಿ ನಡೆಸುತ್ತಿದ್ದ ಅಧಿಕಾರಿಗಳಿಗೆ ಸ್ಥಳೀಯರು ಘೇರಾವ್ ಹಾಕಿದ ಘಟನೆಯೂ ನಡೆದಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಲೇ ಸೇತುವೆ ಕುಸಿಯುವಂತಾಯ್ತು ಎಂದು ಅಧಿಕಾರಿಗಳನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.
ವಾರದ ಹಿಂದೆಯೇ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೇತುವೆ ದುಸ್ಥಿತಿ ಬಗ್ಗೆ ಮಾಹಿತಿ ನೀಡಲಾಗಿತ್ತು. ಈ ಸೇತುವೆ ಕುಸಿದು ಬೀಳುವ ಕೆಲವೇ ನಿಮಿಷಗಳ ಮೊದಲು ಎರಡು ಬಸ್ ಸೇತುವೆಯಿಂದ ಹಾದು ಹೋಗಿವೆ. ಒಂದು ವೇಳೆ ಬಸ್ ನೀರಿಗೆ ಬಿದ್ದಿದ್ದರೆ ನೂರಾರು ಜನ ತುಂಬಿ ಹರಿಯುವ ನದಿಯಲ್ಲಿ ಪ್ರಾಣ ಬಿಡಬೇಕಾಗಿತ್ತು.
ಜಿಲ್ಲಾಡಳಿತ, ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದೇ ಈ ಸ್ಥಿತಿಗೆ ಕಾರಣವೆಂದು ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.